Breaking News
ವೆಂಕಟಗಿರಿ ವ್ಯಾಪ್ತಿಯ ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿದಾರರಿಗೆ ಶೀಘ್ರ ಪಟ್ಟ ಹಂಚಿಕೆ: ಶಾಸಕ ಗಾಲಿ ಜನಾರ್ದನ ರೆಡ್ಡಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವೆಂಕಟಗಿರಿ ಹೋಬಳಿಯ ಹಲವು ಗ್ರಾಮಗಳಲ್ಲಿ ಹಲವು ದಶಕಗಳಿಂದ ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆ ಅಡಿ ಶೀಘ್ರದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಹೇಳಿದರು.

ಅವರು ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಕಮಿಟಿ, ಅಕ್ರಮ ಸಕ್ರಮ ಕಮಿಟಿಯ ಸಭೆಯಲ್ಲಿ ಪಾಲ್ಗೊಂಡು ವೆಂಕಟಗಿರಿ ಭಾಗದ ರೈತರ ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ನಿಯಮಾನುಸಾರ ಬಗರ್ ಹುಕುಂ ಮತ್ತು ಅಕ್ರಮ ಸಕ್ರಮ ಕಾನೂನಿನ ಅನ್ವಯ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುವವರಿಗೆ ಸಾಗುವಳಿ ಚೀಟಿ ವಿತರಣೆಗೆ ಕಾನೂನು ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ರೈತರು ತಾವು ಇದುವರೆಗೂ ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಅಧಿಕಾರಿಗಳಿಂದ ಬಂದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಾಗುವಳಿ ಚೀಟಿ ಪಡೆಯಲು ಸಿದ್ದರಾಗುವಂತೆ ತಿಳಿಸಿದರು.

ಕುಡಿಯುವ ನೀರಿನ‌ ವ್ಯವಸ್ಥೆಗೆ ಸೂಚನೆ:ಬೇಸಿಗೆ ಬಿಸಿಲು ಹೆಚ್ಚಾಗುತ್ತಿದ್ದು ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮ ವಹಿಸಬೇಕು. ಹಣದ ಕೊರತೆ ಇದ್ದರೆ ಕೂಡಲೇ ತಮ್ಮ ಗಮನಕ್ಕೆ ತರಬೇಕು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಬೋರ್ವೆಲ್ ಕೊರೆಸುವ ಮತ್ತು ರೈತರಿಂದ ಬೋರ್ವೆಲ್ ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅನುಕೂಲ ಕಲ್ಪಿಸಬೇಕೆಂದರು.

ಸಭೆಯಲ್ಲಿ ಗಂಗಾವತಿ ತಹಸೀಲ್ದಾರ್ ವಿಶ್ವನಾಥ್ ವಿಶ್ವನಾಥ್ ಮುರುಡಿ, ಕೊಪ್ಪಳ ತಹಸೀಲ್ದಾರ್ ಬಸವರಾಜ್, ಉಪತಹಶೀಲ್ದಾರ ಮಹಾಂತಗೌಡ ಪಾಟೀಲ್, ಶಿರಸ್ತೇದಾರ್ ಪ್ರಕಾಶ ನಾಯಕ,ಎಇಇ ಹೊನ್ನಪ್ಪ, ಇ.ಓ ರಾಮ್ ರೆಡ್ಡಿ, ಎ ಡಿ ಎಲ್ ಆರ್ ರಾಜಶೇಖರ್ ಹಾಗೂ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆಧುನಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಅನ್ವೇಷಣೆಯ ಮನೋಭಾವ ಬೆಳೆಸುವುದು ಅವಶ್ಯವಾಗಿದೆ:ಜಾನ ಪಾಲ್.

* ಶ್ರೀರಾಮನಗರದ ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಪದವಿ ಪ್ರದಾನ.

* ನೃತ್ಯ ,ಸಂಸ್ಕೃತಿಕ ಪ್ರದರ್ಶನದ ಮೂಲಕ ಪಾಲಕರ ಗಮನ ಸೆಳೆದ ಮಕ್ಕಳು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆಧುನಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಅನ್ವೇಷಣೆಯ ಮನೋಭಾವ ಬೆಳೆಸುವುದೇ ಶಿಕ್ಷಣವಾಗಿದೆ. ಪಾಲಕರು, ಶಿಕ್ಷಕರು ಈ ನಿಟ್ಟಿನಲ್ಲಿ ಕಾರ್ಯ ಮಾಡುವುದು ಅವಶ್ಯ ಎಂದು ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷ ಜಾನ ಪಾಲ್ ಹೇಳಿದರು. ಅವರು ತಾಲೂಕಿನ ಶ್ರೀರಾಮನಗರದ ಬಿರ್ಲಾ ಓಪನ್ ಮೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಪದವಿ ಪ್ರಧಾನ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಮಸ್ಯೆಗಳ ಕುರಿತು ಯಶಸ್ವಿಯಾಗಿ ಕಾರ್ಯನಿರ್ವಹಿಸುವುದೇ ಜೀವನ, ಪ್ರತಿಯೊಬ್ಬರ ಬದುಕಿನಲ್ಲೂ ಕಷ್ಟ, ಸುಖ, ನೋವು, ನಲಿವುಗಳು ಇರುತ್ತವೆ. ಅವುಗಳನ್ನು ಮೀರಿ ಅನ್ವೇಷಣೆಯ ಮೂಲಕ ಸಮಸ್ಯೆಗಳನ್ನು ಪರಿಹಾರ ಮಾಡಬೇಕು. ಶಿಕ್ಷಣದ ಮಹತ್ವದ ಗುರಿ ಇದಾಗಿದ್ದು, ಜಪಾನ್ ದೇಶ ಮತ್ತು ಇಸ್ರೇಲ್ ದೇಶಗಳ ಜನರು ಇಡೀ ವಿಶ್ವದಲ್ಲಿ ನಿತ್ಯವೂ ಸಮಸ್ಯೆಗಳನ್ನು ಎದುರಿಸುತ್ತಾ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಅವರ ಮಾದರಿಯನ್ನು ತೆಗೆದುಕೊಂಡು ಪ್ರತಿಯೊಬ್ಬ ಪಾಲಕ ತಮ್ಮ ಮಕ್ಕಳಿಗೆ ಅನ್ವೇಷಣೆ ಮಾಡುವ ಮನೋಭಾವ ಬೆಳೆಸಬೇಕು. ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ. ಪಾಲಕರ ಸಹಕಾರದಿಂದ ಸಂಸ್ಥೆ ಮಹತ್ವದ ಬೆಳವಣಿಗೆ ಕಂಡಿದೆ ಎಂದರು.  ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಿರಿಯ ಪತ್ರಕರ್ತ ಕೆ ನಿಂಗಜ್ಜ ಮಾತನಾಡಿ ಶಿಕ್ಷಣದ ಮುಖ್ಯ ಗುರಿ ಮಾನವೀಯತೆ ಮತ್ತು ಬದುಕುವ ಮಾರ್ಗವನ್ನು ಕಲಿಸುತ್ತದೆ. ಪ್ರತಿಯೊಬ್ಬ ಪಾಲಕ ಮಕ್ಕಳನ್ನು ನೌಕರಿಗಾಗಿ ಓದಿಸದೆ,ಮಾನವೀಯ ಮೌಲ್ಯಗಳನ್ನು ಹೊಂದುವಂತೆ ಮಕ್ಕಳ ಮೇಲೆ ಪ್ರಭಾವ ಬೀರಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಿದ್ದು, ಇದರಲ್ಲಿ ಬಾಲಕ ,ಪಾಲಕ, ಶಿಕ್ಷಕ ಮತ್ತು ಸಮುದಾಯ ಮಹತ್ವದ ಪಾತ್ರ ವಹಿಸುತ್ತವೆ. ಅತ್ಯಾಧುನಿಕ ಮತ್ತು ಡಿಜಿಟಲ್ ಪರಿಣಾಮವಾಗಿ ಶಿಕ್ಷಣದ ದಿಕ್ಸೂಚಿಯ ಬದಲಾಗಿದ್ದು, ಅದನ್ನು ಪಾಲಕರು ಕಾಲಕ್ಕೆ ತಕ್ಕಂತೆ ತಮ್ಮ ಯೋಚನೆಗಳನ್ನು ಬದಲಾಯಿಸಿಕೊಂಡು ಮಕ್ಕಳ ಭವಿಷ್ಯ ರೂಪಿಸುವಂತೆ ಸಲಹೆ ನೀಡಿದರು ಕಾರ್ಯಕ್ರಮದಲ್ಲಿ  ಪ್ರಾಚಾರ್ಯರು ಪಾಲಕರು ಮತ್ತು ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು

ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಶ್ರೀರಾಮನಗರದ ಹತ್ತಿರ ಪಲ್ಟಿ!

 

*ಚಾಲಕನಿಗೆ ತೀವ್ರ ಗಾಯ,ಎರಡು ತಾಸಿಗೂ ಹೆಚ್ಚು ಸಮಯ‌ ಟ್ರಾಫಿಕ್ ಜಾಮ್.

*ಮಣ್ಣೂರು-ಸೂಗೂರಿನಿಂದ ಕಾರಟಗಿ ರೈಸ್ ಮಿಲ್ ಗೆ ಭತ್ತ ಸಾಗಾಣಿಕೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: 15 ಟನ್ ಭತ್ತದ ಚೀಲಗಳನ್ನು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ ಯಾಗಿ ಬಿದ್ದು ಚಾಲಕನಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶ್ರೀರಾಮನಗರದ ಹತ್ತಿರ ಶಿವರಾಮಕೃಷ್ಣ ಪೆಟ್ರೋಲ್ ಬ್ಯಾಂಕ್ ಹತ್ತಿರ ಬುಧವಾರ ಮಧ್ಯಾನ್ಹ ಜರುಗಿದೆ.

ಕಂಪ್ಲಿ ತಾಲೂಕಿನ ಮಣ್ಣೂರ ಸೂಗೂರಿನಿಂದ ಕಾರಟಗಿ ರೈಸ್ ಮಿಲ್ ಟ್ರಾಕ್ಟರ್ ನಲ್ಲಿ 15 ಟನ್ ಭತ್ತದ ಚೀಲಗಳನ್ನು ಸಾಗಿಸುವ ಸಂದರ್ಭದಲ್ಲಿ ಶ್ರೀರಾಮನಗರದ ಹತ್ತಿರ ಗಂಗಾವತಿ ರಾಯಚೂರು ಜಿಲ್ಲಾ ಹೆದ್ದಾರಿಯಲ್ಲಿ ಶಿವರಾಮ ಕೃಷ್ಣ ಪೆಟ್ರೋಲ್ ಬಂಕ್ ಹತ್ತಿರ ಟ್ರಾಲಿಯ ಲಿಂಕ್ ಕಟ್ ಆಗಿ ಏಕಾಏಕಿ ಟ್ರಾಲಿ ಪಲ್ಟಿಯಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಭತ್ತದ ಚೀಲಗಳು ರಸ್ತೆಯಲ್ಲಿ ಚಲ್ಲಾ ಪಿಲ್ಲಿಯಾಗಿದ್ದು ಈ ಸಂದರ್ಭದಲ್ಲಿ ವಾಹನಗಳ ಸಂಚಾರ ಇರದೇ ಇದ್ದ ಕಾರಣ ಭಾರಿ ಪ್ರಮಾಣದ ಅನಾವುತ ತಪ್ಪಿದೆ.

ಅಪಘಾತ ಜರುಗಿ ಎರಡು ತಾಸಿಗೂ ಸಮಯ ಕಳೆದರೂ ಮರಳಿ ಹತ್ತಿರ ಇರುವ ಟೋಲ್ ಕೇಂದ್ರದ ಸಿಬ್ಬಂದಿ ಹಾಗೂ ವೈದ್ಯಕೀಯ ನೆರವು ನೀಡುವ ವಾಹನ ಬಾರದೇ ಕಂಡು ಬಂತು.

ಟ್ರಾಕ್ಟರ್ ಚಾಲಕ ವಿಶ್ವನಾಥ (32) ಮುಖ ಹಾಗೂ ಕೈಗಳಿಗೆ ಮತ್ತು ಬೆನ್ನಿಗೆ ತೀವ್ರ ಗಾಯಗಳಾಗಿದ್ದವು.

ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸರಕಾರಿ ಶಾಲೆಗೆ ದಾನಕೊಟ್ಟ ಭೂಮಿಯನ್ನು ಮರಳಿ ಪಡೆಯುವ ಕಲ್ಮಠ ಸ್ವಾಮಿಯ ಯತ್ನ ಖಂಡಿಸಿ ಬೃಹತ್ ಪ್ರತಿಭಟನೆ.

*1980 ರಲ್ಲಿ ಶಾಲೆಗೆ ಕೊಟ್ಟೂರುಸ್ವಾಮಿಗಳಿಂದ 5 ಎಕರೆ ಭೂಮಿ‌ ದಾನ.

*ಇದರಲ್ಲಿ 3 ಎಕರೆ ಭೂಮಿ ಮರಳಿ ಪಡೆಯಲು ಈಗಿನ ಕಲ್ಮಠ ಶ್ರೀಗಳಿಂದ ಯತ್ನ.

