Breaking News
ಹಂಪಿ, ಅಂಜನಾದ್ರಿ ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಡಿಜಿಪಿಗೆ ಪತ್ರ.

*ವಿದೇಶಿ ಪ್ರವಾಸಿಗರ ಮೇಲೆ ದೌರ್ಜನ್ಯ, ಹಣ ವಸೂಲಿ‌ ದಂಧೆ ನಿಯಂತ್ರಿಸಲು ಆಗ್ರಹ.

ಕಿಷ್ಕಿಂಧವಾಣಿ

ಬೆಂಗಳೂರು:ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗೆ ಪ್ರವಾಸಕ್ಕೆ ಬರುವ ವಿದೇಶಿಯರಿಗೆ ದೌರ್ಜನ್ಯ, ಕಿರುಕುಳ, ಹಲ್ಲೆ, ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿರುವ ಕಿಡಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವಿದೇಶಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿಪಿರವರಿಗೆ ಪತ್ರ ಬರೆದಿದ್ದಾರೆ

ರಾಜ್ಯದ ವಿಶ್ವವಿಖ್ಯಾತ ಐತಿಹಾಸಿಕ ಹಂಪಿಯು ಭಾರತದ ಅತ್ಯಂತ ಪ್ರಸಿದ್ದ ಪುರಾತತ್ವ ಕೆಂದ್ರಗಳಲ್ಲಿ ಒಂದಾಗಿದ್ದು ಪ್ರತಿ ವರ್ಷ ದೇಶ ವಿದೇಶದಿಂದ ಲಕ್ಷಾಂತರ ಜನರು ಪ್ರವಾಸ ಕೈಗೊಳ್ಳುತ್ತಿದ್ದು ನಮ್ಮ ರಾಜ್ಯದ ಸಂಸ್ಕೃತಿ, ಸಂಪ್ರದಾಯ, ಇತಿಹಾಸ ಅಧ್ಯಯನ ಸೇರಿದಂತೆ ನೂತನವಾಗಿ ವಿವಾಹವಾದ ವಿದೇತಿ ಜೋಡಿಗಳು ಹಂಪಿ ಮತ್ತು ಕಿಷ್ಕಿಂಧಾ

ಅಂಜನಾದ್ರಿಯ ಪ್ರವಾಸಕ್ಕೆ ವಿದೇಶಿಗರು ಆಗಮಿಸುತ್ತಿದ್ದು ವಿಜಯನಗರ ಜಿಲ್ಲೆಯ ಹಂಪಿ, ಕಮಲಾಪೂರ, ಹೊಸಪೇಟೆಯ ವಿವಿಧ ಲಾಡ್ಜ್ ಸೇರಿದಂತೆ ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯ ದಂಡೆಯ ವಿರುಪಾಪುರ ಗಡ್ಡಿ,ಸಾಣಾಪುರ, ಬಸಾಪೂರ,ತಿರುಮಲಾಪೂರ,ಜಂಗ್ಲಿ ರೆಸಾರ್ಟ್‌ಗಳಲ್ಲಿ ಹಾಗೂ ಅಂಜನಾದ್ರಿ ಬೆಟ್ಟದ ಆಸುಪಾಸಿನ ಸಣಾಪೂರ ಕೆರೆ ವ್ಯಾಪ್ತಿಯ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ತಂಗುತ್ತಿದ್ದು ಕೆಲವು ಪುಂಡರು ದುರುದ್ದೇಶದಿಂದ ವಿದೇಶಿಗರನ್ನೇ ಗುರಿಯಾಗಿಸಿಕೊಂಡು ಹಲ್ಲೆ, ಬೆದರಿಕೆ, ಅವಾಚ್ಯ ಶಬ್ದಗಳ ಬಳಸಿ ಕಿರುಕುಳ, ಹಣವಸೂಲಿ ಮಾಡುವ ಪ್ರವೃತ್ತಿಯಲ್ಲಿ ತೊಡಗಿರುವುದು ಕಂಡು ಬಂದಿರುತ್ತದೆ. ಕಳೆದ ವರ್ಷ ಮಾರ್ಚ್-06-2025 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಣಾಪೂರ ಕೆರೆ ಬಳಿ ವಾಯುವಿಹಾರದಲ್ಲಿದ್ದ ವಿದೇಶಿ ಮತ್ತು ಸ್ವದೇಶಿಗರಲ್ಲಿ ಹಣಕ್ಕೆ ಬೇಡಿಕೆಯಿಟ್ಟು ನೀಡಲು ಒಪ್ಪದಿದ್ದಾಗ ಇಸ್ರೇಲ್ ಮತ್ತು ಸ್ವದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಇನ್ನುಳಿದವರನ್ನು ತುಂಬಿದ ಕಾಲುವೆಗೆ ತಳ್ಳಿ ಕೊಲೆಗೈದ ಪ್ರಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ರಾಜ್ಯದ ಭದ್ರತೆ ಮತ್ತು ಸುರಕ್ಷತೆ, ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದ ಅಮಾನವೀಯ ಪ್ರಕರಣವು ಹಸಿಯಾಗಿರುವಾಗಲೇ ಅದೇ ಸಣಾಪೂರ ಗ್ರಾಮದಲ್ಲಿ ಫೆಬ್ರವರಿ 17 ರಂದು ವಿದೇಶಿ ಮತ್ತು ಸ್ಥಳೀಯನ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳೀಯ ಶಾಂತಕುಮಾ‌ರ್ ಎನ್ನುವ ವ್ಯಕ್ತಿಯ ಕಾಲಿಗೆ ಗಾಯವಾಗಿದ್ದು ಆತನನ್ನು ಇಸ್ರೇಲ್‌ನ ಜೀವಿತ್ ಎನ್ನುವ ವ್ಯಕ್ತಿಯು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದರೂ ಆತನನ್ನು ಕೆಲವರು ಹೆದರಿಸಿ ಬೆದರಿಸಿ 6 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.

ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದ್ದರಿಂದ ದೇಶದ ಮತ್ತು ರಾಜ್ಯದ ಭದ್ರತೆ ಮತ್ತು ಪ್ರವಾಸೋದ್ಯಮದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಪರಿಣಾಮ ಬೀರಲಿರುವುದರಿಂದ ಸದರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ ಪ್ರವಾಸಕ್ಕೆ ಬರುವ ವಿದೇಶಿಯರಿಗೆ ಸೂಕ್ತ ರಕ್ಷಣೆ ನೀಡಿ, ವಿದೇಶಿಯರು ತಂಗಲಿರುವ ಸದರಿ ಜಿಲ್ಲೆಗಳ ಎಲ್ಲಾ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳ ಮುಂಭಾಗದಲ್ಲಿ ಹಾಗೂ ಹಂಪಿಯ ಮತ್ತು ಅಂಜನಾದ್ರಿ ಬೆಟ್ಟ, ಸಣಾಪೂರ ಕೆರೆ ಸೇರಿದಂತೆ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಲ್ಲಿ, ಎಲ್ಲಾ ದೇವಸ್ಥಾನಗಳ ಮುಂಭಾಗದಲ್ಲಿ, ಮುಖ್ಯ ರಸ್ತೆಗಳಲ್ಲಿ ವಿದೇಶಿಯರಿಗೆ ಅರ್ಥವಾಗುವ ಭಾಷೆಯಲ್ಲಿ ಸ್ಪಷ್ಟವಾಗಿ ಕಾಣುವಂತೆ ಯಾವುದೇ ಸಮಸ್ಯೆಯಾದಲ್ಲಿ ತುರ್ತು ಸಹಾಯವಾಣಿ 112 ಮತ್ತು ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಸಂಪರ್ಕಿಸುವಂತೆ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆವುಳ್ಳ ಜಾಗೃತಿ ಫಲಕಗಳನ್ನು ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಡಿಜಿಪಿ ಹಾಗೂ ಬಳ್ಳಾರಿ ವಲಯದ ಐಜಿಪಿರವರಿಗೆ ಪತ್ರ ಬರೆದಿದ್ದಾರೆ

ಶಿಕ್ಷಕರ ಮತದಾರರ ಪಟ್ಟಿಯಲ್ಲೂ ಎಸ್ಐಆರ್!ಪ್ರಬಲ ಆಕಾಂಕ್ಷಿಗಳ ಹೆಸರು ಕೈ ಬಿಟ್ಟು ಪಟ್ಟಿ ಪ್ರಕಟ. *ಪ್ರಜಾಪ್ರಭುತ್ವ ಗಾಳಿಗೆ ತೂರಿದ ಶಾಲಾಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆ! 

*ನೋಟಿಸ್ ಬೋರ್ಡ್ಗೆ ಮತದಾರರಪಟ್ಟಿ ಲಗತ್ತಿಸದೇ  ಚುನಾವಣೆ ಘೋಷಣೆ

*ಪ್ರಬಲ ಆಕಾಂಕ್ಷಿಗಳ ಹೆಸರು ಮತದಾರರ ಪಟ್ಟಿಯಿಂದ ಮಾಯ! *ನಿವೃತ್ತರು,ನಿಧನರಾದವರ ಹೆಸರು ಮತದಾರರ ಪಟ್ಟಿಯಲ್ಲಿ ನಮೂದು *ಕೂಡಲೇ ಚುನಾವಣಾ ಪ್ರಕ್ರಿಯೆ ತಡೆಯುವಂತೆ ಆಗ್ರಹ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳ ನಿರ್ದೇಶಕರ ಸ್ಥಾನಕ್ಕೆ 2026-31 ನೇ ಸಾಲಿನ ಆಡಳಿತ ಮಂಡಳಿ ರಚನೆಗಾಗಿ ಏಪ್ರೀಲ್-19 ರಂದು ಮತದಾನ ಜರುಗಲಿದ್ದು ಇದುವರೆಗೂ ಮೂಲ ಮತದಾನ ಪಟ್ಟಿ ಬಿಡುಗಡೆಯಾಗದೇ ಕರಡು ಮತದಾರರ ಪಟ್ಟಿಯಿಂದಲೇ ಚುನಾವಣೆ ನಡೆಸಲಾಗುತ್ತಿದ್ದು ಏ.11 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಯಾಗಿದ್ದು ಕೂಡಲೇ ಮೂಲ ಮತದಾರರ ಪಟ್ಟಿ ಬಿಡುಗಡೆ ಮಾಡಿ ನಂತರ ಚುನಾವಣಾ ದಿನಾಂಕ ಘೋಷಣೆ ಮಾಡುವಂತೆ  ಶಿಕ್ಷಕ ಮತದಾರರು ಆಗ್ರಹಿಸಿದ್ದಾರೆ.    ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 08 ನಿರ್ದೇಶಕರ ಸ್ಥಾನಗಳಿದ್ದು ಇದರಲ್ಲಿ ಐದು ಪುರುಷರು, ಮೂರು ಮಹಿಳಾ ನಿರ್ದೇಶಕರಿದ್ದು ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ಶಿಕ್ಷಕಿಯರು ಮತದಾರರಾಗಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಇದುವರೆಗೂ ಮತದಾರರ ಮೂಲ ಪಟ್ಟಿ ಬಿಡುಗಡೆ ಮಾಡಿಲ್ಲ. ಬದಲಿಗೆ ಆಲಮಟ್ಟಿ ಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಂದ ಕರಡು ಮತದಾರರ ಪಟ್ಟಿಯನ್ನು ಕೆಲವರು ಖರೀದಿಸಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಪ್ರಸ್ತುತ ಇರುವ ನಿರ್ದೇಶಕರು ಉದ್ದೇಶಪೂರ್ವಕವಾಗಿ ಚುನಾವಣೆಗೆ ಸ್ಪರ್ಧಿಸುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವಂತೆ ಮಾಡಿ ತಮಗೆ ಬೇಕಾದವರನ್ನು ಮಾತ್ರ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬರುವಂತೆ ನೋಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.   08 ನಿರ್ದೇಶಕರ ಸ್ಥಾನಗಳಿಗೆ ಏ.11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಏ.14 ರಂದು ನಾಮಪತ್ರ ಪರಿಶೀಲನೆ ಮತ್ತು ವಾಪಸ್ ಪಡೆಯುವುದು ಅಗತ್ಯ ಬಿದ್ದರೆ ಏ,19 ರಂದು ಮತದಾನ ಮಾಡಲು ಚುನಾವಣಾ ವೇಳಾ ಪಟ್ಟಿ ಬಿಡುಗಡೆಯಾಗಿದೆ.  ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ ನಿವೃತ್ತ ಶಿಕ್ಷಕರು 04 ಜನ ಮತ್ತು ಒಬ್ಬ ಮೃತ ಶಿಕ್ಷಕರ ಹೆಸರು ಸೇರ್ಪಡೆಯಾಗಿದೆ.  ಪ್ರಬಲ ಆಕಾಂಕ್ಷಿಗಳಾಗಿದ್ದ ಶರಣಪ್ಪ ಹಕ್ಕಂಡಿ, ಛತ್ರಪ್ಪ ತಂಬೂರಿ ಸೇರಿ ಇನ್ನೂ ಹಲವರ ಹೆಸರು ಮತದಾರರ ಪಟ್ಟಿಯಿಂದ ಕೈ  ಬಿಡಲಾಗಿದೆ. ಒಟ್ಟಾರೆ ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವ ಸಂವಿಧಾನ ವಿರೋಧಿಯಾಗಿದ್ದು ಮತದಾರರ ಪಟ್ಟಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಆಗದಂತೆ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದೆ. ಏ.11 ಎರಡನೇಯ ಶನಿವಾರ, ಏ.12 ರವಿವಾರ, ಏ.14 ಅಂಬೇಡ್ಕರ್ ಜಯಂತಿ ಇದ್ದು ಸಾಲು ಸಾಲು ರಜೆ ಇರುವುದರಿಂದ ಚುನಾವಣಾ ಆಕಾಂಕ್ಷಿಗಳು ಕೋರ್ಟ್ ಮೊರೆ ಹೋಗಲು ಆಗದಂತೆ ಮುಂದಾಲೋಚನೆಯಿAದ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ನಿರ್ದೇಶಕ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಶರಣಪ್ಪ ಹಕ್ಕಂಡಿ ಮತ್ತು ಛತ್ರಪ್ಪ ತಂಬೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಕ್ಸ್  ಈಗಾಗಲೇ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದ್ದು ರಾಜ್ಯ ಚುನಾವಣಾಧಿಕಾರಿಗಳು ನೀಡಿದ ಮತದಾರರ ಪಟ್ಟಿಯ ಅನ್ವಯ ಚುನಾವಣೆ ಘೋಷಣೆ ಮಾಡಲಾಗುತ್ತದೆ. ಹೆಸರು ಬಿಟ್ಟು ಹೋದವರು ಮನವಿ ಪತ್ರ ಸಲ್ಲಿಸಿದರೆ ರಾಜ್ಯ ಚುನಾವಣಾಧಿಕಾರಿಗಳಿಗೆ ಕಳಿಸಲಾಗುತ್ತದೆ. ಉಳಿದಂತೆ ನಮಗೆ ಯಾವುದೇ ಅಧಿಕಾರವಿಲ್ಲ. -ಗವಿಸಿದ್ದಪ್ಪ ಮಡಿವಾಳ ತಾಲೂಕು ಚುನಾವಣಾಧಿಕಾರಿಗಳು ಶಿಕ್ಷಕರ ಸಂಘ

