Breaking News
ಕುವೆಂಪು ವಿಶ್ವವಿದ್ಯಾಲಯದಿಂದ  ಕೃಷ್ಣಕುಮಾರ್ ಮೈಲಾ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

 

 

ಕಿಷ್ಕಿಂಧವಾಣಿ ಸುದ್ದಿ

​ಗಂಗಾವತಿ:ನಗರದ ಕಲ್ಮಠ ವಿಜ್ಞಾನ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಕುಮಾರ್ ಮೈಲಾ ಅವರು ತಮ್ಮ  ಸಂಶೋಧನೆಗಾಗಿ ಕುುವೆಂಪು ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪಡೆದುಕೊಂಡಿದ್ದಾರೆ. ​ ಕೃಷ್ಣಕುಮಾರ್ ಅವರು ಮಾರ್ಗದರ್ಶಕ ಡಾ. ಶ್ವೇತಾ ಅಳವಂಡಿ ಅವರ ಮಾರ್ಗದರ್ಶನದಲ್ಲಿ ​”ಕರ್ನಾಟಕದ ಗಂಗಾವತಿ ತಾಲೂಕಿನ ಹನುಮನಹಳ್ಳಿ ಪ್ರದೇಶದಲ್ಲಿ ಅವಿಫೌನಾಗಳ (Avifauna) ವೈವಿಧ್ಯತೆ ಮತ್ತು ವಿತರಣೆಯ ಕುರಿತು ಅಧ್ಯಯನಗಳು – ಜೇನುನೊಣ ತಿನ್ನುವವರಿಗೆ ವಿಶೇಷ ಉಲ್ಲೇಖದೊಂದಿಗೆ (ಮೆರಾಪ್ಸ್ ಫಿಲಿಪಿನಸ್ ಮತ್ತು ಮೆರಾಪ್ಸ್ ಓರಿಯಂಟಲಿಸ್)”  ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ್ದಕ್ಕೆ ಡಾಕ್ಟರೇಟ್ ಪದವಿ ದೊರಕಿದೆ. ​ ಏಪ್ರಿಲ್ 6, 2026 ರಂದು ನಡೆದ ಕುುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಕೃಷ್ಣಕುಮಾರ್ ಮೈಲಾ ಅವರಿಗೆ  ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನಾಗರಾಜ ನಂದಾಪುರ ನೇಮಕ

*ಶಾಮೀದ್ ಮನಿಯಾರ್ ಗೆ ರಾಜ್ಯಮಟ್ಟದ ನಿಗಮ ಮಂಡಳಿಯಲ್ಲಿ ಸ್ಥಾನದ ಭರವಸೆ
*ತೀವ್ರ ಯತ್ನದ ಮಧ್ಯೆ
ಅನ್ಸಾರಿ ಬಣದ ಹುಸೇನಪ್ಪ ಹಂಚಿನಾಳ ಗೆ ತಪ್ಪಿದ ಅಧ್ಯಕ್ಷ ಸ್ಥಾನ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕೊನೆಗೂ ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಾಗರಾಜ ನಂದಾಪೂರ ಅವರಿಗೆ ಲಭಿಸಿದ್ದು, ಕಳೆದ 8 ವರ್ಷ 3 ತಿಂಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಗರಸಭೆ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್ ಅವರಿಗೆ ರಾಜ್ಯಮಟ್ಟದ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸುವ ಭರವಸೆಯೊಂದಿಗೆ ನಾಗರಾಜ ನಂದಾಪೂರ ಅವರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಮೇ,05 ರಂದು ನೇಮಕ ಮಾಡಿ ಆದೇಶ ಹೊರಡಿಸಿ ಪಕ್ಷ ಸಂಘಟನೆಯನ್ನು ಎಲ್ಲರ ಜತೆಗೂಡಿ ಮಾಡುವಂತೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ.
ಚಲುವಾದಿ ಸಮಾಜದ (ದಲಿತ ಬಲಗೈ) ಸಮುದಾಯದವರಾಗಿರುವ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ನಾಗರಾಜ ನಂದಾಪುರ ಅವರು ಈ ಹಿಂದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಣದಲ್ಲಿ ಗುರುತಿಸಿಕೊಂಡು ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ನಂತರ ಅನ್ಸಾರಿ ಬಣದಿಂದ ಹೊರ ಬಂದಿದ್ದ ನಂದಾಪುರ ನಾಗರಾಜ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ.