*ಎಸ್ ಎಫ್ ಐ ನೇತೃತ್ವದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗ್ರಾಮೀಣ ಪ್ರದೇಶದ ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು 1980 ರಲ್ಲಿ ತಾಲೂಕಿನ ಹೊಸಳ್ಳಿ ಗ್ರಾಮದ ಪಕ್ಕದಲ್ಲಿರುವ ಕಲ್ಮಠದ 5 ಎಕರೆ ಭೂಮಿಯನ್ನು ಅಂದಿನ ಪೀಠಾಧಿಪತಿ ಕೊಟ್ಟೂರು ಮಹಾಸ್ವಾಮಿಗಳು ದಾನವಾಗಿ ಕೊಟ್ಟಿದ್ದರು. ಪ್ರಸ್ತುತ ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು 3 ಎಕರೆ ಭೂಮಿಯನ್ನು ಮರಳಿ ಪಡೆಯಲು ದಾಖಲಾತಿ ತಿದ್ದುಪಡಿ ಮಾಡುವ ಯತ್ನ ನಡೆಸಿದ್ದು ಇದರಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ಎಸ್ಎಫ್ ಐ ನೇತೃತ್ವದಲ್ಲಿ ಹೊಸಳ್ಳಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹೊಸಳ್ಳಿಯಿಂದ ಪಾದಯಾತ್ರೆ ನಡೆಸಿ ಗಂಗಾವತಿಯ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ

ಬೃಹತ್ ಪ್ರತಿಭಟನೆ ನಡೆಸಿ ಬಿ ಇ ಓ ಅವರ ಮೂಲಕ ರಾಜ್ಯದ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಹೊಸಳ್ಳಿ ಗ್ರಾಮದ (ವಿರುಪಾಪುರ ಸೀಮೆ) ಸರ್ವೆ ನಂ:16/2/4 ವಿಸ್ತೀರ್ಣ 05-00 ಎ-ಗುಂ ಪೈಕಿ 03-00 ಎ-ಗುಂ ಸರಕಾರಿ ಶಾಲೆಯ ಭೂಮಿಯನ್ನು ಗಂಗಾವತಿ ಕಲ್ಮಠದ ಶ್ರೀ ಕೊಟ್ಟೂರು ಮಹಾಸ್ವಾಮಿಗಳು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳುತ್ತಿರುವುದನ್ನು ತಡೆದು ಸದರಿ ಭೂಮಿಯನ್ನು ಶಾಲೆಗಾಗಿಯೇ ಮೀಸಲಿರಿಸಬೇಕು.

ಸದರಿ ಭೂಮಿಯ ಪಹಣಿಯಲ್ಲಿ ಪ್ರಸ್ತುತ ಅಧ್ಯಕ್ಷ ಶಾಲಾ ಸುಧಾರಕರ ಸಮಿತಿ ಎಂದು ಇರುತ್ತದೆ. ಸದರಿ ಭೂಮಿಯ ವಾರಸುದಾರರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಂಗಾವತಿ ಅವರದಾಗಿರುತ್ತದೆ.

ಈ ಭೂಮಿಯನ್ನು ಶಾಲೆಗೆ ದಾನರೂಪವಾಗಿ ನೀಡಿ ಸುಮಾರು 45 ವರ್ಷ ಮೇಲ್ಪಟ್ಟರೂ ಸಂಪೂರ್ಣವಾಗಿ ಕರ್ನಾಟಕ ಸರ್ಕಾರ ರಾಜ್ಯಪಾಲರ ಹೆಸರಿಗೆ ಆಗಿರುವುದಿಲ್ಲ. ಈ ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈಗ ಭೂಮಿಯನ್ನು ವಾಪಸ್ಸು ಕಬಳಿಸುವ ಉದ್ದೇಶ ಹೊಂದಿದ ಕಲ್ಮಠ ಶ್ರೀಗಳು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಭೂಮಿಯನ್ನು ಸಂಪೂರ್ಣ ಕರ್ನಾಟಕ ಸರ್ಕಾರದ ಸುಪರ್ದಿಗೆ ಹೋಗಲು ಬಿಡುತ್ತಿಲ್ಲ.ಶಿಕ್ಷಣ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕಲ್ಮಠ ಶ್ರೀಗಳೊಂದಿಗೆ ಶಾಮೀಲಾಗಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದಿರುವುದಿಲ್ಲ.

03-00 ಎಕರೆ ಭೂಮಿಯನ್ನು ಸದರಿ ಸರಕಾರಿ ಶಾಲೆಯ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಆಮೀಷ ತೋರಿಸಿ ತಮ್ಮಗಳ ಹೆಸರಿಗೆ ವರ್ಗಾಯಿಸಿಕೊಳ್ಳಲು ಭೂಮಿಯನ್ನು ಪೋಡಿ ಮಾಡಲು ಅರ್ಜಿ ಸಲ್ಲಿಸಿದ್ದು

ಕರ್ನಾಟಕ ಸರ್ಕಾರ ಸರಕಾರಿ ಶಾಲೆಗಳಿಗೆ ಸಂಬಂಧಪಟ್ಟ ಆಸ್ತಿ ಭದ್ರವಾಗಿಸಲು ರಾಜ್ಯ ಶಾಲಾ ಆಸ್ತಿಗಳನ್ನು ಸಂರಕ್ಷಿಸಲು 2022-23ನೇ ಸಾಲಿನಿಂದಲೇ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿದೆ. ಅದರಂತೆ ವಿವಾದಿತ ಶಾಲಾ ಆಸ್ತಿಗಳಿಗೆ ಸಂಬಂಧಿಸಿದಂತೆ ಕಾಲಮಿತಿ ಗುರಿ ನಿಗದಿಪಡಿಸಿ ಆಸ್ತಿಯನ್ನು ಶಾಲಾ ಹೆಸರಿಗೆ ವರ್ಗಾವಣೆಗೊಳಿಸಲು ಹಾಗೂ ಶಾಲಾ ಆಸ್ತಿಯನ್ನು ಅತಿಕ್ರಮಣ ಮಾಡಿರುವುದನ್ನು ಗುರುತಿಸಿ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಹೊಸಳ್ಳಿ ಗ್ರಾಮದ ಸರಕಾರಿ ಶಾಲೆಯ ಆಸ್ತಿಯ ಕುರಿತಾಗಿ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಶಾಲೆಯ ಆಸ್ತಿಯನ್ನು ಸಂರಕ್ಷಿಸಬೇಕಾಗಿದೆ. ದಾನದ ರೂಪದಲ್ಲಿ ಶಾಲೆಗಳಿಗೆ ನೀಡಲಾದ ಆಸ್ತಿಯನ್ನು ಮರು ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಕಲ್ಮಠದ ಶ್ರೀಗಳು ಶಾಲಾ ಆಸ್ತಿಯನ್ನು ಕಬಳಿಸುವ ಉದ್ದೇಶವನ್ನಿಟ್ಟುಕೊಂಡು ಸದರಿ ಶಾಲಾ ಆಸ್ತಿಯನ್ನು ಪೋಡಿ ಮಾಡಲು ಅರ್ಜಿ ಸಲ್ಲಿಸಿ, ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ದುರುದ್ದೇಶವನ್ನು ಹೊಂದಿರುತ್ತಾರೆ.

ಕೂಡಲೇ ಜಿಲ್ಲಾಧಿಕಾರಿಗಳು,ಡಿಡಿಪಿಐ ಅವರು

ಗಂಭೀರವಾಗಿ ಪರಿಗಣಿಸಿ ಶಾಲಾ ಆಸ್ತಿಯು ಯಾವುದೇ ರೀತಿಯಲ್ಲಿ ಒತ್ತುವರಿ/ವರ್ಗಾವಣೆ ಆಗದಂತೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಆಸ್ತಿಯನ್ನು ಸಂರಕ್ಷಿಸಿ ಶಾಲೆಯ ಹೆಸರಿನಲ್ಲಿ ನೋಂದಣಿ ಮಾಡಬೇಕು.

ಸರಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಹೊಸಳ್ಳಿ ಸರಕಾರಿ ಶಾಲೆ ಉತ್ತಮ ಮಕ್ಕಳ ಸಂಖ್ಯೆಯನ್ನು ಹೊಂದುವುದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಶಾಲೆಗೆ ಸುಸಜ್ಜಿತವಾದ ಆಟದ ಮೈದಾನ ರಚಿಸಿ, ಸುತ್ತಲೂ ಕಂಪೌಂಡ್ ನಿರ್ಮಿಸಿ, ಶಾಲೆಯನ್ನು ಅಭಿವೃದ್ಧಪಡಿಸುವ ಮೂಲಕ ಇಲ್ಲಿನ ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು. ಶಾಲಾ ಆಸ್ತಿಯು ಯಾವುದೇ ರೀತಿಯಲ್ಲಿ ಒತ್ತುವರಿಯಾಗಲಿ, ವರ್ಗಾವಣೆಯಾಗಲಿ ಆಗದಂತೆ ಶಿಸ್ತುಬದ್ಧವಾಗಿ ಕ್ರಮ ಜರುಗಿಸಬೇಕೆಂದು ಹೊಸಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ವಿನೋದ,ಮಲ್ಲಪ್ಪ, ಶಿವರಾಜ,

ವಿರೇಶ, ಸಿದ್ದು,ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ್ ಕಡಗದ,ಶಿವು,ಮೌನೇಶ,ದರ್ಶನ,ದುರುಗೇಶ, ರಗಡಪ್ಪ,ಶ್ರೀ ನಿವಾಸ,ಮುತ್ತಣ್ಣ ಇತರರು ಇದ್ದರು.

ಅಕ್ರಮ ಇಟ್ಮಂಗಿ ಭಟ್ಟಿಗಳಿಗೆ ಅಕ್ರಮ ಮಣ್ಣು ಸಾಗಾಣಿಕೆ ತಡೆಯುವಂತೆ ಆಗ್ರಹ

*ಅಕ್ರಮವಾಗಿ ಮಣ್ಣು ಸಾಗಾಟ :ಜನಪ್ರತಿನಿಧಿಗಳ ಹಿಂಬಾಲಕರು, ಅಧಿಕಾರಿಗಳು ಶಾಮೀಲು

*ಅಕ್ರಮದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರನ್ನು ಟಾರ್ಗೆಟ್ ಮಾಡುತ್ತಿರುವ ಡಿವೈಎಸ್ಪಿ ಆಮಾನತ್ತಿಗೆ ಆಗ್ರಹ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಇಟ್ಟಂಗಿ ಭಟ್ಟಿಗಳನ್ನು ನಡೆಸಲಾಗುತ್ತಿದ್ದು ಈ ಇಟ್ಟಂಗಿ ಭಟ್ಟಿ ಗಳಿಗೆ ಅಕ್ರಮವಾಗಿ ತುಂಗಭದ್ರಾ ಡ್ಯಾಮಿನ ಹಿಂಭಾಗದಿಂದ ಫಲವತ್ತಾದ ಮಣ್ಣನ್ನು ತಂದು ಉಪಯೋಗಿಸಲಾಗುತ್ತಿದೆ. ವೆಂಕಟಗಿರಿ ಭಾಗದ ಪರಿಸರ ವ್ಯಾಪಕವಾಗಿ ಹಾನಿ ಮತ್ತು ರಾಜ್ಯ ಸರ್ಕಾರಕ್ಕೆ ರಾಜಧನ ನಷ್ಟವಾಗುತ್ತಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹೋರಾಟಗಾರರನ್ನೇ ಡಿ ಎಸ್ ಪಿ ಅವರು ಟಾರ್ಗೆಟ್ ಮಾಡುತ್ತಿದ್ದು ಅವರನ್ನು ಅಮಾನತು ಮಾಡುವಂತೆ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅಜಯ್‌ಕುಮಾರ ಚಲುವಾದಿ ಒತ್ತಾಯಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ 15-20 ವರ್ಷಗಳಿಂದ ಕೊಪ್ಪಳ ತಾಲೂಕಿನ ತುಂಗಭದ್ರಾ ಜಲಾಶಯದ ಹಿಂಭಾಗದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಗಂಗಾವತಿ ತಾಲೂಕಿನ ವೆಂಕಟಗಿರಿ ಸಮೀಪ ಇರುವ ಇಟ್ಟಿಗೆ ಭಟ್ಟಿಗಳಿಗೆ ಸಾಗಾಟ ಮಾಡಲಾಗುತ್ತಿದೆ. ರಾತ್ರೋ ರಾತ್ರಿ ಹತ್ತಾರು ಟಿಪ್ಪರುಗಳು, ಲಾರಿಗಳು ಪ್ರತಿ ದಿನಾಲೂ ಮಣ್ಣು ಸಾಗಾಟ ಮಾಡುತ್ತಿದ್ದು, ಡ್ಯಾಂ ಹಿಂಭಾಗದಲ್ಲಿ ದೊರೆಯುವ ಫಲವತ್ತತ್ತೆಯಿಂದ ಕೂಡಿದ ಮಣ್ಣನ್ನು ರೈತರ ಜಮೀನುಗಳಿಗೆ ಹಾಕುವುದು ಬಿಟ್ಟು, ದುಬಾರಿ ಹಣಕ್ಕೆ ಕೆಲ ಪ್ರಭಾವಿಗಳು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ದಂಧೆವು ಕೆಲ ಹಲವು ವರ್ಷಗಳಿಂದ ನಡೆಯುತ್ತಿದೆ. ಮಾರ್ಚ್ 04,2026 ರಂದು ಸಂಘಟನೆಯ ಕಾರ್ಯಕರ್ತರು ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯ ಮಾಹಿತಿಯನ್ನು 112 ಗೆ ಕರೆ ಮಾಡಿ, ಮಾಹಿತಿ ನೀಡಲಾಗಿತ್ತು. ಆಗ ಲಾರಿ ಮಾಲೀಕರು ಸಂಘಟನೆಯ ಕಾರ್ಯಕರ್ತರಿಗೆ ಹಣ ಆಮಿಷವನ್ನು ನೀಡಿದ್ದಾರೆ. ಕಾರ್ಯಕರ್ತರು ಹಣದ ಆಮಿಷಕ್ಕೆ ಮಣಿಯದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಷ್ಟೇಲ್ಲ ಆದರೂ ಗಂಗಾವತಿ ಡಿವೈಎಸ್ಪಿಯವರು ಟಿಪ್ಪರು ಲಾರಿಗಳನ್ನು ಹಿಡಿಯಲು ನಿಮಗೆ ಏನು ಅಧಿಕಾರವಿದೆ. ನಿಮ್ಮ ಮೇಲೆಯೇ ರಾಬರಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಕಾರ್ಯಕರ್ತರಿಗೆ ಧಮ್ಕಿ ಹಾಕಿರುವುದು ಅತ್ಯಂತ ಖಂಡನೀಯವಾಗಿದೆ. ಈ ರೀತಿಯಾಗಿ ಅಕ್ರಮ ಮಣ್ಣು ಸಾಗಾಟ ಮಾಡುವುದನ್ನು ತಡೆಯಲು ಮುಂದಾಗಿರುವ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿರುವುದು ಅಧಿಕಾರಿಗಳ ನಡೆಯ ಮೇಲೆ ಅನುಮಾನ ಉಂಟಾಗುತ್ತಿದೆ. ಕೂಡಲೇ ಎಸ್ಪಿಯವರು,ಐಜಿಯವತು ಅಕ್ರಮವಾಗಿ ಡ್ಯಾಂನ ಮಣ್ಣನ್ನು ಅಕ್ರಮವಾಗಿ ಇಟ್ಡಂಗಿ ಭಟ್ಟಿಗಳಿಗೆ ಸಾಗಾಟ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಹಾಗೂ ಹೋರಾಟಗಾರರಿಗೆ

