ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ತುಂಬಾ ಕೇಸರಿ ಕಲಿಗಳ ಕಲರವ!

*ಹನುಮಜಯಂತಿಯಂದು ಹನುಮಮಾಲಾಧಾರಿಗಳಿಂದ ಇರುಮುಡಿ ವಿಸರ್ಜನೆ.
* ಅಂಜನಾದ್ರಿಯಲ್ಲಿ ಹನುಮ ಜಯಂತಿ: ಪವಮಾನ ಹೋಮ, ಯಶಸ್ವಿ ಧಾರ್ಮಿಕ ಕಾರ್ಯಕ್ರಮಗಳು
* ರಾಜ್ಯದ ವಿವಿಧತೆಗಳಿಂದ ಹನುಮ ಮಾಲಾಧಾರಿಗಳಿಂದ ಅಂಜನಾದ್ರಿಯ ದರ್ಶನ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಶ್ರೀ ರಾಮನ ಬಂಟ ಹನುಮಂತ ಜನಿಸಿನ ದಿನ ಹನುಮ ಜಯಂತಿ ಆಚರಣೆಯನ್ನು ದೇಶಾದ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಲಾಗುತ್ತದೆ. ಹನುಮ ಭಕ್ತರು ವಿಶೇಷವಾಗಿ ಹನುಮಮಾಲೆ ಧರಿಸಿ ಹನುಮ ಜಯಂತಿಯಂದು ಇರುಮುಡಿ ವಿಸರ್ಜನೆ ಮತ್ತುಮಾಲಾ ವಿಸರ್ಜನೆಯನ್ನು ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನ ಸನ್ನಿಧಿಯಲ್ಲಿ ಮಾಡುವುದು ಸಾಂಪ್ರದಾಯವಾಗಿದೆ. ಗುರುವಾರ ಹನುಮ ಜಯಂತಿಯಂದು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹನುಮ ಭಕ್ತರು ತಮ್ಮ ಹನುಮ ಮಾಲೆಯನ್ನು ಇರುಮುಡಿಯನ್ನು ಅಂಜನಾದ್ರಿಯಲ್ಲಿ ವಿಸರ್ಜಿಸಿ ಹೋಮ,ಹವನದಲ್ಲಿ ಪಾಲ್ಗೊಂಡು ಪುನೀತರಾದರು. ಪೊಲೀಸ್ ಇಲಾಖೆಯ ಮಾಹಿತಿಯಂತೆ50,000 ಕ್ಕೂ ಹೆಚ್ಚು ಹನುಮ ಭಕ್ತರು ಅಂಜನಾದ್ರಿಯಲ್ಲಿ ಸೇರಿ ಧಾರ್ಮಿಕ ಆಚರಣೆಯ ಮೂಲಕ ಹನುಮ ಮಾಲೆಯ ವೃತಾಚರಣೆ ಅಂತಿಮಗೊಳಿಸಿದರು. ದೇವಸ್ಥಾನ ಕಮಿಟಿಯವರು ಹನುಮ ಮಾಲೆ ವಿಸರ್ಜನೆ ಮತ್ತು ಇರುಮುಡಿ ವಿಸರ್ಜನೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ವ ಸಿದ್ಧತೆಗಳನ್ನು ವ್ಯವಸ್ಥೆ ಮಾಡಿ ಪವಮಾನ ಹೋಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿದ್ದರು.
ಹನುಮ ಜಯಂತಿಯಂದು ಶ್ರೀ ಆಂಜನೇಯನ ಮೂರ್ತಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಶ್ರೀ ಆಂಜನೇಯನ ದೇವಸ್ಥಾನ ಹಾಗೂ ಬೆಟ್ಟಕ್ಕೆ ದೀಪಾಲಂಕಾರದ ಮೂಲಕ ಶೃಂಗರಿಸಲಾಗಿತ್ತು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹನುಮ ಭಕ್ತರ ವಾಹನಗಳ ನಿಲುಗಡೆಗೆ ಮತ್ತು ಸಂಚಾರಿ ವ್ಯವಸ್ಥೆಯನ್ನು ಗ್ರಾಮೀಣ ಪೊಲೀಸರು ವ್ಯವಸ್ಥಿತವಾಗಿ ಮಾಡಿದ್ದರು.
ಹನುಮ ಜಯಂತಿಯಂದು ಬೆಳಗಿನ ಜಾವ ಎರಡು ಗಂಟೆಯಿಂದಲೇ ಹನುಮ ಭಕ್ತರು ಅಂಜನಾದ್ರಿಯನ್ನ ಹತ್ತಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.