****
ಕಾಂಗ್ರೆಸ್ ಹೈಕಮಾಂಡ್ ನನಗೆ ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದೆ. ನಾನು ಗಂಗಾವತಿಯಲ್ಲಿ ಯಾವುದೇ ಬಣ ರಾಜಕಾರಣ ಮಾಡಿದವನಲ್ಲ. ಎಲ್ಲಾ ಮುಖಂಡರೊಂದಿಗೆ ಆತ್ಮೀಯದಿಂದ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಹೈಕಮಾಂಡ್ ನನಗೆ ಈ ಜವಬ್ದಾರಿ ನೀಡಿದೆ. ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರ ವಿಶ್ವಾಸದಿಂದ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ. ಬಣ ರಾಜಕಾರಣಕ್ಕೆ ಮುಕ್ತಿ ಹಾಡಿ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಗಟ್ಟಿ ನೆಲೆ ತಂದುಕೊಡುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಬ್ದಾರಿ ನೀಡಿರುವ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೂ, ಕಾರ್ಯಕರ್ತರಿಗೂ ಅಭಿನಂದಿಸುತ್ತೇನೆ. ಪಕ್ಷದ ಸೂಚನೆಯಂತೆ ನಾನು ಕೆಲಸ ಮಾಡುತ್ತೇನೆ.
-ನಾಗರಾಜ ನಂದಾಪೂರ ನಗರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ

***
ಕಾಂಗ್ರೆಸ್ ಪಕ್ಷ ನನಗೆ ಗಂಗಾವತಿ ನಗರ ಬ್ಲಾಕ್ ಅಧ್ಯಕ್ಷನಾಗಿ ಎಂಟು ವರ್ಷಗಳ ಮೂರು ತಿಂಗಳ ಕಾಲ ಕೆಲಸ ಮಾಡುವ ಅವಕಾಶ ನೀಡಿತ್ತು. ಪಕ್ಷದ ಸಿದ್ಧಾಂತದಂತೆ ನಾನು ಇಲ್ಲಿವರೆಗೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ನಾಗರಾಜ ನಂದಾಪುರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ನಾನು ಸ್ವಾಗತಿಸುತ್ತೇನೆ. ಇಷ್ಟು ವರ್ಷ ಸುದೀರ್ಘವಾಗಿ ಪಕ್ಷದ ಸಂಘಟನೆ ಮಾಡಿರುವುದು ಮತ್ತು ಮೂರು ಅವಧಿ ನಗರಸಭೆ ಸದಸ್ಯನಾಗಿ ಅನುಭವ ಹೊಂದಿರುವ ನನಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯಮಟ್ಟದ ನಿಗಮ ಮಂಡಳಿಯ ಹೆಚ್ಚಿನ ಜವಬ್ದಾರಿ ನೀಡುತ್ತದೆ ಎಂಬ ವಿಶ್ವಾಸವಿದೆ. ನೂತನ ಬ್ಲಾಕ್ ಅಧ್ಯಕ್ಷರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ.
-ಶ್ಯಾಮೀದ್ ಮನಿಯಾರ್, ನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು.

ಫಿಕ್ಸ್ ಆಯ್ತು ಗೌಳಿಮಹಾದೇವಪ್ಪ ಬೈಪಾಸ್ ರಸ್ತೆಯ ಅಗಲೀಕರಣ!

*ರಾಣಾ ಪ್ರತಾಪ್ ಸಿಂಗ್ ಸರ್ಕಲ್ ನಿಂದ ನೀಲಕಂಠೇಶ್ವರ ಸರ್ಕಲ್ ವರೆಗಿನ ಕಾಮಗಾರಿಗೆ ಮರು ಜೀವ!
*ರಸ್ತೆ ಅಗಲೀಕರಣ ಮಾಡಲು ನಗರಸಭೆ ಅಧಿಕಾರಿಗಳಿಂದ ಮೂಲ ದಾಖಲಾತಿಯಂತೆ ಅಳತೆ.
*80 ಪೀಟ್ ಅಳತೆಯ ದ್ವಿಮುಖ ರಸ್ತೆ,ಒತ್ತುವರಿ ತೆರವು ಶೀಘ್ರ