ದ್ವಿತೀಯ ಪಿ.ಯು.ಸಿ ಫಲಿತಾಂಶ. ಶ್ರೀವಿದ್ಯಾನಿಕೇತನ ಸಂಸ್ಥೆಯ ಪಿಯುಸಿ ಕಾಲೇಜುಗಳ ಅದ್ವಿತೀಯ ಸಾಧನೆ *ರಾಜ್ಯಮಟ್ಟದ ೨ ಮತ್ತು ೩ನೇ ರ‍್ಯಾಂಕ್‌ಗಳು ವಿದ್ಯಾನಿಕೇತನ ಕಾಲೇಜಿನ ಪಾಲಿಗೆ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ೨೦೨೫-೨೬ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನು ಪ್ರಕಟಿಸಿದ್ದು.ಗಂಗಾವತಿ  ಗಂಗಾವತಿ,ಶ್ರೀರಾಮನಗರ, ವಡ್ಡರಹಟ್ಟಿ ಹಾಗೂ ಗಂಗಾವತಿಯ ಶ್ರೀ ವಿದ್ಯಾನಿಕೇತನ ಪಿ.ಯು. ಕಾಲೇಜ್ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದು ಗಂಗಾವತಿಯ ಕೀರ್ತಿ ಹೆಚ್ಚುವಂತೆ ಮಾಡಿದೆ.   ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟು ೧೭೭೪ ವಿದ್ಯಾರ್ಥಿಗಳಲ್ಲಿ ೧೭೬೭ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ ೯೯.೬೦ ರಷ್ಟು ಫಲಿತಾಂಶವನ್ನು ಸಾಧಿಸಿದ್ದು, ೧೪೬೩ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, ೨೯೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೯ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.     ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿನಿಯಾದ  ಯು. ಶ್ರಾವಣಿ ೬೦೦ಕ್ಕೆ ೫೯೮ ಅಂಕಗಳನ್ನು ಪಡೆಯುವ ಮೂಲಕ ಅಮೋಘ ಸಾಧನೆಗೈದು ರಾಜ್ಯಮಟ್ಟದಲ್ಲಿ ೨ನೇ ರ‍್ಯಾಂಕ್ ಗಳಿಸಿದ್ದಾಳೆ. ಅದೇ ರೀತಿ  ಅರ್ಜುನ್ ಗ್ವಾಟಗಿ ೬೦೦ಕ್ಕೆ ೫೯೭ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ೩ನೇ ರ‍್ಯಾಂಕ್ ಪಡೆದಿದ್ದು,  ವೈಷ್ಣವಿ ೬೦೦ಕ್ಕೆ ೫೯೫ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ೫ನೇ ರ‍್ಯಾಂಕ್ ಹಾಗೂ ಪಡೆಯುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.      ವಾಣಿಜ್ಯ ವಿಭಾಗದಲ್ಲಿ ಕುಮಾರಿ ವಂದನಾ ಜೈನ್ ೬೦೦ಕ್ಕೆ ೫೯೪ ಅಂಕಗಳನ್ನು ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ೭ನೇ ರ‍್ಯಾಂಕ್ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಯನ್ನು ಗೈದಿದ್ದಾಳೆ.  ಯು.ಶ್ರಾವಣಿ ೫೯೮ ಅಂಕ, ಅರ್ಜುನ ಗ್ವಾಟಗಿ ೫೯೭, ವೈಷ್ಣವಿ ೫೯೫, ಅಭಿಷೇಕ ಎಂ,ಮಣಿಕಂಠ ಡಿ, ಶ್ರೀಗೌರಿ, ವಂದನಾ ಜೈನ್ ೫೯೪ ಅಂಕಗಳನ್ನು ಪಡೆದಿದ್ದಾರೆ.ಬೃಂದಾ, ಭಾವನಾ, ಜಿ.ಭಾಸ್ಕರ್ ಸಾತ್ವಿಕ್, ಸಂಧ್ಯಾ ಪಾಟೀಲ್, ತೇಜಶ್ವೀನಿ, ದೀಪಿಕಾ ಇವರು ೫೯೩ ಅಂಕಗಳನ್ನು ಪಡೆದಿದ್ದಾರೆ.   ಕಲ್ಯಾಣ ಕರ್ನಾಟಕ ಶಿಕ್ಷಣದಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿಯನ್ನು ತೊಲಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಅಂತರಾಷ್ಟೀಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ರಾಜ್ಯಮಟ್ಟದ ಅತ್ಯುನ್ನತ್ತ ರ‍್ಯಾಂಕ್‌ಗಳನ್ನು ಪಡೆದು ಅಮೋಘ ಸಾಧನೆಯನ್ನು ಗೈದಿದೆ.     ಸತತ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು   ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅಭಿನಂದಿಸಿದ್ದಾರೆ. ಅದೇ ರೀತಿ ಸೂಕ್ತ ಮಾರ್ಗದರ್ಶನ ನೀಡಿದ ಕಾಲೇಜಿನ ಪ್ರಾಂಶುಪಾಲ ಜಗನ್ನಾಥರಾವ್, ಮಲ್ಲಿಕಾರ್ಜುನ್,  ಉಮಾಶಂಕರ್,  ಅಭಿಷೇಕ್ ಡಿ.ಎಮ್,ಉಪನ್ಯಾಸಕವೃಂದವನ್ನು ಅಭಿನಂದಿಸಿದ್ದಾರೆ.

