ಹಂಪಿ, ಅಂಜನಾದ್ರಿ ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಡಿಜಿಪಿಗೆ ಪತ್ರ.
*ವಿದೇಶಿ ಪ್ರವಾಸಿಗರ ಮೇಲೆ ದೌರ್ಜನ್ಯ, ಹಣ ವಸೂಲಿ ದಂಧೆ ನಿಯಂತ್ರಿಸಲು ಆಗ್ರಹ.
ಕಿಷ್ಕಿಂಧವಾಣಿ
ಬೆಂಗಳೂರು:ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗೆ ಪ್ರವಾಸಕ್ಕೆ ಬರುವ ವಿದೇಶಿಯರಿಗೆ ದೌರ್ಜನ್ಯ, ಕಿರುಕುಳ, ಹಲ್ಲೆ, ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿರುವ ಕಿಡಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವಿದೇಶಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿಪಿರವರಿಗೆ ಪತ್ರ ಬರೆದಿದ್ದಾರೆ
ರಾಜ್ಯದ ವಿಶ್ವವಿಖ್ಯಾತ ಐತಿಹಾಸಿಕ ಹಂಪಿಯು ಭಾರತದ ಅತ್ಯಂತ ಪ್ರಸಿದ್ದ ಪುರಾತತ್ವ ಕೆಂದ್ರಗಳಲ್ಲಿ ಒಂದಾಗಿದ್ದು ಪ್ರತಿ ವರ್ಷ ದೇಶ ವಿದೇಶದಿಂದ ಲಕ್ಷಾಂತರ ಜನರು ಪ್ರವಾಸ ಕೈಗೊಳ್ಳುತ್ತಿದ್ದು ನಮ್ಮ ರಾಜ್ಯದ ಸಂಸ್ಕೃತಿ, ಸಂಪ್ರದಾಯ, ಇತಿಹಾಸ ಅಧ್ಯಯನ ಸೇರಿದಂತೆ ನೂತನವಾಗಿ ವಿವಾಹವಾದ ವಿದೇತಿ ಜೋಡಿಗಳು ಹಂಪಿ ಮತ್ತು ಕಿಷ್ಕಿಂಧಾ
ಅಂಜನಾದ್ರಿಯ ಪ್ರವಾಸಕ್ಕೆ ವಿದೇಶಿಗರು ಆಗಮಿಸುತ್ತಿದ್ದು ವಿಜಯನಗರ ಜಿಲ್ಲೆಯ ಹಂಪಿ, ಕಮಲಾಪೂರ, ಹೊಸಪೇಟೆಯ ವಿವಿಧ ಲಾಡ್ಜ್ ಸೇರಿದಂತೆ ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯ ದಂಡೆಯ ವಿರುಪಾಪುರ ಗಡ್ಡಿ,ಸಾಣಾಪುರ, ಬಸಾಪೂರ,ತಿರುಮಲಾಪೂರ,ಜಂಗ್ಲಿ ರೆಸಾರ್ಟ್ಗಳಲ್ಲಿ ಹಾಗೂ ಅಂಜನಾದ್ರಿ ಬೆಟ್ಟದ ಆಸುಪಾಸಿನ ಸಣಾಪೂರ ಕೆರೆ ವ್ಯಾಪ್ತಿಯ ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ತಂಗುತ್ತಿದ್ದು ಕೆಲವು ಪುಂಡರು ದುರುದ್ದೇಶದಿಂದ ವಿದೇಶಿಗರನ್ನೇ ಗುರಿಯಾಗಿಸಿಕೊಂಡು ಹಲ್ಲೆ, ಬೆದರಿಕೆ, ಅವಾಚ್ಯ ಶಬ್ದಗಳ ಬಳಸಿ ಕಿರುಕುಳ, ಹಣವಸೂಲಿ ಮಾಡುವ ಪ್ರವೃತ್ತಿಯಲ್ಲಿ ತೊಡಗಿರುವುದು ಕಂಡು ಬಂದಿರುತ್ತದೆ. ಕಳೆದ ವರ್ಷ ಮಾರ್ಚ್-06-2025 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಣಾಪೂರ ಕೆರೆ ಬಳಿ ವಾಯುವಿಹಾರದಲ್ಲಿದ್ದ ವಿದೇಶಿ ಮತ್ತು ಸ್ವದೇಶಿಗರಲ್ಲಿ ಹಣಕ್ಕೆ ಬೇಡಿಕೆಯಿಟ್ಟು ನೀಡಲು ಒಪ್ಪದಿದ್ದಾಗ ಇಸ್ರೇಲ್ ಮತ್ತು