ಕಿಷ್ಕಿಂಧವಾಣಿ ಕೊಪ್ಪಳ
ಗಂಗಾವತಿ: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು ಈ ಮಧ್ಯೆ ನಗರಕ್ಕೆ ಪ್ರಮುಖ ಸಂಪರ್ಕ ಕೊಂಡಿಯಂತಿರುವ ಜುಲೈ ನಗರದಿಂದ ನೀಲಕಂಠೇಶ್ವರ ನಗರದ ಸರ್ಕಲ್ ವರೆಗಿನ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆಯ ಅಗಲೀಕರಣ ನಿಗದಿಯಾಗಿದ್ದು ಶೀಘ್ರದಲ್ಲೇ ಬೈಪಾಸ್ ರಸ್ತೆಯ ಒತ್ತುವರಿ ಕಾಮಗಾರಿ ಕಾರ್ಯಾಚರಣೆ ಜರುಗಲಿದೆ.
ಜುಲೈನಗರದ ಇಂದಿರಾಗಾಂಧಿ ಸರ್ಕಲ್ ನಿಂದ ಕನಕದಾಸ ಸರ್ಕಲ್ ವರೆಗೆ 80 ಪೀಟ್ ರಸ್ತೆ ಇದ್ದು ಇದರಲ್ಲಿ ಎಡ ಬಲ ಎರಡು ಭಾಗದಲ್ಲಿ 5-10 ಪೀಟ್ ರಸ್ತೆಯ ಒತ್ತುವರಿ ಮಾಡಿರುವುದರಿಂದ ಪುಟ್ ಪಾತ್ ಇಲ್ಲವಾಗಿದೆ. ರಸ್ತೆಗೆ ಬೈಕ್ ಸೇರಿ ವಾಹನಗಳು ಹಾಗೂ ಪಾದಚಾರಿಗಳು ನಿಲ್ಲುವುದರಿಂದ ಕೇಂದ್ರ ಬಸ್ ನಿಲ್ದಾಣ ಹಾಗೂ ಹೊಸಪೇಟೆ, ಆನೆಗೊಂದಿ ಮತ್ತು ಹುಲಿಗಿ ಕಡೆ ಹೋಗುವ ಬಸ್,ಲಾರಿ ಇತರೆ ವಾಹನಗಳು ಹೋಗಲು ತೊಂದರೆ ಆಗುತ್ತಿದೆ.ಜತೆಗೆ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿದೆ.‌ಕಳೆದ ಹತ್ತು ವರ್ಷಗಳಿಂದ ಬೈಪಾಸ್ ರಸ್ತೆ ಅಗಲೀಕರಣ ಮಾಡಲು ನಗರಸಭೆಯವರು ಯತ್ನಿಸಿದರೂ ಕೆಲವರು ಕೋರ್ಟ್ ಮೂಲಕ ತಡೆಯಾಜ್ಞೆ ತಂದು ಕಾಮಗಾರಿ‌ ನಡೆಯದಂತೆ ತಡೆಯುತ್ತಿದ್ದಾರೆ. ಪರಣ್ಣ ಮುನವಳ್ಳಿ ಮುನವಳ್ಳಿ ಶಾಸಕರಾಗಿದ್ದ ವೇಳೆ ನಗರೋತ್ಥಾನ ವಿಶೇಷ ಅನುದಾನದಲ್ಲಿ ಅಗಲೀಕರಣ ವಿದ್ಯುತ್ ದೀಪ ಅಳವಡಿಸಲು ಟೆಂಡರ್ ಕರೆದ ಸಂದರ್ಭದಲ್ಲಿ ನ್ಯಾಯಾಲಯದಿಂದ ಕೆಲವರು ತಡೆಯಾಜ್ಞೆ ತಂದಿದ್ದರು.ಇದೀಗ ಕಳೆದ ಮೂರು ವರ್ಷಗಳಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕೋರ್ಟ್ ಗೆ ಹೋಗಿದ್ದವರ ಸ್ಥಳೀಯರು ಹಾಗೂ ಕಾಂಟ್ರಾಕ್ಟರ್ ಅವರೊಂದಿಗೆ ಸಂಧಾನದ ಮಾತುಕತೆ ನಡೆಸಿ ರಸ್ತೆ ಅಗಲೀಕರಣ ಮಾಡಲು ಆರಂಭಿಸಿದ್ದು ಕಳೆದ ಮೂರು ದಿನಗಳಿಂದ ಒತ್ತುವರಿ ಮಾಡಿದ ಮನೆ,ವಾಣಿಜ್ಯ ಸಂಕೀರ್ಣಗಳ ಮಾರ್ಕ್ ಮಾಡುವ ಕಾರ್ಯ ನಡೆದಿದೆ.ನಗರದ ಸೌಂದರ್ಯ ಮತ್ತು ವಿಶಾಲ ರಸ್ತೆಗಳ ಸಲುವಾಗಿ ಬೈಪಾಸ್ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ.ಈಗಾಗಲೇ ನಗರದಲ್ಲಿ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆ ಅಗಲೀಕರಣ ಕುರಿತು ಚರ್ಚೆಗಳು ಆರಂಭವಾಗಿವೆ.

