Breaking News
ಹದಗೆಟ್ಟ ಗಂಗಾವತಿ-ಆರಾಳ ರಾಜ್ಯ ಹೆದ್ದಾರಿ!

*ಕಳೆದ ಮೂರು ವರ್ಷಗಳಿಂದ ದುರಸ್ತಿಗೆ ಮನವಿ,ಅಧಿಕಾರಿಗಳ ನಿರ್ಲಕ್ಷ್ಯ

*ಶೀಘ್ರ ದುರಸ್ತಿಯಾಗದಿದ್ದರೆ ರಸ್ತೆ ತಡೆದು ಪ್ರತಿಭಟನೆ.

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ತಾಲೂಕಿನ ಗಂಗಾವತಿ-ಆರಾಳ ಗ್ರಾಮದಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿ ಕಳೆದ ಮೂರು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹದಗೆಟ್ಟಿದ್ದು ವಾಹನಗಳು,ಬೈಕ್ ಹಾಗೂ ಜನ ಸಂಚಾರಕ್ಕೆ ಅಯೋಗ್ಯವಾಗಿದೆ. ಆರಾಳ,ಮಲಕನಮರಡಿ, ಉಡುಮಕಲ್ ಸೇರಿ ಸುತ್ತಲಿನ ಈ ರಸ್ತೆಗಳಲ್ಲಿ ಓಡಾಡುವ ಗ್ರಾಮಗಳ ಜನರು ಅಧಿಕಾರಿಗಳು ಹಾಗೂ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ವಡ್ಡರಹಟ್ಟಿಯಿಂದ ಕನಕಗಿರಿ ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಇದ್ದು ಈಗಾಗಲೇ ವಿವಿಧ ಅನುದಾನದಲ್ಲಿ ದುರಸ್ತಿ ಮಾಡಲಾಗಿದೆ ಎಂದು ಬಿಲ್ ಎತ್ತುವಳಿ ಮಾಡಲಾಗಿದೆ ಎಂದು ಆರಾಳ ಗ್ರಾಮಸ್ಥರು ಆರೋಪಿಸಿದ್ದಾರೆ.

ಸಾರ್ವಜನಿಕರ ವಾಹನಗಳ ಜತೆ ಆರಾಳ,ಮಲಕನಮರಡಿ ಸೇರಿ ಸುತ್ತಲಿನ ಗ್ರಾಮಗಳ ರೈತರು ಬೆಳೆಯುವ ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಇದೇ ಮಾರ್ಗದ ಮೂಲಕ ಗಂಗಾವತಿ ತಂದು ಮಾರಾಟ ಮಾಡಬೇಕಿದೆ.ಜತೆಗೆ ಶಾಲಾ,ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ತೆರಳಬೇಕಿದೆ. ಆಸ್ಪತ್ರೆಗೆ ಹೋಗುವವರ ಗೋಳು ಕೇಳುವವರು ಇಲ್ಲವಾಗಿದೆ.

ತುಂಗಭದ್ರಾ ಎಡದಂಡೆಯ ಕಾಲುವೆ ಆರಾಳ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಅವೈಜ್ಞಾನಿಕವಾಗಿದ್ದು ಪುನರ್ ನಿರ್ಮಾಣದ ಜತೆಗೆ ವಡ್ಡರಹಟ್ಟಿ ಯಿಂದ ಕನಕಗಿರಿ ರಸ್ತೆಯ ವರೆಗಿನ ರಸ್ತೆಯನ್ನು ದುರಸ್ತಿ ಮಾಡಲು ಅನೇಕ ವರ್ಷಗಳಿಂದ ಮನವಿ ಮಾಡಿದರೂ ಜನಪ್ರತಿನಿಧಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದು ರಸ್ತೆ ಕಾಮಗಾರಿ ಆರಂಭವಾಗದಿದ್ದಾರೆ ವಡ್ಡರಹಟ್ಟಿ ಕನಕಗಿರಿ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಆರಾಳ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಆರಾಳ ಗ್ರಾಮದ ರೈತರಾದ ಹನುಮಂತಪ್ಪ ಡಂಬರ್,ಈಶಪ್ಪ ಕೋರಿ,ಬೆಟ್ಟಪ್ಪ ಇಳಿಗೇರ್,ಮಡಿವಾಳಪ್ಪ, ಶರಣಪ್ಪ,ರುದ್ರಗೌಡ,ಗವಿಸಿದ್ದಪ್ಪ,ಪಂಪಾಪತಿ,ವೆಂಕಟೇಶ ತಬಾಲಿ,ಫಕೀರಪ್ಪ ಹರಿಜನ,ವಿರೇಶಪ್ಪ ಡ್ಯಾಗಿ,ಉಮೇಶ,ಪಂಪಾಪತಿ ಎಚ್,ಹನುಮಂತಪ್ಪ ನಾಯಕ,ಬಾಲಪ್ಪ ಭಜಂತ್ರಿ,ದುರುಗೇಶ,ಹನುಮಂತಪ್ಪ ಉಪ್ಪಾರ,ಬಸವಣ್ಣ ಮ್ಯಾಗೇರಿ ಸೇರಿ ಅನೇಕರಿದ್ದರು.

 

***

ಗಂಗಾವತಿ ಆರ್ ಆರ್ ರಸ್ತೆ ದುರಸ್ತೆ ಕುರಿತಂತೆ ಈ ವರ್ಷದ ಯೋಜನೆಯಲ್ಲೇ ಸೇರಿಸಲಾಗಿದೆ ಲೋಕೋಪಯೋಗಿ ಇಲಾಖೆಯ 50-54 ಯೋಜನೆ ಇಡೀ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೈಗೊಳ್ಳಲಾಗಿದೆ ಶೀಘ್ರದಲ್ಲಿ ಸರ್ಕಾರದಿಂದ ಕಾಮಗಾರಿ ಮಾಡುವಂತೆ ಟೆಂಡರ್ ಸೇರಿದಂತೆ ಅಗತ್ಯ ಹಣಕಾಸು ನಿಗದಿಯಾಗಲಿದೆ.

-ವಿಶ್ವನಾಥ ಎಇಇ ಲೋಕೋಪಯೋಗಿ ಇಲಾಖೆ.

 

***

ಆರಾಳ ಗ್ರಾಮಸ್ಥರು ತಮ್ಮನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದು ವಡ್ಡರಹಟ್ಟಿಯಿಂದ ಆರಾಳ ಗ್ರಾಮದವರೆಗೂ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ರಸ್ತೆ ಮತ್ತು ಎಡದಂಡೆ ಕಾಲುವೆಗೆ ಇರುವ ಬೃಹತ್ ಗಾತ್ರದ ಸೇತುವೆ ಮತ್ತು ಸಣ್ಣಪುಟ್ಟ ಸೇತುವೆಗಳ ನಿರ್ಮಾಣ ಮಾಡಲು 10 ಕೋಟಿ ರೂಪಾಯಿ ಡಿಪಿಆರ್ ತಯಾರಿಸಲಾಗಿದೆ. ಸರಕಾರದಿಂದ ಅನುದಾನ ಬಂದ ತಕ್ಷಣ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ.

-ಗಾಲಿ ಜನಾರ್ದನ ರೆಡ್ಡಿ ಶಾಸಕ