Breaking News
ಬಂಜಾರ ರಾಷ್ಟ್ರೀಯ ಹೋಳಿ ಉತ್ಸವ-2026:ಯಶಸ್ವಿಯಾಗಿ ನಡೆದ ಬಂಜಾರ ಕವಿಗೋಷ್ಠಿ.

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: ಹೋಳಿ ಹುಣ್ಣಿಮೆಯಂದು ನಡೆಯುವ ಹೋಳಿ ಹಬ್ಬವು ಬಂಜಾರ ಸಮುದಾಯದ ಅತ್ಯಂತ ಪ್ರಮುಖ ಆಚರಣೆಯಾಗಿದೆ. ಎಲ್ಲಾ ತಾಂಡಾಗಳಲ್ಲೂ ಮಹಿಳೆ ಹಾಗೂ ಪುರುಷರು ವಿಶಿಷ್ಟ ಶೈಲಿಯ ಉಡುಪುಗಳನ್ನು ಧರಿಸಿ ಕೋಲುಗಳನ್ನು ಹಿಡಿದು ಬಂಜಾರ ಜಾನಪದ ಹಾಡುಗಳನ್ನು ಹಾಡುತ್ತಾ ವೃತ್ತಾಕಾರದಲ್ಲಿ ನಗಾರಿ ಹಾಗೂ ತಮಟೆಯ ತಾಳಕ್ಕೆ ಕುಣಿದು ಉತ್ಸಾಹದಿಂದ ಆಚರಿಸುತ್ತಾರೆ.

ಅದೇರೀತಿ ಕೊಪ್ಪಳದ ಐತಿಹಾಸಿಕ ಬಹಾದ್ದೂರ ಬಂಡೆಯಲ್ಲಿ ಇರುವ ಹಾತಿರಾಮ ಬಾವಾಜಿ ರವರ ಕಟ್ಟೆ ಆವರಣದಲ್ಲಿ ಮಾ-3 ರಂದು ಮಹಿಳೆಯರ ಘೂಮರ್ ನೃತ್ಯ, ಡೊಡೋ ನಂಗಾರ ನೃತ್ಯ, ಪುರುಷರ ಲೆಹಂಗಿ ನೃತ್ಯ, ವಾಜಾ-ಭಜನೆ ಅತ್ಯಂತ ಅದ್ಧೂರಿಯಾಗಿ ನಡೆದವು. ಇವರು ತಮ್ಮ ಹಾಡುಗಳಲ್ಲಿ ಹೋಳಿಯ ಹಿನ್ನೆಲೆ, ಸಂಪ್ರದಾಯ, ಪರಂಪರೆ ಕುರಿತು ಹೇಳುತ್ತಾ ಇಡೀ ರಾತ್ರಿ ಸಂಭ್ರಮಿಸಿ ಬೆಳಗಿನ ಜಾವ ಹೋಳಿ ದಹನ ಮಾಡಿ ಸಂಪನ್ನಗೊಳಿಸಿದರು. ಬಂಜಾರ ಸಮುದಾಯದ ವಿಶಿಷ್ಠ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಹಬ್ಬ-ಹರಿದಿನಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋಳಿ ಹುಣ್ಣಿಮೆಯಂದು ರಾಷ್ಟ್ರೀಯ ಹೋಳಿ ಉತ್ಸವ-2026 ರ ನಿಮಿತ್ಯ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು,

ರಾಜ್ಯ ಘಟಕದ ವತಿಯಿಂದ ಉತ್ಸವದ ವೇದಿಕೆಯಲ್ಲಿ ಬಂಜಾರರ ಸಾಹಿತ್ಯದ ರಾಜ್ಯ ಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿತ್ತು,