ಕಿಷ್ಕಿಂಧಾ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಬ್ಯಾನರ್ ಅಭಿಯಾನ!

 

*ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ಮನೆ ಮನೆ ರಸ್ತೆ ಇದ್ದಕ್ಕೂ ರಾರಾಜಿಸುತ್ತಿರುವ ಪ್ರಾಧಿಕಾರ ಮುಕ್ತ ಅಭಿಯಾನದ ಬ್ಯಾನರ್.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆನೆಗೊಂದಿ ಕಿಷ್ಕಿಂಧಾ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಆನೆಗೊಂದಿ ಭಾಗದ 15 ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದ್ದು ಗ್ರಾಮದ ಮನೆ ಮತ್ತು ರಸ್ತೆ ಉದ್ದಕ್ಕೂ ಪ್ರಾಧಿಕಾರ ಮುಕ್ತ ಕಿಷ್ಕಿಂಧಾ ಅಂಜನಾದ್ರಿ ಭಾಗ ಎನ್ನುವ ಘೋಷಣೆಯೊಂದಿಗೆ ಆನೆಗೊಂದಿ ಭಾಗದ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ಬರೆಸಿ ಅಂಜನಾದ್ರಿ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಧಿಕಾರಿಗಳಿಗೆ ಮತ್ತು ಯುನ್ನೋಸ್ಕೋ ತಂಡದ ಪ್ರತಿನಿಧಿಗಳಿಗೆ ತಮ್ಮ ಕಷ್ಟಗಳನ್ನು ಇಲ್ಲಿಯ ಜನರು ಹೇಳಿಕೊಳ್ಳುತ್ತಿದ್ದಾರೆ.

ಕಳೆದ 35 ವರ್ಷಗಳ ಹಿಂದೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಅವೈಜ್ಞಾನಿಕವಾಗಿ ಸೇರಿಸಲಾಗಿದೆ. ಜೊತೆಗೆ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿ ಗ್ರಾಮಗಳನ್ನು ಶೇ.100ರಷ್ಟು ಕೋರ್ ಝೋನ್ ಎಂದು ಅವೈಜ್ಞಾನಿಕವಾಗಿ ಘೋಷಣೆ ಮಾಡಿ ವಾಣಿಜ್ಯ, ವ್ಯಾಪಾರ ನೂತನ ಕಟ್ಟಡ ನಿರ್ಮಾಣ, ಹಾಗೂ ಬಿದ್ದ ಮನೆಗಳನ್ನು ಪುನಃ ನಿರ್ಮಿಸಿಕೊಳ್ಳಲು ಅವಕಾಶ ಇಲ್ಲದಂತೆ ಹಂಪಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳೀಯರಿಗೆ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಸಣ್ಣ ಪುಟ್ಟ ವ್ಯಾಪಾರ ಮಾಡಲು ಅಂಗಡಿ ಮುಂಗಟ್ಟುಗಳನ್ನು ರಸ್ತೆ ಬದಿಯಲ್ಲಿ ಇಟ್ಟುಕೊಂಡು ಅವುಗಳಿಗೆ ವಿದ್ಯುತ್ ಸಂಪರ್ಕ ಜೋಡಣೆಗೆ ಅಡ್ಡಿಪಡಿಸುತ್ತಿದ್ದಾರೆ. ಪ್ರಸ್ತುತ ಇರುವ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿಸುವುದು ಮತ್ತು ಹೊಸ ವ್ಯಾಪಾರ ವಹಿವಾಟುಗಳಿಗೆ ವಿದ್ಯುತ್ ಸಂಪರ್ಕ ಕೊಡದಂತೆ ಜೆಸ್ಕಾಂ ಅಧಿಕಾರಿಗಳಿಗೆ ಪ್ರಾಧಿಕಾರದ ಅಧಿಕಾರಿಗಳು ತಾಕೀತು ಮಾಡುತ್ತಿರುವುದು ಸ್ಥಳೀಯರನ್ನು ಕೆರಳಿಸಿದೆ.