***
ನಗರದ ಸೌಂದರ್ಯದ ದೃಷ್ಟಿಯಿಂದ ಮತ್ತು ನಗರಕ್ಕೆ ದೇಶ ವಿದೇಶದ ಪ್ರವಾಸಿಗರು, ವಾಣಿಜ್ಯೋದ್ಯಮಗಳು ಆಗಮಿಸುವುದರಿಂದ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ. ರಾಣಾ ಪ್ರತಾಪ್ ಸಿಂಗ್ ಸರ್ಕಲ್ ನಿಂದ ತಿರುಮಲಾಪುರದ ವರೆಗೆ ರಸ್ತೆಯನ್ನು ಅಗಲೀಕರಣ ಮಾಡಿ ದ್ವಿಮುಖ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಗಂಗಾವತಿ ನಗರ ಹಾಗೂ ಗ್ರಾಮೀಣ ಭಾಗಕ್ಕೆ ಬಹಳ ಅನುಕೂಲವಾಗಲಿದೆ. ಪ್ರವಾಸೋದ್ಯಮ ಬೆಳೆದು ನೇರ ಪರೋಕ್ಷ ಉದ್ಯೋಗ ದೊರಕಲಿವೆ. ಆದ್ದರಿಂದ ಗಂಗಾವತಿಯ ಜನರು ಮತ್ತು ಗ್ರಾಮೀಣ ಭಾಗದ ಜನರು ರಸ್ತೆಯ ಅಗಲೀಕರಣಕ್ಕೆ ಸಹಕರಿಸಬೇಕು. ಈಗಾಗಲೇ ನಗರಸಭೆ ಅಧಿಕಾರಿಗಳು ಬೈಪಾಸ್ ರಸ್ತೆಯ ಸರ್ವೆ ಮಾಡಿ ಒತ್ತುವರಿ ಮಾರ್ಕಿಂಗ್ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಬೈಪಾಸ್ ರಸ್ತೆಯಲ್ಲಿ ಒತ್ತುವರಿ ಮಾಡಿದ ರಸ್ತೆಯನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ. ಒತ್ತುವರಿ ಮಾಡಿದವರು ಸ್ವಯಂ ಪ್ರೇರಣೆಯಿಂದ ಸರ್ಕಾರಿ ಜಾಗವನ್ನು ಬಿಟ್ಟು ಕೊಡಬೇಕು, ಇಲ್ಲದಿದ್ದರೆ ನಗರಸಭೆಯ ಜೆಸಿಬಿ ಗಳಿಂದ ತೆರವು ಮಾಡಿಸಲಾಗುತ್ತದೆ.
-ಗಾಲಿ ಜನಾರ್ದನ ರೆಡ್ಡಿ ಶಾಸಕರು.

