Breaking News
ತರಕಾರಿ ಅಂಗಡಿಯೊಳಗಿದ್ದ ಹಾವನ್ನು ಸೆರೆ ಹಿಡಿದ ಉರಗ ಪ್ರೇಮಿ ರವಿ ಗೌಳಿ!

*ಆರು ಅಡಿ ಉದ್ದದ ಕೆರೆಹಾವು ಸಂರಕ್ಷಣೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಆನೆಗುಂದಿ ರಸ್ತೆಯಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದ ಪಕ್ಕದ ಸಣ್ಣ ತರಕಾರಿ ಅಂಗಡಿಯೊಳಗಿದ್ದ ಆರು ಅಡಿ ಉದ್ದದ ಬೃಹತ್ ಕೆರೆಹಾವೊಂದನ್ನು ಸೆರೆ ಹಿಡಿದು ಸಂರಕ್ಷಣೆ ಮಾಡಲಾಗಿದೆ.

ತರಕಾರಿ ಅಂಗಡಿಯಲ್ಲಿದ್ದ ಹಾವನ್ನು ಕಂಡು

ಸಾರ್ವಜನಿಕರು ಭಯಭೀತರಾಗಿದ್ದರು. ಶುಕ್ರವಾರ ಸಂಜೆ 6:30 ರ ಸುಮಾರಿನಲ್ಲಿ ಸೀತಾರಾಮ ಕಲ್ಯಾಣ ಮಂಟಪದ ಬಳಿಯಿರುವ ಉಮೇಶ ಅಯ್ಯಾ ಎಂಬುವವರು ತರಕಾರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ, ದಿಢೀರನೆ ಸುಮಾರು ಆರು ಅಡಿ ಉದ್ದದ ಕೆರೆಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ತಕ್ಷಣ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಗಾಬರಿಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಜನನಿಬಿಡ ರಸ್ತೆಯಾಗಿರುವುದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ತಕ್ಷಣವೇ ಹಾವಿನ ಸಂರಕ್ಷಕ ಪರಿಸರಪ್ರೇಮಿ ರವಿ ಗೌಳಿ ನಗರದ (ಲಕ್ಷ್ಮಿ ಕ್ಯಾಂಪ್)ರವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪರಿಣಿತರು ಬಹಳ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿ, ಯಾವುದೇ ಅನಾಹುತವಾಗದಂತೆ ತರಕಾರಿ ಬುಟ್ಟಿಗಳ ನಡುವೆ ಅವಿತು ಕುಳಿತಿದ್ದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.ಹಿಡಿದ ಹಾವನ್ನು ಸುರಕ್ಷಿತವಾಗಿ ಚೀಲದಲ್ಲಿ ತುಂಬಿಕೊಂಡು ಜನವಸತಿ ಇಲ್ಲದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ರಕ್ಷಕರು ತಿಳಿಸಿದ್ದಾರೆ. ಕೆರೆಹಾವು ವಿಷಕಾರಿಯಲ್ಲದಿದ್ದರೂ, ಅದರ ಬೃಹತ್ ಗಾತ್ರವು ಜನರಲ್ಲಿ ಭೀತಿ ಹುಟ್ಟಿಸಿತ್ತು. ಹಾವು ಸೆರೆಯಾದ ನಂತರ ಅಂಗಡಿ ಮಾಲೀಕರು ಹಾಗೂ ಆ ಭಾಗದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಬೇಸಿಗೆಯಲ್ಲಿ ಹಾವು ಕಾಣಿಸುವುದು ಸಹಜ,ಕೊಲ್ಲಬೇಡಿ: ಬೇಸಿಗೆಯಲ್ಲಿ ವಾತಾವರಣದಲ್ಲಿ ಉಷ್ಣ ತಾಪಮಾನ ಹೆಚ್ಚು ಇರುತ್ತದೆ ಆದ್ದರಿಂದ ಹಾವು,ಚೇಳು ಸೇರಿದಂತೆ ಇತರೆ ಕೆಲವು ವಿಷ ಜಂತುಗಳು ಹೊರಗೆ ಬರುವುದು ಸಹಜವಾಗಿದೆ. ಆದ್ದರಿಂದ ಹಾವು ಸೇರಿದಂತೆ ವಿಷಕಾರಿ ಜಂತುಗಳನ್ನು ಹೊಡೆದು ಸಾಯಿಸದಂತೆ ಉರಗ ಪ್ರೇಮಿ ರವಿ ಗೌಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