ಧಮ್ಕಿ ಹಾಕಿರುವ ಡಿವೈಎಸ್ಪಿ ಅವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ

ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಯಮನೂರ ಮಾದಿಗ,ಪ್ರಮುಖರಾದ ಮರ್ದಾನ ಅಲಿ, ಉಮೇಶ ನಾಯಕ, ಶಿವಕುಮಾರ ಹಾಗೂ ಇತರರಿದ್ದರು.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಆನೆಗೊಂದಿಯನ್ನು  ಕೈಬಿಡುವಂತೆ ಕೊಪ್ಪಳದಲ್ಲಿ ಬೃಹತ್ ಪಾದಯಾತ್ರೆ!

*ಪ್ರತಿಭಟನೆಯ ನಂತರ ಡಿಸಿ ಅವರಿಗೆ ಮನವಿ ಸಲ್ಲಿಕೆ.

*ಲಲಿತಾರಾಣಿ ಶ್ರೀರಂಗದೇವರಾಯಲು,ಶ್ರೀಕೃಷ್ಣದೇವರಾಯ ಸೇರಿ ಪ್ರಮಖರ ನೇತೃತ್ವ

*ಪ್ರಾಧಿಕಾರ ಜೀವಿಸುವ ಹಕ್ಕುಗಳನ್ನು ಕಸಿದುಕೊಂಡಿದೆ.

*20 ವರ್ಷಗಳಿಂದ ಮಾಸ್ಟರ್ ಪ್ಲಾನ್ ರಚನೆಯಾಗಿಲ್ಲ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮಾರಕಗಳ ರಕ್ಷಣೆಯ ನೆಪದಲ್ಲಿ ಜನಸಾಮಾನ್ಯರ ಜೀವಿಸುವ ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಕಸಿದುಕೊಂಡಿದೆ ಆದ್ದರಿಂದ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ಆಗ್ರಹಿಸಿ ಆನೆಗೊಂದಿ ರಾಜ ವಂಶಸ್ಥರ ನೇತೃತ್ವದಲ್ಲಿ 15 ಗ್ರಾಮಗಳ ಗ್ರಾಮಸ್ಥರು ರೈತರು ಮಹಿಳೆಯರು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಆನೆಗೊಂದಿ ರಾಜ ವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು ಹಾಗೂ ಶ್ರೀ ಕೃಷ್ಣದೇವರಾಯಲು ಮಾತನಾಡಿ ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಕಿಷ್ಕಿಂಧಾ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಕಳೆದ 35 ವರ್ಷಗಳ ಹಿಂದೆ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಲು ಒಪ್ಪಿಕೊಳ್ಳಲಾಗಿತ್ತು ಆದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಇತ್ತೀಚಿನ ಕೆಲ ನಿಯಮಗಳು ಮತ್ತು ಅಧಿಕಾರಿಗಳು ಆನೆಗುಂದಿ ಭಾಗದ ಜನರ ಜೀವಿಸುವ ಹಕ್ಕನ್ನು ಮತ್ತು ಮಾನವ ಹಕ್ಕುಗಳನ್ನು ಕಸಿದುಕೊಂಡಿದೆ.ಇಲ್ಲಿನ ಜನರನ್ನು ಕತ್ತಲಿನಲ್ಲಿ ಬದುಕನ್ನು ದೂಡುವಂತೆ ಮಾಡಿದೆ. ಮನೆಗಳಿಗೆ ಸಣ್ಣಪುಟ್ಟ ವ್ಯಾಪಾರದ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಖಂಡಿತ ಮಾಡುವುದು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವುದು, ಗುಡಿಸಲು, ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಹಂಪಿ ಅಭಿವೃದ್ಧಿ ಭಾಗದ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಆನೆಗೊಂದಿ ಭಾಗದ ಜನರನ್ನು ಅನುಮಾನದಿಂದ ನೋಡುತ್ತಿದ್ದಾರೆ ಅಕ್ರಮದ ಹೆಸರಿನಲ್ಲಿ ಇಲ್ಲಿಯ ಅಂಗಡಿ ಮುಂಗಟ್ಟುಗಳನ್ನು ಮನೆಗಳನ್ನು ಮಾನವೀಯತೆ ಇಲ್ಲದೆ ತೆರವುಗೊಳಿಸಲಾಗುತ್ತಿದೆ.

ಕಳೆದ 20 ವರ್ಷಗಳಿಂದ ಮಹಾಯೋಜನೆ ಮಾಸ್ಟರ್ ಪ್ಲಾನ್ ಘೋಷಣೆಯಾಗಿಲ್ಲ. ಸ್ಮಾರಕಗಳ ಸಂರಕ್ಷಣೆ ಸಾವಿರಾರು ವರ್ಷಗಳಿಂದ ಆನೆಗೊಂದಿ ಭಾಗದ 15 ಹಳ್ಳಿಗ ಜನರೇ ಮಾಡಿದ್ದಾರೆ ಆದರೆ ಸ್ಮಾರಕಗಳ ಸಂರಕ್ಷಣೆ ನೆಪದಲ್ಲಿ ಆನೆಗೊಂದಿ ಭಾಗದ 15 ಗ್ರಾಮಗಳ ಗ್ರಾಮಗಳ ಗ್ರಾಮಸ್ಥರನ್ನು ಒಕ್ಕಲಿಬ್ಬಿಸುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಕ್ರಮ ಕಂಡನೀಯವಾಗಿದೆ. ಜನಪ್ರತಿನಿಧಿಗಳು ನಮ್ಮ ಭಾಗದ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಅರ್ಜಿ ಸಲ್ಲಿಸಿದರೆ ಆ ಅರ್ಜಿಯನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ನಾಲ್ಕು ಪಂಚಾಯತಿಯ ಪಿಡಿಓಗಳು ರವಾನೆ ಮಾಡುತ್ತಾರೆ ನಂತರ ಪ್ರಾಧಿಕಾರದ ಅಧಿಕಾರಿಗಳು ಇದು ಮಾಡಲು ಬರುವುದಿಲ್ಲ ನಿಯಮಗಳು ಅಡ್ಡಿಯಾಗುತ್ತವೆ ಎಂದು ಶರಬರೆಯುತ್ತಾರೆ. ಇದರಿಂದ ಆನೆಗೊಂದಿ ಗ್ರಾಮದ 15 ಗ್ರಾಮಗಳ ಜನರ ಬದುಕು ಸಂಕಷ್ಟದಿಂದ ಕೂಡಿದೆ, ಆದ್ದರಿಂದ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಆನೆಗೊಂದಿ ಭಾಗವನ್ನು ಕೈಬಿಡಬೇಕು. ಜೊತೆಗೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಸಣ್ಣಪುಟ್ಟ ವ್ಯಾಪಾರಕ್ಕೆ ಟ್ರೇಡ್ ಲೈಸೆನ್ಸ್ ಕೊಡುವ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ನೀಡಬೇಕು.

