ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನ್ಯಾಯಾಧೀಶರ ಭೇಟಿ!

*ಅನ್ನದಲ್ಲಿ ಕಲ್ಲು,,ಗಾಜು,ಹುಳು,ಉಪ್ಪಡಿ
ವಿದ್ಯಾರ್ಥಿನಿಯರ ಹೇಳಿಕೆ.
*ಊಟ ಬಡಿಸಲು ಎರಡನೇ ಚಮಚ,ನೂರಾರು ವಿದ್ಯಾರ್ಥಿನಿಯರಿಗೆ ಮೂರೇ ದಿನಪತ್ರಿಕೆ.
*ಅಡುಗೆದಾರರ ಬದಲಿಸುವಂತೆ ಎಜೆನ್ಸಿಗೆ ನ್ಯಾಯಾಧೀಶರ ಸೂಚನೆ.
*ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ನ್ಯಾಯಾಲಯಕ್ಕೆ ಆಗಮಿಸುವಂತೆ ಸೂಚನೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ಗೆ ಒಂದನೆಯ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಭೇಟಿ ನೀಡಿ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಂದ ಸಮಸ್ಯೆಗಳನ್ನು ಆಲಿಸಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸಮಸ್ಯೆಗಳ ಸುರಿಮಳೆಯನ್ನೇ ನ್ಯಾಯಾಧೀಶರ ಮುಂದೆ ಹೇಳಿ ತಮ್ಮ ಅಳಲನ್ನು ತೋಡಿಕೊಂಡರು.
ಗ್ರಾಮೀಣ ಭಾಗದ ಎಸ್ ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಉನ್ನತ ವಿದ್ಯಾಭ್ಯಾಸ ಮಾಡಲು ನಗರ ಪ್ರದೇಶಕ್ಕೆ ಆಗಮಿಸಿ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್ ನಲ್ಲಿ ವಸತಿ ಇದ್ದು ಸರ್ಕಾರ ಕಲ್ಪಿಸುವ ಸೌಲಭ್ಯದ ಊಟ, ಮೂಲಸೌಕರ್ಯದ ಓದಿ ಬದುಕು ಕಟ್ಟಿಕೊಳ್ಳುವ ಉದ್ದೇಶವನ್ನು ನಿರಾಸೆಗೊಳಿಸುವಂತೆ ಹಾಸ್ಟೆಲ್ ವಾರ್ಡನ್, ಅಡುಗೆದಾರರು ಕಾರ್ಯನಿರ್ವಹಿಸುತ್ತಿರುವ ಕುರಿತು ನ್ಯಾಯಾಧೀಶರುಗಳ ಮುಂದೆ ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಂಡರು.
ಅನ್ನದಲ್ಲಿ ಕಲ್ಲು,ಗಾಜು,ಹುಳು, ಉಪ್ಪಡಿಗಳು ಬರುತ್ತಿವೆ,ಅನ್ನ ಸಾಂಬಾರ ಬಡಿಸಲು ಎರಡು ಚಮಚಗಳಿವೆ, ೧೮೦ ವಿದ್ಯಾರ್ಥಿನಿಯರಿದ್ದು ಕೇವಲ ಮೂರು ದಿನಪತ್ರಿಕೆಗಳನ್ನು ತೋರಿಸಲಾಗುತ್ತದೆ ಇದರಿಂದ ಎಲ್ಲರೂ ಪೇಪರ್ ಓದಲು ಆಗುತ್ತಿಲ್ಲ ಎಂದು ಹಾಸ್ಟೆಲ್ ನಲ್ಲಿದ್ದ ಮೂಲಸೌಕರ್ಯಗಳ ಕೊರತೆಗಳ ಕುರಿತು ಹೇಳಿಕೊಂಡರು.
ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗೆ ಸರಿಯಾದ ಊಟ ಪೂರೈಸಬೇಕು.ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ರಾಜ್ಯ,ಜಿಲ್ಲಾ ಮಟ್ಟದ ದಿನಪತ್ರಿಕೆಗಳನ್ನು ತರಿಸಬೇಕು.ಅಡುಗೆದಾರರನ್ನು ಬದಲಿಸಬೇಕು,ಸಮಸ್ಯೆಗಳನ್ನು ಚರ್ಚಿಸಲು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ನ್ಯಾಯಾಲಯಕ್ಕೆ ಆಗಮಿಸಿ ವಿವರಣೆ ನೀಡುವಂತೆ ನ್ಯಾಯಾಧೀಶರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ
ಒಂದನೇಯ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಸೇರಿ ಹಾಸ್ಟೆಲ್ ವಾರ್ಡನ್ ಸಿಬ್ಬಂದಿಯವರಿದ್ದರು.