***
ನಗರದಲ್ಲಿರುವ ಫುಟ್ಪಾತ್ಗಳ ಒತ್ತುವರಿ ಮತ್ತು ರಸ್ತೆಯ ಒತ್ತುವರಿಯನ್ನು ತೆರವು ಕಾರ್ಯಾಚರಣೆ ಮೂಲಕ ಬಿಡಿಸಿಕೊಳ್ಳಲಾಗುತ್ತದೆ. ಅದರಂತೆ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆಯು ಸಹ ಅಗಲೀಕರಣ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಈಗಾಗಲೇ ಸರ್ವೇ ಮಾಡಿ ಮಾರ್ಕಿಂಗ್ ಮಾಡಿದ ಜಾಗದಲ್ಲಿ ಶೀಘ್ರದಲ್ಲೇ ಅಗಲೀಕರಣ ಮಾಡಲಾಗುತ್ತದೆ. ಒತ್ತುವರಿ ಮಾಡಿದವರು ಸ್ವಪ್ರೇರಣೆಯಿಂದ ತೆರವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಗರಸಭೆ ವತಿಯಿಂದ ತೆರವು ಮಾಡಲಾಗುತ್ತದೆ.
-ಆರ್.ವಿರೂಪಾಕ್ಷ ಮೂರ್ತಿ ಪೌರಾಯುಕ್ತರು.ನಗರಸಭೆ

95 ಗಂಟೆಗಳಲ್ಲಿ 4750 ಕಿ.ಮೀ. ಪ್ರಯಾಣಿಸಿ ಸೋಮಾಲಿಯಾದಿಂದ ಬಿಹಾರಕ್ಕೆ ಆಗಮಿಸಿದ ಗಿಡುಗ ಪಕ್ಷಿ!

 

ಕಿಷ್ಕಿಂಧವಾಣಿ ಸುದ್ದಿ(ಆನ್ ಲೈನ್ ಕೃಪೆ)

ಗಯಾ(ಬಿಹಾರ): ಗಿಡುಗ ಒಂದು 98 95 ಗಂಟೆಗಳಲ್ಲಿ 4750 ಕಿ.ಮೀ ಕ್ರಮಿಸಿ ಬಿಹಾರ್ ರಾಜ್ಯದ ಗಯಾ ಪ್ರದೇಶಕ್ಕೆ ಆಗಮಿಸಿದ ಅಪರೂಪದ ಘಟನೆ ಜರುಗಿದೆ. ‘ಅಪಾಪಂಗ್’ ಎಂದು ಹೆಸರಿಡಲಾದ ಅಮುರ್ ಫಾಲ್ಕನ್(ಗಿಡುಗ) ಹಕ್ಕಿಯೊಂದು, ಸೋಮಾಲಿಯಾದಿಂದ ಭಾರತಕ್ಕೆ ಸುಮಾರು 4,750 ಕಿ.ಮೀ. ದೂರವನ್ನು ಕೇವಲ 95 ಗಂಟೆಗಳಲ್ಲಿ ನಿರಂತರ ಹಾರಾಟದ ಮೂಲಕ ಪೂರೈಸಿದೆ. ಈ ಬಗ್ಗೆ ಈ ಹಕ್ಕಿಯ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಸೈಬೀರಿಯಾ ಮತ್ತು ಚೀನಾದಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗುವಾಗ ಭಾರತದ ಮೂಲಕ ಹಾದುಹೋಗುವ ಸಣ್ಣ ವಲಸೆ ಹಕ್ಕಿ ಇದಾಗಿದೆ. ಇಷ್ಟು . ಸುದೀರ್ಘ ಹಾರಾಟ ನಡೆಸುವುದಕ್ಕಾಗಿ ಗಾಳಿಯ ಅನುಕೂಲತೆ ಮತ್ತು ಬದುಕುಳಿಯಲು ತಮ್ಮ ದೇಹದ ಕೊಬ್ಬಿನ ಸಂಗ್ರಹವನ್ನೇ ಈ ಹಕ್ಕಿಗಳು ಅವಲಂಬಿಸಿರುತ್ತವೆ. ಉಪಗ್ರಹದ ಮೂಲಕ ಈ ಹಕ್ಕಿಯ ವಲಸೆ ಮಾರ್ಗದ ಕಣ್ಣಾವಲು ನಡೆಸಲಾಗುತ್ತಿದೆ. ಆಫ್ರಿಕಾ ಖಂಡದ ಹೊರಟು ಸೋಮಾಲಿಯಾದಿಂದ ವಿಶಾಲ ಅರಬ್ಬಿ ಸಮುದ್ರದುದ್ದಕ್ಕೂ ರೆಕ್ಕೆ ಬಡಿಯುತ್ತಾ ನಿರಂತರವಾಗಿ ಸಾಗಿ, ವಾರಾಣಸಿ ಬಳಿ ವಿಶ್ರಾಂತಿಗಾಗಿ ಇಳಿದಿದೆ. ಇಲ್ಲಿ ಕೆಲ ಗಂಟೆಗಳ ವಿಶ್ರಾಂತಿ ಪಡೆದು, ಮತ್ತೆ 200 ಕಿ.ಮೀ. ಹಾರಾಟ ನಡೆಸಿ ಬಿಹಾರದ ಗಯಾದಲ್ಲಿ ತಂಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಪ್ಪಳ: ಬಲ್ಡೋಟಾ ಉಕ್ಕಿನ ಯೋಜನೆಗೆ ಭೂಮಿಸ್ವಾಧೀನ ಕಾನೂನು ಬದ್ದವಾಗಿದೆ.