ಕೂಡಲೇ ಸಂಸದರು ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಮಟ್ಟದಲ್ಲಿ ಮಾತುಕತೆ ನಡೆಸಿ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕಾರಿಗನೂರನ್ನು ಕೈ ಬಿಟ್ಟಂತೆ ಆನೆಗೊಂದಿ ಭಾಗದ 15 ಹಳ್ಳಿಗಳನ್ನು ಕೈಬಿಡಬೇಕು.

1961 ರಾಜ್ಯ ಪುರಾತತ್ವ ಮತ್ತು ಪ್ರಾಚ್ಯ ವಸ್ತು ಸಂಬಂಧಿಸಿದಂತೆ ಕಾಯಿದೆಗೆ ವಿಧಾನಸಭೆಯಲ್ಲಿ ತಿದ್ದುಪಡಿ ತಂದು

1988 ಪುರಾತತ್ವ ಮತ್ತು ಪ್ರಾಚ್ಯ ವಸ್ತು ಅಧಿನಿಯಮ ವ್ಯಾಪ್ತಿಗೆ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿಯನ್ನು

ಕೆಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಪ್ಪು ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಿ ಸೇರಿಸಿದ್ದು ಮೊದಲಿಗೆ ಕೋರ್ ಝೋನ್ ನಿಂದ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿಯನ್ನು ಕೈಬಿಡಬೇಕು.

ಕೂಡಲೇ ಆನೆಗುಂದಿ ಭಾಗದ 15 ಗ್ರಾಮಗಳ ಗ್ರಾಮಸ್ಥರನ್ನು ರಾಜವಂಶಸ್ಥರನ್ನು ರೈತರನ್ನು ಮಹಿಳೆಯರನ್ನು ಸೇರಿಸಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ರಾಜ್ಯ ವಸ್ತು ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರದವರು ಸಭೆ ನಡೆಸಿ ಸೂಕ್ತ ಪರಿಹಾರವನ್ನು ನೀಡಬೇಕು ಕೂಡಲೇ ಪ್ರಾಧಿಕಾರದಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೈಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಲಲಿತ ರಾಣಿ ಶ್ರೀರಂಗದೇವರಾಯಲು, ಶ್ರೀ ಕೃಷ್ಣದೇವರಾಯಲು, ರತ್ನಶ್ರೀ ರಾಯಲು,

ಆನೆಗೊಂದಿ, ಮಲ್ಲಾಪುರ, ಸಾಣಾಪುರ ಮತ್ತು ಸಂಗಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿ ಪಕ್ಷಾತೀತ,ಜಾತ್ಯತೀತವಾಗಿ ಸಾವಿರಾರು ರೈತರು,ಕೃಷಿ ಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳು ಮತ್ತು ಮಹಿಳೆಯರಿದ್ದರು.

ಮಲ್ಲಾಪೂರ ಸೀಮಾ ಮಲಕನಮರಡಿ ಕೃಷಿಭೂಮಿಯಲ್ಲಿ ನಿತ್ಯವೂ ಚಿರತೆಗಳ ಪ್ರತ್ಯಕ್ಷ!

*ಆಕಳ ಕರುವನ್ನು ತಿಂದು ಮತ್ತೊಂದು ಬೇಟೆಗೆ ಹೊಂಚು ಹಾಕುತ್ತಿರುವ ಚಿರತೆಗಳು.
*ಮಲಕನಮರಡಿ ಸುತ್ತಲಿನ ಗ್ರಾಮಸ್ಥರು.
*ಅರಣ್ಯ ಇಲಾಖೆಗೆ ಮನವಿ ಮಾಡಿದರೂ ನಿರ್ಲಕ್ಷ್ಯ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಪ್ರತಿನಿತ್ಯ ದನ ಕರು ನಾಯಿ ಮತ್ತು ಕುರಿ ಮೇಕೆಗಳನ್ನು ತಿನ್ನುತ್ತಿರುವ ಚಿರತೆಯ ಕಾಟದಿಂದ ಗ್ರಾಮಸ್ಥರು ಮತ್ತು ಕೃಷಿ ಮಾಡುವ ಕೃಷಿಕರು ಭಯಭೀತರಾಗಿರುವ ಘಟನೆ ತಾಲೂಕಿನ ಮಲ್ಲಾಪುರ ಸೀಮೆಯ ಮಲಕನಮರಡಿ ಗ್ರಾಮದ ಸುತ್ತಲಿನ ಗ್ರಾಮಗಳಲ್ಲಿ ಜರುಗಿದೆ.
ಮಲಕನ ಮರಡಿ ಗ್ರಾಮದ ಬಾಲಾಜಿ ಕ್ರಷರ್ ಮಿಷನ್ ಹತ್ತಿರದ ಬೆಟ್ಟ ಗುಡ್ಡಗಳಲ್ಲಿ ಚಿರತೆಗಳು ನಿತ್ಯವೂ ಗ್ರಾಮಸ್ಥರು, ಕುರಿಗಗಾಯಿಗಳು ಕೃಷಿಕರಿಗೆ ಪ್ರತ್ಯಕ್ಷವಾಗುತ್ತಿದ್ದು ಜನಜಾನುವಾರುಗಳಿಗೆ ಬಹಳ ತೊಂದರೆಯಾಗುತ್ತಿದೆ.
ರವಿವಾರ ಸಂಜೆ ಕರುವೊಂದನ್ನು ಕೊಂದಿರುವ ಚಿರತೆ ಅದನ್ನು ಅರ್ಧಂಬರ್ಧ ತಿಂದು ಹೋಗಿದ್ದು ಇದೇ ವಾರದಲ್ಲಿ ಹಲವು ಕುರಿ,ಮೇಕೆ ಮತ್ತು ನಾಯಿಗಳನ್ನು ಹೊತ್ತು ಹೊಯ್ದಿದೆ.
ಈ ಕುರಿತು ಅರಣ್ಯ ಇಲಾಖೆಯವರಿಗೆ ಬೋನು ಇರಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಮಲಕನಮರಡಿ ಗ್ರಾಮದ ಕೃಷಿಕರು ಮನವಿ ಮಾಡಿದರೂ ಅರಣ್ಯ ಮತ್ತು ಕಂದಾಯ,ಪೊಲೀಸ್‌ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಕೃಷಿಕ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಉಪಚುನಾವಣೆ: ಗಡ್ಡದವರನ್ನು ಹಾಗೂ ಟೂರ್ ನವರನ್ನು ಹಣಿಯಬೇಕು ಸಿಸಿ ಪಾಟೀಲ್ ಆಕ್ಷೇಪಾರ್ಹ ಹೇಳಿಕೆ.ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್!