ಸ್ವದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಇನ್ನುಳಿದವರನ್ನು ತುಂಬಿದ ಕಾಲುವೆಗೆ ತಳ್ಳಿ ಕೊಲೆಗೈದ ಪ್ರಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ರಾಜ್ಯದ ಭದ್ರತೆ ಮತ್ತು ಸುರಕ್ಷತೆ, ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದ ಅಮಾನವೀಯ ಪ್ರಕರಣವು ಹಸಿಯಾಗಿರುವಾಗಲೇ ಅದೇ ಸಣಾಪೂರ ಗ್ರಾಮದಲ್ಲಿ ಫೆಬ್ರವರಿ 17 ರಂದು ವಿದೇಶಿ ಮತ್ತು ಸ್ಥಳೀಯನ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳೀಯ ಶಾಂತಕುಮಾರ್ ಎನ್ನುವ ವ್ಯಕ್ತಿಯ ಕಾಲಿಗೆ ಗಾಯವಾಗಿದ್ದು ಆತನನ್ನು ಇಸ್ರೇಲ್ನ ಜೀವಿತ್ ಎನ್ನುವ ವ್ಯಕ್ತಿಯು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದರೂ ಆತನನ್ನು ಕೆಲವರು ಹೆದರಿಸಿ ಬೆದರಿಸಿ 6 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದ್ದರಿಂದ ದೇಶದ ಮತ್ತು ರಾಜ್ಯದ ಭದ್ರತೆ ಮತ್ತು ಪ್ರವಾಸೋದ್ಯಮದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಪರಿಣಾಮ ಬೀರಲಿರುವುದರಿಂದ ಸದರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ ಪ್ರವಾಸಕ್ಕೆ ಬರುವ ವಿದೇಶಿಯರಿಗೆ ಸೂಕ್ತ ರಕ್ಷಣೆ ನೀಡಿ, ವಿದೇಶಿಯರು ತಂಗಲಿರುವ ಸದರಿ ಜಿಲ್ಲೆಗಳ ಎಲ್ಲಾ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ಗಳ ಮುಂಭಾಗದಲ್ಲಿ ಹಾಗೂ ಹಂಪಿಯ ಮತ್ತು ಅಂಜನಾದ್ರಿ ಬೆಟ್ಟ, ಸಣಾಪೂರ ಕೆರೆ ಸೇರಿದಂತೆ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಲ್ಲಿ, ಎಲ್ಲಾ ದೇವಸ್ಥಾನಗಳ ಮುಂಭಾಗದಲ್ಲಿ, ಮುಖ್ಯ ರಸ್ತೆಗಳಲ್ಲಿ ವಿದೇಶಿಯರಿಗೆ ಅರ್ಥವಾಗುವ ಭಾಷೆಯಲ್ಲಿ ಸ್ಪಷ್ಟವಾಗಿ ಕಾಣುವಂತೆ ಯಾವುದೇ ಸಮಸ್ಯೆಯಾದಲ್ಲಿ ತುರ್ತು ಸಹಾಯವಾಣಿ 112 ಮತ್ತು ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಸಂಪರ್ಕಿಸುವಂತೆ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆವುಳ್ಳ ಜಾಗೃತಿ ಫಲಕಗಳನ್ನು ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಡಿಜಿಪಿ ಹಾಗೂ ಬಳ್ಳಾರಿ ವಲಯದ ಐಜಿಪಿರವರಿಗೆ ಪತ್ರ ಬರೆದಿದ್ದಾರೆ