ಈ ಮಧ್ಯೆ ಯುನೆಸ್ಕೋ ತಂಡದ ಪ್ರತಿನಿಧಿಗಳು ಆನೆಗೊಂದಿ, ಅಂಜನಾದ್ರಿ ಭಾಗದಲ್ಲಿ ನೂತನ ನಿರ್ಮಾಣಗಳು ಹಾಗೂ ಪರಿಸರ ಉಳಿಸಲಾಗಿದೆಯಾ ಎನ್ನುವ ಕುರಿತು ಪರಿಶೀಲನೆ ನಡೆಸಲು ಆಗಮಿಸುತ್ತಿದ್ದು ಪ್ರಾಧಿಕಾರ ಮುಕ್ತ ಅಭಿಯಾನದ ಬ್ಯಾನರ್ ಮೂಲಕ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಬರೆಸಿ ಸ್ಥಳೀಯರು ಯುನೆಸ್ಕೋ ತಂಡದವರ ಗಮನಕ್ಕೆ ತರುವ ಯತ್ನ ಮಾಡುತ್ತಿದ್ದಾರೆ.

ಈಗಾಗಲೇ ಕಡೆಬಾಗಿಲು ಶ್ರೀರಂಗದೇವರಾಯಲು ವೃತ್ತದಲ್ಲಿ ಮತ್ತು ಸಾಣಾಪುರದ ಗ್ರಾಮ ಪಂಚಾಯತ್ ಎದುರು ಹಾಗೂ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಆನೆಗೊಂದಿ ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

ನ್ಯಾಯಾಧೀಶರ ಎದುರು ವಾದ ಮಂಡಿಸುತ್ತಲೇ ಕುಸಿದು ಬಿದ್ದು ಹಸುನೀಗಿದ ನ್ಯಾಯವಾದಿ,ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ !

*ಕುಷ್ಟಗಿ ನ್ಯಾಯಾಲಯದಲ್ಲಿ ಘಟನೆ.
*ನ್ಯಾಯವಾದಿಗಳು, ವಕೀಲರು ದಿಗ್ಭ್ರಮೆ .

ಕಿಷ್ಕಿಂಧವಾಣಿ ಸುದ್ದಿ

ಕುಷ್ಟಗಿ: ಕೇಸ್ ಒಂದರ ವಾದ ಮಾಡುತ್ತಲೇ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ ತಾವರಗೇರಾ ಇವರು ಮೃತಪಟ್ಟ ಘಟನೆ ಕುಷ್ಟಗಿ ನ್ಯಾಯಾಲಯದಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದೆ.
ತಾವರಗೇರಾ ಮೂಲದ ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ(50) ಇವರು ಭೂ ವಿವಾದದ ಕೇಸ್ ಒಂದರಲ್ಲಿ ಮಾನ್ಯ ನ್ಯಾಯಾಧೀಶರ ಎದುರು ತಮ್ಮ ವಾದವನ್ನು ಮಂಡಿಸುವ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಕುಷ್ಟಗಿ ನ್ಯಾಯಾಲಯದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಜರುಗಿದೆ. ಮೃತ ನಿಂಗಪ್ಪ ಸುದ್ದಿ ಇವರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತ ನಿಂಗಪ್ಪ ಸುದ್ದಿ ಅವರು ಕಳೆದ 20 ವರ್ಷಗಳಿಂದ ಗಂಗಾವತಿ ಕೋರ್ಟಿನಲ್ಲಿ ತಮ್ಮ ವಕೀಲ ವೃತ್ತಿಯನ್ನು ಮಾಡುತ್ತಿದ್ದರು. ಜೊತೆಗೆ ರಂಗಭೂಮಿ ಬಗ್ಗೆ ಒಲವಿದ್ದ ಅವರು ವಿವಿಧ ನಾಟಕ ಕಂಪನಿಗಳು ಹಾಗೂ ಅಮೆಚೂರ್ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಕೇಸ್ ಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಕುಷ್ಟಗಿ ನ್ಯಾಯಾಲಯದಲ್ಲಿ ಕೇಸ್ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಿಂಗಪ್ಪ ಸುದ್ದಿ ನಿಧನಕ್ಕೆ ಗಂಗಾವತಿ ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ವಕೀಲರ ಸಂಘದವರು ಕಂಬನಿ ಮಿಡಿದಿದ್ದಾರೆ

ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ.

*32 ಕ್ರಸ್ಟಗೇಟ್‌ಗಳ ಫ್ಯಾಬ್ರಿಕೇಶನ್ ಪೂರ್ಣ.

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅವರು ಏಪ್ರಿಲ್ 9 ರಂದು ಪ್ರವಾಸ ಕೈಗೊಂಡು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು.

ಇದೇ ವೇಳೆ, ತುಂಗಭದ್ರಾ ಜಲಾಶಯದಲ್ಲಿ ಗೇಟ್‌ಗಳ ಫ್ಯಾಬ್ರಿಕೇಶನ್, ಬಿಚ್ಚುವಿಕೆ ಮತ್ತು ಅಳವಡಿಕೆ ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ ಪರಿಶೀಲಿಸಿದರು.

ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್‌ಗಳಲ್ಲಿ 32 ಕ್ರಸ್ಟಗೇಟ್‌ಗಳ ಫ್ಯಾಬ್ರಿಕೇಶನ್ ಪೂರ್ಣಗೊಂಡಿದೆ. 1 ಗೇಟು ಫ್ಯಾಬ್ರಿಕೇಶನ್ ಹಂತದಲ್ಲಿದ್ದು, ಹೊಸಪೇಟೆ ಫ್ಯಾಬ್ರಿಕೇಶನ್ ಕೇಂದ್ರದಲ್ಲಿ ಕೆಲಸ ಪ್ರಗತಿಯಲ್ಲಿದೆ. ಗೇಟ್ ಸಂಖ್ಯೆ 1 ರಿಂದ 14 ಮತ್ತು 16 ರಿಂದ 33 ರವರೆಗಿನ ಒಟ್ಟು 32 ಗೇಟ್‌ಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದೆ.