 

*ವೀರಶೈವ ಲಿಂಗಾಯತರು ಒಳಪಂಗಡ ಮರೆತು ಚರಂತಿಮಠ ಅವರನ್ನು ಬೆಂಬಲಿಸಲು ಪಾಟೀಲ್ ಕರೆ.

ಕಿಷ್ಕಿಂಧವಾಣಿ ಸುದ್ದಿ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆಯ ಉಪಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಸಿಸಿ ಪಾಟೀಲ್ ಅವರು ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಹೇಳಿರುವ ಆಕ್ಷೇಪಾರ್ಹ ಮಾತುಗಳನ್ನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದ್ದು ವ್ಯಾಪಕ ಟೀಕೆಗಳು ಕೇಳಿಬಂದಿವೆ. ಕಾಂಗ್ರೆಸ್ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡುವಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಸದೃಢ ಅಭ್ಯರ್ಥಿಯಾಗಿದ್ದು ವೀರಶೈವ ಲಿಂಗಾಯತ ಸಮಾಜದ ಒಳಪಂಗಡ ಮರೆತು ಎಲ್ಲರೂ ಅವರನ್ನು ಬೆಂಬಲಿಸಬೇಕು. ಜೊತೆಗೆ ಗಡ್ಡದವರನ್ನು ಮತ್ತು ಟೂರ್
ನವರನ್ನು ಹಣೆಯಲು ಅಥವಾ ತಡೆಹಿಡಿಯುವ ಶಕ್ತಿ ವೀರಣ್ಣ ಚರಂತಿ ಮಠ ಅವರಿಗಿದೆ. ಆದ್ದರಿಂದ ಇವರನ್ನು ಹಣೆಯಲು ಸರ್ವರೂ ಬಿಜೆಪಿ ಅಭ್ಯರ್ಥಿಯನ್ನು ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ಬೆಂಬಲಿಸಬೇಕು. ನಾನು ದಾವಣಗೆರೆಯ ಬಿಜೆಪಿ ಉಸ್ತುವಾರಿಯಾಗಿದ್ದರೂ ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಹಿರಿಯರಾದ ಬಸವರಾಜ ಪಾಟೀಲ್ ಯತ್ನಾಳ್ ಸೂಚನೆ ಮೇರೆಗೆ ದಾವಣಗೆರೆಯಿಂದ ಇಲ್ಲಿಗೆ ಬಂದು ವೀರಶೈವ ಲಿಂಗಾಯತ ಸಮಾಜದ ಸಭೆಯನ್ನು ನಡೆಸುತ್ತಿದ್ದೇನೆ, ಆದ್ದರಿಂದ ಈ ಉಪಚುನಾವಣೆ ಮಹತ್ವದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುದ್ಧಿ ಕಲಿಸಲು ಭ್ರಷ್ಟ ಸರ್ಕಾರವನ್ನು ಕಿತ್ತುಹೊಗೆಯಲು
ಒಳ್ಳೆಯ ಅವಕಾಶವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸ
ಬೇಕು ಎಂದು ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವ ಸಿ ಸಿ ಪಾಟೀಲ್ ಅವರ ವಿಡಿಯೋ ಹಾಕಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಂಸರನ್ನು ಮತ್ತು ಕುರುಬ ಸಮಾಜದವರನ್ನು ಪಾಟೀಲರು ಟೀಕೆ ಮಾಡಿದ್ದಾರೆ ಅವರಿಗೆ ಧಿಕ್ಕಾರ ಎನ್ನುವ ಸ್ಟೇಟಸ್ಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಬಿಸಿಎಂ‌ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಪುಂಡರ ಹಾಳಿ ತಡೆಯುವಂತೆ ತಾ.ಪಂ.ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ.

* ಕಳಪೆ ಆಹಾರ ಪೂರೈಕೆ ಆಸ್ವಚ್ಛತೆ ಸೇರಿದತೆ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ಪ್ರಶಾಂತ ನಗರದಲ್ಲಿರುವ ಬಿಸಿಎಂ ಇಲಾಖೆಯ ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ನಲ್ಲಿ ಪ್ರತಿನಿತ್ಯವೂ ಪುಂಡರ ಹಾವಳಿ ಹೆಚ್ಚಾಗಿದ್ದು ವಿದ್ಯಾರ್ಥಿನಿಯರು ಜೀವ ಕೈಯಲ್ಲಿ ಹಿಡಿದು ವಿದ್ಯಾಭ್ಯಾಸ ಮಾಡಬೇಕಾಗಿದೆ. ಆದ್ದರಿಂದ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುತ್ತಿದ್ದು ತರಕಾರಿ ಸೇರಿದಂತೆ ಪೌಷ್ಟಿಕಾಂಶ ಇರುವ ಆಹಾರವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಬಿ ಸಿ ಎಂ ಇಲಾಖೆಯ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಎಸ್ ಎಫ್ ಐ ನೇತೃತ್ವದಲ್ಲಿ ತಾಲೂಕ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಮುಖಂಡ ಬಾಲಾಜಿ ಮಾತನಾಡಿ, ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ಅತ್ಯಂತ ಚಿಕ್ಕ ಬಿಲ್ಡಿಂಗ್ ನಲ್ಲಿ ಇದ್ದು ವಿದ್ಯಾರ್ಥಿನಿಯರು ಗಾಳಿ, ಬೆಳಕು ಇಲ್ಲದಂತ ಸ್ಥಿತಿಯಲ್ಲಿ ಅ ನೈರ್ಮಲ್ಯಯುತ ಜೀವನ‌‌ ನಡೆಸಬೇಕಿದೆ. ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ರಾತ್ರಿ ಊಟ ಕಳಪೆ ಮಟ್ಟದ್ದಾಗಿರುತ್ತದೆ. ಸೂಕ್ತ ತರಕಾರಿ ಇರುವುದಿಲ್ಲ, ಅಶುದ್ದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತೆ, ಹಣ್ಣುಗಳನ್ನು ನೀಡುತ್ತಿಲ್ಲ, ದಿನಪತ್ರಿಕೆ ತರಿಸುತ್ತಿಲ್ಲ, ಹೀಗೆ ಹಲವು ಸಮಸ್ಯೆಗಳ ಮಧ್ಯೆ ನಿತ್ಯವೂ ಹಾಸ್ಟೆಲ್ ಗೆ ಪುಂಡರು ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಅಥವಾ ಅರಿಶಿನವನ್ನು ಹಚ್ಚಿಕೊಂಡು ವಿದ್ಯಾರ್ಥಿನಿಯರ ರೂಮುಗಳನ್ನು ಮತ್ತು ಮಳಿಗೆಯ ಮೇಲೆ ನಿತ್ಯವೂ ರಾತ್ರಿ ಸಂದರ್ಭದಲ್ಲಿ ಕೆಲ ಯುವಕರು ಆಗಮಿಸಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಈ ಕುರಿತು ಮಹಿಳಾ ವಾರ್ಡನ್ ಹಾಗೂ ಸೆಕ್ಯೂರಿಟಿಯವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೂಡಲೇ ಪ್ರಶಾಂತ್ ನಗರದಲ್ಲಿರುವ ಹಾಸ್ಟೆಲ್ ನ್ನು ಬಸ್ ನಿಲ್ದಾಣದ ಹತ್ತಿರಕ್ಕೆ ಸ್ಥಳಾಂತರ ಮಾಡಬೇಕು. ಪೌಷ್ಟಿಕವುಳ್ಳ ಆಹಾರವನ್ನು ವಿತರಣೆ ಮಾಡಬೇಕು.ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಹಣ್ಣು ಸೇರಿದಂತೆ ಸರ್ಕಾರದ ನಿಯಮದಂತೆ ಆಹಾರ ಪದಾರ್ಥಗಳನ್ನು ನಿರ್ಧರಿಸಬೇಕು. ರವಿವಾರ ಬೆಳಗ್ಗೆ ಇಡ್ಲಿ ಚಟ್ನಿಯನ್ನು ಉಪಾರಕ್ಕಾಗಿ ವಿತರಿಸಿದ್ದು ಇವು ವಾಸನೆಯಿಂದ ಕೂಡಿವೆ, ನಿತ್ಯವೂ ಇಂತಹ ಆಹಾರವನ್ನು ಸೇವನೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಕೂಡಲೇ ವಾರ್ಡನ್ ಅವರನ್ನು ವರ್ಗಾವಣೆ ಮಾಡಿ ಸರಿಯಾಗಿ ಆಹಾರ ಪದಾರ್ಥಗಳನ್ನು ವಿತರಿಸುವ ವಾರ್ಡನ್ ಅವರನ್ನು ನೇಮಿಸುವಂತೆ ವಿದ್ಯಾರ್ಥಿಗಳು ಇಲಾಖೆ ಅಧಿಕಾರಿಗಳು ವಿದ್ಯಾರ್ಥಿನಿಯರ ಬೇಡಿಕೆಯನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಮತ್ತು ಎಸ್ಎಫ್ಐ ನ ವಿವಿಧ ಪದಾಧಿಕಾರಿಗಳು ಉಪಸ್ಥಿತಮಾತನಾಡಿ,

