Breaking News
ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ!


*ಪ್ರಾಧಿಕಾರದಿಂದ ಆನೆಗೊಂದಿ 15 ಗ್ರಾಮಗಳನ್ನು ಕೈ ಬಿಡುವಂತೆ ವಿ.ಎಸ್. ಉಗ್ರಪ್ಪ ಮುಖ್ಯಮಂತ್ರಿಯವರಿಗೆ ಪತ್ರ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಹಂಪಿ ಪ್ರವೇಶವು ವಿಶ್ವ ಪರಂಪರೆ ಪ್ರದೇಶಕ್ಕೆ ಸೇರಿದ ನಂತರ ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದಂತೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ರಚನೆ ಮಾಡಲಾಗಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ನಿಯಮಗಳ ಪರಿಣಾಮವಾಗಿ ಗಂಗಾವತಿ ತಾಲೂಕಿನ ಆನೆಗೊಂದಿ ವ್ಯಾಪ್ತಿಯ 15 ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದ್ದು ಹಂಪಿ ಪ್ರಾಧಿಕಾರದ ನಿಯಮಗಳು ಆನೆಗೊಂದಿ ಭಾಗದ ಜನರ ಮೂಲಭೂತ ಹಕ್ಕುಗಳನ್ನು ಕಳಸಿದು ಕೊಂಡಿದ್ದು ಜನರು ಜೀವನ ನಡೆಸಲು ಪರದಾಡಬೇಕಿದೆ. ಆದ್ದರಿಂದ ಕೂಡಲೇ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈಬಿಡುವಂತೆ ಮಾಜಿ ಸಂಸದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿ. ಎಸ್. ಉಗ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಾಖಲೆ ಸಮೇತ ಪತ್ರ ಬರೆದು ಮನವಿ ಮಾಡಿದ್ದಾರೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆ ಆದಾಗಿನಿಂದ ಪ್ರತಿ 10 ವರ್ಷಕ್ಕೊಮ್ಮೆ ಸ್ಥಳೀಯರ ಸಭೆಯನ್ನು ಕರೆದು ಅಭಿಪ್ರಾಯದ ಅನ್ವಯ ವೈಜ್ಞಾನಿಕವಾಗಿ ನಿಯಮಗಳನ್ನು ರೂಪಿಸಬೇಕಿದೆ ಆದರೆ 2008ರಲ್ಲಿ ಮಾಸ್ಟರ್ ಪ್ಲಾನ್ ರಚನೆಯಾಗಿ ಘೋಷಣೆ ಮಾಡಲಾಗಿತ್ತು ನಂತರ 2018 ರಲ್ಲಿ ಪುನಃ ಮಾಸ್ಟರ್ ಪ್ಲಾನ್ ಘೋಷಣೆ ಮಾಡದೇ ಅಧಿಕಾರಿಗಳು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೆಲವು ಕಾರಣದ ಕೈಗಳಾಗಿದ್ದು ಕಾಣದ ಕೈಗಳು ಆನೆಗೊಂದಿ ಭಾಗದಲ್ಲಿ ವಾಣಿಜ್ಯ, ವ್ಯವಹಾರ ಬೆಳೆದಂತೆ ತಡೆಯೊಡುತ್ತಿದೆ. ಆದ್ದರಿಂದಲೇ ಆನೆಗೊಂದಿ ಭಾಗ ಅಭಿವೃದ್ಧಿ ಆಗುತ್ತಿಲ್ಲ, ಜನರು ಉದ್ಯೋಗ ಇಲ್ಲದೆ ಗುಳೇ ಹೋಗಿ ಬದುಕನ್ನು ನಡೆಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈಬಿಡಬೇಕು. ಇದರಿಂದ ಅಲ್ಲಿಯ ಜನರು ತಮ್ಮ ಹಕ್ಕುಗಳಿಂದ ಬದುಕಲು ಸಾಧ್ಯವಾಗುತ್ತದೆ.
ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದ್ದು ಇದರಿಂದ ಜನರು ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡಿಕೊಂಡು ಬದುಕಲು ಸಾಧ್ಯವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಾಧಿಕಾರದಿಂದ 15 ಗ್ರಾಮಗಳನ್ನು ಕೈಬಿಡಬೇಕು ಎಂದು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಜೊತೆಗೆ ಈ ಭಾಗದ ಸಮಸ್ಯೆಗಳ ಬಗ್ಗೆ ದಾಖಲೆ ಸಮೇತ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