ಗೇಟ್ ಸಂಖ್ಯೆ 15 ರ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. 20 ಗೇಟ್‌ಗಳ ಪ್ರಾಯೋಗಿಕ ಚಾಲನೆ ಪೂರ್ಣಗೊಂಡಿದೆ (ಗೇಟ್ ಸಂಖ್ಯೆಗಳು: 01, 02, 03, 04, 11, 12, 17, 18, 19, 20, 24, 25, 26, 27, 28, 29, 30, 31, 32 ಮತ್ತು 33). 24 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದೆ (ಗೇಟ್ ಸಂಖ್ಯೆಗಳು: 01, 02, 03, 04, 05, 06, 07, 11, 12, 17, 18, 19, 20, 21, 24, 25, 26, 27, 28, 29, 30, 31, 32 ಮತ್ತು 33). 07 ಗೇಟ್‌ಗಳ ಕೆಲಸ ಪ್ರಗತಿಯಲ್ಲಿದೆ (ಗೇಟ್ ಸಂಖ್ಯೆಗಳು: 08, 09, 10, 13, 14, 16 ಮತ್ತು 22) ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಕೆ.ಎನ್.ಎನ್.ಎಲ್. ಮುಖ್ಯ ಎಂಜಿನಿಯರ್ ಶ್ರೀನಿವಾಸ ಮಲ್ಲಿಗವಾಡ, ಟಿಆರ್ ವಿಭಾಗದ ಇಇ ನಾಗನಾಥ, ಎಇಇ ಧರ್ಮರಾಜ್, ಟಿಬಿ ಬೋರ್ಡ್ ಇಇ ಚಂದ್ರಶೇಖರ, ಸೆಕ್ಷನ್ ಅಧಿಕಾರಿಗಳಾದ ಜಿ. ಕಿರಣ ಮತ್ತು ಪಂಪಾಪತಿ ಡಿ.ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕುಡುಗೋಲಿನಿಂದ ಹಲ್ಲೆ: ಐವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದ ನ್ಯಾಯಾಲಯ.

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನಡೆದು ಕುಡುಗೋಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪಿಗಳಿಗೆ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಲಯ ಆರೋಪಿತರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3 ಸಾವಿರ ದಂಡ ಹಾಗು 6 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ರೂ.2,500/- ದಂಡ ವಿಧಿಸಿದ ನ್ಯಾಯಾಲಯದ ತೀರ್ಪು ಪ್ರಕಟಿಸಿದೆ.
28.10.2015 ರಂದು ಸಂಜೆ 7-00 ಗಂಟೆಗೆ ದಶಮಾಪುರ ಗ್ರಾಮದಲ್ಲಿ ಹಿರಿಯರ ಆಸ್ತಿ ಪಾಲು ವಿಭಾಗ ಮಾಡಿಕೊಂಡ ವಿಷಯದಲ್ಲಿ ಹಳೇ ವೈಶಮ್ಯದಿಂದ ಆಯುಧಗಳನ್ನು ಹಿಡಿದುಕೊಂಡು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೆ. ಕನಕಪ್ಪ, ಅನ್ನಪೂರ್ಣ. ಅಂಜಿನಪ್ಪ ರವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತೀವ್ರ ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕೆ.ಅಂಜಿನಪ್ಪ, (ಮೃತ ಪಟ್ಟಿರುತ್ತಾರೆ), ಕೆ.ರಂಗಪ್ಪ, ಕೆ.ಅಶೋಕ್, ಕೊಡ್ಲಮ್ಮ. 5) ದುರುಗಮ್ಮ ಇವರ ವಿರುದ್ಧ ಕಲಂ:143, 147, 148, 324, 326, 504, 506 ಆಧಾರ 149 ಐಪಿಸಿ ರೀತ್ಯ ಈ ದೋಷಾರೋಪಣ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ನಿವೇಧಿಸಿಕೊಳ್ಳಲಾಗಿತ್ತು. ಅಭಿಯೋಜನಾ ಪರವಾಗಿ ಸಾಕ್ಷಿದಾರರನ್ನು ವಿಚಾರಣೆ ಮಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ ಡಿ.ಕೆ ಅವರು ಸದರಿ ಆರೋಪಿ /ನಂಬರ್-02 ಮತ್ತು 03 ರವರಿಗೆ 3 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 5 ಸಾವಿರ ರೂಪಾಯಿ ದಂಡ ಮತ್ತು 4 ಮತ್ತು 5 ನೇ ಆರೊಪಿತರಿಗೆ 6 ತಿಂಗಳು ಸಾದಾ ಸ್ವರೂಪದ ಜೈಲು ಶಿಕ್ಷೆ ಮತ್ತು ತಲಾ 2,500/- ರೂ. ದಂಡ ವಿಧಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿ ವಾಸು.ಬಿ.ಎಸ್ ಮುಖ್ಯ ಪೇದೆ ಮತ್ತು .ಪಿ.ಎಸ್.ಐ. ಯಶ್ವಂತ್ ಬಿಸ್ನಳ್ಳಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ
ಪತ್ರವನ್ನು ಮ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪಿ.ಸಿ-148 ರವಿಚಂದ್ರ ತಳವಾರ ಮತ್ತು ಸಮನ್ಸ್ ಪಿ.ಸಿ-278 ಕೊಟ್ರೇಶ್ ಇವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾರೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ,ಟಿ ಸಾಕ್ಷಿ ವಿಚಾರಣೆಯನ್ನು ನಡೆಯಿಸಿ ವಾದ ಮಂಡಿಸಿ ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ವೆಂಕಟಗಿರಿ ವ್ಯಾಪ್ತಿಯ ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿದಾರರಿಗೆ ಶೀಘ್ರ ಪಟ್ಟ ಹಂಚಿಕೆ: ಶಾಸಕ ಗಾಲಿ ಜನಾರ್ದನ ರೆಡ್ಡಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವೆಂಕಟಗಿರಿ ಹೋಬಳಿಯ ಹಲವು ಗ್ರಾಮಗಳಲ್ಲಿ ಹಲವು ದಶಕಗಳಿಂದ ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆ ಅಡಿ ಶೀಘ್ರದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಹೇಳಿದರು.