ಈ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆಮೂಲೆಯಿಂದ ಐವತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಂಗಾವತಿಯ ಎಸ್.ಆರ್. ಸರೋಜಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಇತಿಹಾಸ ಸಂಶೋಧಕ ಡಾ. ರವಿ ಚವ್ಹಾಣ ಮಾತನಾಡಿ, ಬಂಜಾರರ ಮೂಲ ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಕವನಗಳ ಮೂಲಕ ಪ್ರಚುರಪಡಿಸಿದ್ದು ಬಹಳ ಹೆಮ್ಮೆಯ ವಿಷಯ, ಸಮುದಾಯದ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಾಹಿತ್ಯದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಕವಿಗೋಷ್ಠಿ ಸಹಕಾರಿಯಾಗಿದೆ, ಇಂದಿನ ಯುವ ಪೀಳಿಗೆ ಮೊಬೈಲ್ ಹಾಗೂ ಡಿ.ಜೆ. ಹುಚ್ಚಿನಿಂದ ಹೊರಬಂದು ಉನ್ನತ ವಿದ್ಯಾಭ್ಯಾಸ ಪಡೆದು ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಲಿಂಗಸುಗೂರಿನ ವಿಜಯ ಮಹಾಂತೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕೊಪ್ಪಳದ ಶ್ರೀ ಗುರು ಗೋಸಾವಿ ಬಾವಾನವರು ಆಶೀರ್ವಚನ ನೀಡಿದರು. ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀಕಾಂತ ಜಾಧವ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಛತ್ರಪ್ಪ ತಂಬೂರಿರವರು ಆಶಯ ನುಡಿಗಳನ್ನು ಹೇಳಿದರು. ಯಾದಗಿರಿಯ ಸುವರ್ಣಬಾಯಿ ರಾಠೋಡ ಹಾಗೂ ಡಾ. ಮಿಟ್ಯಾ ನಾಯ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷ ಪ್ರಕಾಶ ರಾಠೋಡ ತರಲಕಟ್ಟಿ ಹಾಗೂ ಶಿವಾನಂದ ನಾಯ್ಕ ಮುಖ್ಯ ಅಭಿಯಂತರರು ರವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ ಕುರಿತು ಮಾತನಾಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಬಂಜಾರ ಕವಿಗಳಾದ ಡಾ. ಎಲ್.ಪಿ. ಕಠಾರಿ ನಾಯ್ಕ, ಕುಬೇರ ನಾಯ್ಕ, ಜ್ಯೋತಿ ಕೃಷ್ಣನಾಯ್ಕ ಬಾಗಲಕೋಟೆ, ಮೋತಿಲಾಲ್ ರಾಠೋಡ ಹುಬ್ಬಳ್ಳಿ, ಪ್ರವೀಣಕಮಾರ ಹರಪನಹಳ್ಳಿ, ಮೂರ್ತಿ ಎಲ್., ಸುರೇಶ ಕಲಾಪ್ರಿಯ, ಲಕ್ಷ್ಮಣ ನಾಯ್ಕ ಎ.ಐ.ಬಿ.ಎಸ್.ಎಸ್, ವಸಂತ್ ಚವ್ಹಾಣ ವಿಜಯಪುರ, ದೀಪಾ ರಾಠೋಡ ಕಾರಟಗಿ, ಪುಷ್ಪಾಬಾಯಿ ಹೂವಿನಹಡಗಲಿ, ಶಂಕರ ನಾಯ್ಕ, ಕುಮಾರ ರಾಠೋಡ, ಕೂಪಳಗಡ್ ಬಹಾದ್ದೂರ ಬಂಡಾ ಟ್ರಸ್ಟನ ಅಧ್ಯಕ್ಷರಾದ ಭರತ ನಾಯ್ಕ, ಗಂಗಾವತಿಯ ಶಿವಪ್ಪ ಜಾಗೊ, ರವಿನಾಯ್ಕ ಚವ್ಹಾಣ, ಪಾಂಡುನಾಯ್ಕ, ವೆಂಕಟೇಶ ನಾಯ್ಕ ಹಾಗೂ ಅನೇಕ ಕವಿಗಳು, ಹಿರಿಯರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.