 

*ಅತೀಕ್ರಮ ಪ್ರವೇಶ ಕಾನೂನು ರೀತಿ ಕ್ರಮ

ಕಿಷ್ಕಿಂಧವಾಣಿ ಸುದ್ದಿ

ಹೊಸಪೇಟೆ: ಕೊಪ್ಪಳ ಹತ್ತಿರ

ಬಲ್ಡೋಟಾ ಸಮೂಹದ ಸಮಗ್ರ ಉಕ್ಕಿನ ಯೋಜನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯು ಕಾನೂನುಬದ್ಧವಾಗಿದ್ದು ಮತ್ತು ಅದರ ಉದ್ದೇಶಿತ ಕೈಗಾರಿಕಾ ಬಳಕೆಗಾಗಿ ಸರಿಯಾಗಿದೆ ಎಂದು ಗೌರವಾನ್ವಿತ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಬಲ್ಡೋಟಾ ಸಮೂಹ ಸಂಸ್ಥೆಯ ಮ್ಯಾನೇಜರ್ ಬ್ರ್ಯಾಂಡಿಂಗ್ ಮಹೇಶ ಮಾಂಕ್ರೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಲ್ಡೋಟಾ ಸಮೂಹವು ಈ ಭೂಮಿಯ ಕಾನೂನುಬದ್ಧ ಸಂರಕ್ಷಕರಾಗಿದ್ದು, ಅದರ ಅಭಿವೃದ್ಧಿ, ನಿರ್ವಹಣೆ ಮತ್ತು ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿದೆ. ಈ ಯೋಜನಾ ಸ್ಥಳದಲ್ಲಿ ಈಗಾಗಲೇ ಪೆಲೆಟ್ ಪ್ಲಾಂಟ್ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ನಿರಂತರವಾಗಿ ಟ್ರಕ್‌ಗಳ ಸಂಚಾರವಿರುತ್ತದೆ ಮತ್ತು ಸುಮಾರು 800 ಜನರು ಕೆಲಸ ಮಾಡುತ್ತಿದ್ದಾರೆ. ಕಾರ್ಯನಿರ್ವಹಣೆಯ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಸುರಕ್ಷತೆಯಲ್ಲಿ ಯಾವುದೇ ರಾಜಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಸ್ಥೆಯ ಮೇಲಿದೆ.

ಕೈಗಾರಿಕಾ ಪ್ರದೇಶದ ಆವರಣದೊಳಗೆ ಯಾವುದೇ ಅನಧಿಕೃತ ಅಥವಾ ಬಲವಂತದ ಪ್ರವೇಶವನ್ನು ಅತಿಕ್ರಮಣ ಎಂದು ಪರಿಗಣಿಸಲಾಗುತ್ತದೆ ಮತ್ತು ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.ಈ ಮೂಲಕ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎಲ್ಲಾ ಸಂಬಂಧಪಟ್ಟವರು, ಕೇವಲ ಸತ್ಯಾಂಶಗಳನ್ನು ಅವಲಂಬಿಸಬೇಕೆಂದು ಮತ್ತು ಯೋಜನಾ ಪ್ರದೇಶದ ಕಾನೂನುಬದ್ಧ ಸ್ಥಿತಿಯನ್ನು ಗೌರವಿಸಬೇಕೆಂದು ವಿನಂತಿಸಿದ್ದಾರೆ.