ಹಗರಿಬೊಮ್ಮನಹಳ್ಳಿಯ ಎರಡು ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನ

*ಹಲವು ದಶಕಗಳ ಜನರ ಬೇಡಿಕೆಗೆ ಸಂಸದ ಈ ತುಕಾರಾಂ ಸ್ಪಂದನೆ.
*ಶೀಘ್ರವಾಗಿ ಕಾಮಗಾರಿ ಆರಂಭ ಸಾಧ್ಯತೆ

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ:
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ಬಳಿಯ ರೈಲ್ವೆ ಗೇಟ್ ನಂಬರ್ 37 ರಲ್ಲಿ ಮೇಲ್ಸೇತುವೆ ಹಾಗೂ ಪಟ್ಟಣದ ನೇತಾಜಿ ರಸ್ತೆಯಲ್ಲಿನ ಎಸ್ ಬಿ ಐ ಬ್ಯಾಂಕ್ ಹತ್ತೀರದ ರೈಲ್ವೆ ಗೇಟ್ ನಂಬರ್ 38ರ ಬಳಿ ಕೆಳ ಸೇತುವೆ(ಅಂಡರ್ ಪಾಸ್) ನಿರ್ಮಾಣದ ಕಾಮಗಾರಿಗೆ ಭಾರತೀಯ ರೈಲ್ವೆ ಇಲಾಖೆ ಟೆಂಡರ್ ಕರೆದಿದ್ದು ಹಲವು ದಶಕಗಳ ಜನರ ಬೇಡಿಕೆಗೆ ಸಂಸದ ಈ ತುಕಾರಾಂ ಅವರ ಸ್ಪಂದಿಸುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದೆ. ರೂ, 43.24 ಕೋಟಿ ವೆಚ್ಚದ ಮೇಲ್ಸೇತುವೆ, ಅಂಡರ್ ಪಾಸ್ ಕಾಮಗಾರಿಗಳ ಮಂಜೂರಾತಿ ಪಡೆದು ಟೆಂಡರ್ ಸಹ ಆಗಿದೆ.
ಕಳೆದ ನಾಲ್ಕೈದು ದಶಕಗಳಿಂದ ರಾಮನಗರ ಮತ್ತು ಈಶ್ವರಿ ವಿವಿ ಹತ್ತಿರ ಕೆಓಆರ್ ಕಾಲೋನಿ ಹತ್ತಿರ ರೈಲ್ವೆ ಬಂದಾಗೆಲ್ಲ ತಾಸು ಗಟ್ಟಲೆ ವಾಹನಗಳು,ಜನರು ನಿಲ್ಲಬೇಕಾಗಿತ್ತು. ಹಲವು ಅಪಘಾತಗಳು ಸಂಭವಿಸಿ ಹಲವು ಜನ ಹಾಗೂ ಜಾನುವಾರುಗಳು ಸಹ ಮೃತಪಟ್ಟ ಘಟನೆಗಳು ಜರುಗಿದ್ದವು. ಸಂಘ ಸಂಸ್ಥೆಗಳು ನೂರಾರು ಪ್ರತಿಭಟನೆ ನಡೆಸಿದರೂ ಮೇಲ್ಸೇತುವೆ ನಿರ್ಮಾಣ ಆಗಿರಲಿಲ್ಲ.
ಇದೀಗ ಜನರ ದಶಕಗಳ ಬೇಡಿಕೆಯನ್ನು ಸಂಸದ ಈ ತುಕಾರಾಂ ಈಡೇರಿಸಿದ್ದಾರೆ.
ಕೊಟ್ಟೂರು-ವ್ಯಾಸ್ ಕಾಲೋನಿ ಮಾರ್ಗದಲ್ಲಿ ಹಗರಿಬೊಮ್ಮನಹಳ್ಳಿ ಹೊರತು ಪಡಿಸಿ ಇತರೆ ನಿಲ್ದಾಣಗಳಲ್ಲಿ ಕ್ರಾಸಿಂಗ್ ಸೌಲಭ್ಯ ಇಲ್ಲದ ಕಾರಣಕ್ಕೆ ರೈಲು ಬಂದಗೊಮ್ಮೆ ಈ ಎರಡು ಗೇಟ್ ಗಳನ್ನು ಬಂದ್ ಮಾಡಿದಾಗ ಇಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ನಿಂದ ಜನತೆ ಮತ್ತು ಸವಾರರು, ಚಾಲಕರು ರೋಸಿಹೋಗಿದ್ದರು.
ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎನ್ನುವುದು ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ಈ ತಾಲೂಕಿನ ಜನತೆ ಹಾಗು ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಮೇಲೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರ ದಶಕಗಳ ಬೇಡಿಕೆ ಆಗಿತ್ತು.
ಹಲವು ದಶಕಗಳಿಂದಲೂ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನೆನಗುದಿಗೆ ಬಿದ್ದಿದ್ದ ಈ ಎರಡು ಕಾಮಗಾರಿಗಳು ಪ್ರಸ್ತುತ ತ್ವರಿತಗತಿಯಲ್ಲಿ ಮೇಲೆದ್ದು ನಿಲ್ಲಲು ಸಾಧ್ಯವಾಗಿದೆ.