Breaking News
ಶ್ರೀಮಲ್ಲಿಕಾರ್ಜುನ ಮಠದಲ್ಲಿ ಮೂಲ ಸೋಮನಾಥ ಜ್ಯೋತಿರ್ಲಿಂಗ ದರ್ಶನ.

*ಆರ್ಟ್ ಆಫ್ ಲಿವ್ಹಿಂಗ್ ವ್ಯವಸ್ಥೆ

*ಜ್ಯೋತಿರ್ಲಿಂಗ ದರ್ಶನ ಪಡೆದ ಸಾವಿರಾರು ಭಕ್ತರು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದಲ್ಲಿ ಮಲ್ಲಿಕಾರ್ಜುನ ಮಠದಲ್ಲಿ ಮೂಲ ಸೋಮನಾಥ ಜ್ಯೋತಿರ್ಲಿಂಗ ದರ್ಶನ ರವಿವಾರ ಸಂಜೆ ಕಾರ್ಯಕ್ರಮ ಶ್ರದ್ಧೆ, ಭಕ್ತಿಯಿಂದ ಜರುಗಿತು.

ಒಂದು ಸಾವಿರ ವರ್ಷಗಳ ಹಿಂದೆ ಮೊಗಲರ ಆಕ್ರಮಣದಿಂದಾಗಿ ಲುಪ್ತವಾಗಿದ್ದ ಸೋಮನಾಥದ ಮೂಲ ಜ್ಯೋತಿರ್ಲಿಂಗವನ್ನು ಗುರುದೇವ ಶ್ರೀ ಶ್ರೀ ರವಿಶಂಕರರು ಪುನಃ ಪ್ರತಿಷ್ಠಾಪಿಸಿದರು. ಸನಾತನ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವನ್ನು ಸತ್ಯಯುಗದಲ್ಲಿ ಸೋಮ: ಅಂದರೆ ಚಂದ್ರನು ಪ್ರತಿಷ್ಠಾಪಿಸಿದನು ಮತ್ತು ಇಲ್ಲಿ ಶ್ರೀ ಕೃಷ್ಣನು ತಪಸ್ಸು ಮಾಡಿದ್ದನು ಎಂಬ ಪ್ರತೀತಿ ಇದೆ. ಈ ಮೂಲ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿತ್ತು ಎಂದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಶಿಲೆಯ ಕೇಂದ್ರ ಭಾಗವು ಅತ್ಯಂತ ಪ್ರಬಲವಾದ ಕಾಂತೀಯ ಶಕ್ತಿಯಿಂದ ಕೂಡಿದೆ. ಕ್ರಿ.ಶ1026ರಲ್ಲಿ ಮೊಹಮ್ಮದ್ ಘಜನಿಯು ದೇವಾಲಯದ ಮೇಲೆ ಆಕ್ರಮಣ ಮಾಡಿ ಈ ಜ್ಯೋತಿರ್ಲಿಂಗವನ್ನು ಆದ್ರಗೊಳಿಸಿದನು. ಶಾಶ್ವತವಾಗಿ ನಷ್ಟವಾಗಿದೆ ಎಂದುಕೊಂಡಂತಹ ಈ ಶಿವಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಪುರೋಹಿತರು ರಹಸ್ಯವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅವರು ಈ ಚೂರುಗಳಿಗೆ ಶಿವಲಿಂಗದ ಆಕಾರವನ್ನು ನೀಡಿದರು ಮತ್ತು ಸುಮಾರು ಸಾವಿರ ವರ್ಷಗಳ ಕಾಲ ತಲೆ-ತಲಾಂತರದಿಂದ ಇದನ್ನು ಸಂರಕ್ಷಿಸಿಕೊಂಡು ಬಂದರು. ಈ ಶಿವಲಿಂಗಗಳನ್ನು ಪೂಜಿಸುವಾಗ ಅಗ್ನಿಹೋತ್ರಿಗಳು ಒಂದು ಅಪರೂಪದ ವಿದ್ಯಮಾನವನ್ನು ಗಮನಿಸಿದರು. ಈ ಶಿಲೆಗಳು ಅಯಸ್ಕಾಂತೀಯ ಗುಣವನ್ನು ಹೊಂದಿದ್ದವು. ಸಾಮಾನ್ಯವಾಗಿ ವಸ್ತುವಿನ ಧ್ರುವಗಳಲ್ಲಿ ಕಾಂತೀಯ ಶಕ್ತಿಯು ಕಂಡುಬರುತ್ತದೆ ಆದರೆ, ಅಪರೂಪವಾಗಿ ಈ ಶಿಲೆಯ ಕೇಂದ್ರದಲ್ಲಿ ಬಲವಾದ ಕಾಂತೀಯತೆ ಇರುವುದು ವೈಜ್ಞಾನಿಕ ಪರೀಕ್ಷೆಯಲ್ಲಿ ಖಚಿತವಾಯಿತು. ಭೂ ವಿಜ್ಞಾನಿಗಳು ಇಂತಹ ವಸ್ತುವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

1924ರಲ್ಲಿ ಕಂಚಿ ಶಂಕರಾಚಾರ್ಯರು ಈ ಅಗ್ನಿಹೋತ್ರಿಗಳಿಗೆ ಈ ಶಿವಲಿಂಗಗಳನ್ನು ನೂರು ವರ್ಷಗಳ ಕಾಲ ಗುಪ್ತವಾಗಿ ಸಂರಕ್ಷಿಸುವಂತೆ ತಿಳಿಸಿದರು ಮತ್ತು ಅದನ್ನು ಗುರುದೇವರಿಗೆ ನೀಡುವಂತೆ ಸೂಚಿಸಿದ್ದರು. ಜನವರಿ 2025 ರಲ್ಲಿ ಅಗ್ನಿಹೋತ್ರಿಗಳು ಈ ಶಿವಲಿಂಗಗಳನ್ನು ಗುರುದೇವರಿಗೆ ಹಸ್ತಾಂತರಿಸಿದರು. ಮಹಾಶಿವರಾತ್ರಿಯಂದು ಜ್ಯೋತಿರ್ಲಿಂಗದ ಈ ಭಾಗಗಳನ್ನು ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಒಂದು ಸಾವಿರ ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಮತ್ತು ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಆರ್ಟ್ ಆಫ್ ಲಿವ್ಹಿಂಗ್ ನ ರಘು ಪವರ್, ಸತ್ಯಂ ,ಮಹೇಶ,ಮಂಜುನಾಥ, ಬಸವನಗೌಡ ಪಾಟೀಲ್, ಅಮರೇಗೌಡ,ದರೋಜಿ‌ ಸತ್ಯನಾರಾಯಣ, ಗುರುರಾಜ ಕಾರಂತ,ಸದಾನಂದ ಶೆಟ್,ರೂಪರಾಣಿ ರಾಯಚೂರು, ಸುನೀತಾ, ರಜನೀ ಕೊಟ್ಟಾಲ್,ರವೀಂದ್ರ ಹೂಲಗೇರಿ, ನ್ಯಾಯವಾದಿ ಸಿದ್ದನಗೌಡ ಪಾಟೀಲ್, ಚಂದ್ರಗೌಡ ಪಾಟೀಲ್, ಚನ್ನಬಸಯ್ಯಸ್ವಾಮಿ,ರುದ್ರಯ್ಯ ಸ್ವಾಮೀ ಅಯೋಧ್ಯೆ,ಸೂಗೂರಪ್ಪ ವಲ್ಕಂದಿನ್ನಿ ಸೇರಿ ಅನೇಕರಿದ್ದರು.