ಅವರು ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಕಮಿಟಿ, ಅಕ್ರಮ ಸಕ್ರಮ ಕಮಿಟಿಯ ಸಭೆಯಲ್ಲಿ ಪಾಲ್ಗೊಂಡು ವೆಂಕಟಗಿರಿ ಭಾಗದ ರೈತರ ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ನಿಯಮಾನುಸಾರ ಬಗರ್ ಹುಕುಂ ಮತ್ತು ಅಕ್ರಮ ಸಕ್ರಮ ಕಾನೂನಿನ ಅನ್ವಯ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುವವರಿಗೆ ಸಾಗುವಳಿ ಚೀಟಿ ವಿತರಣೆಗೆ ಕಾನೂನು ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ರೈತರು ತಾವು ಇದುವರೆಗೂ ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಅಧಿಕಾರಿಗಳಿಂದ ಬಂದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಾಗುವಳಿ ಚೀಟಿ ಪಡೆಯಲು ಸಿದ್ದರಾಗುವಂತೆ ತಿಳಿಸಿದರು.

ಕುಡಿಯುವ ನೀರಿನ‌ ವ್ಯವಸ್ಥೆಗೆ ಸೂಚನೆ:ಬೇಸಿಗೆ ಬಿಸಿಲು ಹೆಚ್ಚಾಗುತ್ತಿದ್ದು ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮ ವಹಿಸಬೇಕು. ಹಣದ ಕೊರತೆ ಇದ್ದರೆ ಕೂಡಲೇ ತಮ್ಮ ಗಮನಕ್ಕೆ ತರಬೇಕು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಬೋರ್ವೆಲ್ ಕೊರೆಸುವ ಮತ್ತು ರೈತರಿಂದ ಬೋರ್ವೆಲ್ ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅನುಕೂಲ ಕಲ್ಪಿಸಬೇಕೆಂದರು.

ಸಭೆಯಲ್ಲಿ ಗಂಗಾವತಿ ತಹಸೀಲ್ದಾರ್ ವಿಶ್ವನಾಥ್ ವಿಶ್ವನಾಥ್ ಮುರುಡಿ, ಕೊಪ್ಪಳ ತಹಸೀಲ್ದಾರ್ ಬಸವರಾಜ್, ಉಪತಹಶೀಲ್ದಾರ ಮಹಾಂತಗೌಡ ಪಾಟೀಲ್, ಶಿರಸ್ತೇದಾರ್ ಪ್ರಕಾಶ ನಾಯಕ,ಎಇಇ ಹೊನ್ನಪ್ಪ, ಇ.ಓ ರಾಮ್ ರೆಡ್ಡಿ, ಎ ಡಿ ಎಲ್ ಆರ್ ರಾಜಶೇಖರ್ ಹಾಗೂ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆಧುನಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಅನ್ವೇಷಣೆಯ ಮನೋಭಾವ ಬೆಳೆಸುವುದು ಅವಶ್ಯವಾಗಿದೆ:ಜಾನ ಪಾಲ್.

* ಶ್ರೀರಾಮನಗರದ ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಪದವಿ ಪ್ರದಾನ.

* ನೃತ್ಯ ,ಸಂಸ್ಕೃತಿಕ ಪ್ರದರ್ಶನದ ಮೂಲಕ ಪಾಲಕರ ಗಮನ ಸೆಳೆದ ಮಕ್ಕಳು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆಧುನಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಅನ್ವೇಷಣೆಯ ಮನೋಭಾವ ಬೆಳೆಸುವುದೇ ಶಿಕ್ಷಣವಾಗಿದೆ. ಪಾಲಕರು, ಶಿಕ್ಷಕರು ಈ ನಿಟ್ಟಿನಲ್ಲಿ ಕಾರ್ಯ ಮಾಡುವುದು ಅವಶ್ಯ ಎಂದು ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷ ಜಾನ ಪಾಲ್ ಹೇಳಿದರು. ಅವರು ತಾಲೂಕಿನ ಶ್ರೀರಾಮನಗರದ ಬಿರ್ಲಾ ಓಪನ್ ಮೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಪದವಿ ಪ್ರಧಾನ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಮಸ್ಯೆಗಳ ಕುರಿತು ಯಶಸ್ವಿಯಾಗಿ ಕಾರ್ಯನಿರ್ವಹಿಸುವುದೇ ಜೀವನ, ಪ್ರತಿಯೊಬ್ಬರ ಬದುಕಿನಲ್ಲೂ ಕಷ್ಟ, ಸುಖ, ನೋವು, ನಲಿವುಗಳು ಇರುತ್ತವೆ. ಅವುಗಳನ್ನು ಮೀರಿ ಅನ್ವೇಷಣೆಯ ಮೂಲಕ ಸಮಸ್ಯೆಗಳನ್ನು ಪರಿಹಾರ ಮಾಡಬೇಕು. ಶಿಕ್ಷಣದ ಮಹತ್ವದ ಗುರಿ ಇದಾಗಿದ್ದು, ಜಪಾನ್ ದೇಶ ಮತ್ತು ಇಸ್ರೇಲ್ ದೇಶಗಳ ಜನರು ಇಡೀ ವಿಶ್ವದಲ್ಲಿ ನಿತ್ಯವೂ ಸಮಸ್ಯೆಗಳನ್ನು ಎದುರಿಸುತ್ತಾ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಅವರ ಮಾದರಿಯನ್ನು ತೆಗೆದುಕೊಂಡು ಪ್ರತಿಯೊಬ್ಬ ಪಾಲಕ ತಮ್ಮ ಮಕ್ಕಳಿಗೆ ಅನ್ವೇಷಣೆ ಮಾಡುವ ಮನೋಭಾವ ಬೆಳೆಸಬೇಕು. ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ. ಪಾಲಕರ ಸಹಕಾರದಿಂದ ಸಂಸ್ಥೆ ಮಹತ್ವದ ಬೆಳವಣಿಗೆ ಕಂಡಿದೆ ಎಂದರು.  ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಿರಿಯ ಪತ್ರಕರ್ತ ಕೆ ನಿಂಗಜ್ಜ ಮಾತನಾಡಿ ಶಿಕ್ಷಣದ ಮುಖ್ಯ ಗುರಿ ಮಾನವೀಯತೆ ಮತ್ತು ಬದುಕುವ ಮಾರ್ಗವನ್ನು ಕಲಿಸುತ್ತದೆ. ಪ್ರತಿಯೊಬ್ಬ ಪಾಲಕ ಮಕ್ಕಳನ್ನು ನೌಕರಿಗಾಗಿ ಓದಿಸದೆ,ಮಾನವೀಯ ಮೌಲ್ಯಗಳನ್ನು ಹೊಂದುವಂತೆ ಮಕ್ಕಳ ಮೇಲೆ ಪ್ರಭಾವ ಬೀರಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಿದ್ದು, ಇದರಲ್ಲಿ ಬಾಲಕ ,ಪಾಲಕ, ಶಿಕ್ಷಕ ಮತ್ತು ಸಮುದಾಯ ಮಹತ್ವದ ಪಾತ್ರ ವಹಿಸುತ್ತವೆ. ಅತ್ಯಾಧುನಿಕ ಮತ್ತು ಡಿಜಿಟಲ್ ಪರಿಣಾಮವಾಗಿ ಶಿಕ್ಷಣದ ದಿಕ್ಸೂಚಿಯ ಬದಲಾಗಿದ್ದು, ಅದನ್ನು ಪಾಲಕರು ಕಾಲಕ್ಕೆ ತಕ್ಕಂತೆ ತಮ್ಮ ಯೋಚನೆಗಳನ್ನು ಬದಲಾಯಿಸಿಕೊಂಡು ಮಕ್ಕಳ ಭವಿಷ್ಯ ರೂಪಿಸುವಂತೆ ಸಲಹೆ ನೀಡಿದರು ಕಾರ್ಯಕ್ರಮದಲ್ಲಿ  ಪ್ರಾಚಾರ್ಯರು ಪಾಲಕರು ಮತ್ತು ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು

ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಶ್ರೀರಾಮನಗರದ ಹತ್ತಿರ ಪಲ್ಟಿ!

 

*ಚಾಲಕನಿಗೆ ತೀವ್ರ ಗಾಯ,ಎರಡು ತಾಸಿಗೂ ಹೆಚ್ಚು ಸಮಯ‌ ಟ್ರಾಫಿಕ್ ಜಾಮ್.

*ಮಣ್ಣೂರು-ಸೂಗೂರಿನಿಂದ ಕಾರಟಗಿ ರೈಸ್ ಮಿಲ್ ಗೆ ಭತ್ತ ಸಾಗಾಣಿಕೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: 15 ಟನ್ ಭತ್ತದ ಚೀಲಗಳನ್ನು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ ಯಾಗಿ ಬಿದ್ದು ಚಾಲಕನಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶ್ರೀರಾಮನಗರದ ಹತ್ತಿರ ಶಿವರಾಮಕೃಷ್ಣ ಪೆಟ್ರೋಲ್ ಬ್ಯಾಂಕ್ ಹತ್ತಿರ ಬುಧವಾರ ಮಧ್ಯಾನ್ಹ ಜರುಗಿದೆ.

ಕಂಪ್ಲಿ ತಾಲೂಕಿನ ಮಣ್ಣೂರ ಸೂಗೂರಿನಿಂದ ಕಾರಟಗಿ ರೈಸ್ ಮಿಲ್ ಟ್ರಾಕ್ಟರ್ ನಲ್ಲಿ 15 ಟನ್ ಭತ್ತದ ಚೀಲಗಳನ್ನು ಸಾಗಿಸುವ ಸಂದರ್ಭದಲ್ಲಿ ಶ್ರೀರಾಮನಗರದ ಹತ್ತಿರ ಗಂಗಾವತಿ ರಾಯಚೂರು ಜಿಲ್ಲಾ ಹೆದ್ದಾರಿಯಲ್ಲಿ ಶಿವರಾಮ ಕೃಷ್ಣ ಪೆಟ್ರೋಲ್ ಬಂಕ್ ಹತ್ತಿರ ಟ್ರಾಲಿಯ ಲಿಂಕ್ ಕಟ್ ಆಗಿ ಏಕಾಏಕಿ ಟ್ರಾಲಿ ಪಲ್ಟಿಯಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಭತ್ತದ ಚೀಲಗಳು ರಸ್ತೆಯಲ್ಲಿ ಚಲ್ಲಾ ಪಿಲ್ಲಿಯಾಗಿದ್ದು ಈ ಸಂದರ್ಭದಲ್ಲಿ ವಾಹನಗಳ ಸಂಚಾರ ಇರದೇ ಇದ್ದ ಕಾರಣ ಭಾರಿ ಪ್ರಮಾಣದ ಅನಾವುತ ತಪ್ಪಿದೆ.

ಅಪಘಾತ ಜರುಗಿ ಎರಡು ತಾಸಿಗೂ ಸಮಯ ಕಳೆದರೂ ಮರಳಿ ಹತ್ತಿರ ಇರುವ ಟೋಲ್ ಕೇಂದ್ರದ ಸಿಬ್ಬಂದಿ ಹಾಗೂ ವೈದ್ಯಕೀಯ ನೆರವು ನೀಡುವ ವಾಹನ ಬಾರದೇ ಕಂಡು ಬಂತು.

ಟ್ರಾಕ್ಟರ್ ಚಾಲಕ ವಿಶ್ವನಾಥ (32) ಮುಖ ಹಾಗೂ ಕೈಗಳಿಗೆ ಮತ್ತು ಬೆನ್ನಿಗೆ ತೀವ್ರ ಗಾಯಗಳಾಗಿದ್ದವು.

ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.