ಎಎಸ್ ಐ ಸ್ಮಾರಕಗಳಿಲ್ಲದಿದ್ದರೂ ಆನೆಗೊಂದಿ ಕಿಷ್ಕಿಂಧಾ ಭಾಗ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅವೈಜ್ಞಾನಿಕ, ಪ್ರಾಧಿಕಾರದಿಂದ ಕಿಷ್ಕಿಂಧಾ ಭಾಗ ಕೈ ಬಿಡುವಂತೆ ಆಗ್ರಹ!
*ಮಾ.18ರಂದು ಕಡೆಬಾಗಿಲು ಶ್ರೀರಂಗದೇವರಾಯಲು ಸರ್ಕಲ್ ಬಳಿ ಸ್ಥಳೀಯರಿಂದ ಪ್ರತಿಭಟನೆ.
*ಸ್ಟೇಕ್ ಹೋಲ್ಡರ್ ಅಭಿಪ್ರಾಯವಿಲ್ಲದೆ 2021 ರಲ್ಲಿ ಮಾಸ್ಟರ್ ಪ್ಲಾನ್ ರಚನೆ ಆಕ್ರೋಶ.
*ಹಲ್ಲು ಕಿತ್ತ ಹಾವಿನಂತಾಗಿರುವ ಆನೆಗೊಂದಿ, ಸಾಣಾಪೂರ ಮತ್ತು ಮಲ್ಲಾಪೂರ ಗ್ರಾ.ಪಂ.ಆಡಳಿತ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಆನೆಗುಂದಿ ಭಾಗದಲ್ಲಿ ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಎಎಸ್ಐ ಸ್ಮಾರಕಗಳು ಇರದಿದ್ದರೂ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅಭಿವೃದ್ಧಿಗೆ ಮಾರಕಾಗುವಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಕೂಡಲೇ ಆನೆಗೊಂದಿ ಕಿಸ್ಕಿಂದ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ವೆಂಕಟೇಶ್ ಬಾಬು ಹಾಗೂ ಗ್ರಾಮ ಮಾಜಿ ಸದಸ್ಯ ಮಲ್ಲಿಕಾರ್ಜುನ ಹಿರೇಮಠ ಒತ್ತಾಯಿಸಿದರು.
ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 35 ವರ್ಷಗಳಿಂದ ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಜೊತೆಗೆ ನೂರಾರು ವರ್ಷಗಳಿಂದ ವಾಸವಾಗಿರುವ ಮನೆಗಳನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಡ್ಡಗಾಲು ಹಾಕುತ್ತಿದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರು ಪರವಾನಿಗೆ ಪಡೆಯಲು ಹರಸಹಾಸಪಟ್ಟರೂ ಹಂಪಿ ಅಭಿವೃದ್ಧಿ ಪದಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಸ್ಥಳೀಯ ಯುವಕರೆಲ್ಕಾ ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗುವ ಸ್ಥಿತಿ ಬಂದಿದೆ. ಗ್ರಾಮ ಸ್ವರಾಜ್ಯ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿಯವರ ಕನಸನ್ನು ಆನೆಗೊಂದಿ, ಸಾಣಾಪುರ, ಮಲ್ಲಾಪುರ ಮತ್ತು ಸಂಗಪುರ ಗ್ರಾಮಗಳಲ್ಲಿ ಅನುಷ್ಠಾನ ಮಾಡಲು ಆಗುತ್ತಿಲ್ಲ, ಪ್ರತಿಯೊಂದು ವಿಷಯದಲ್ಲಿಯೂ ಅಭಿವೃದ್ಧಿ ಪ್ರಾಧಿಕಾರ ಮೂಗು ತೂರಿಸಿ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ.
ಆದ್ದರಿಂದ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೂಡಲೇ ಕೈಬಿಡಬೇಕು. ಇದಕ್ಕಾಗಿ ಸ್ಥಳೀಯ ಎಲ್ಲಾ ಜನರನ್ನು ಸೇರಿಸಿ ಮಾ. 18ರಂದು ಕಡಬಾಗಿಲು ಶ್ರೀರಂಗದೇವರಾಯಲು ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ.
ವಿಶ್ವ ಪರಂಪರ ಪಟ್ಟಿಗೆ ಸೇರುವ ಪ್ರದೇಶದಲ್ಲಿ ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯವರು ಗುರುತಿಸುವ ಎಎಸ್ಐ ಸ್ಮಾರಕಗಳು ಇರಬೇಕು. ಆನೆಗೊಂದಿ ಭಾಗದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ಹಕ್ಕಿನಲ್ಲಿ ಕೊಟ್ಟಿರುವ ಮಾಹಿತಿಯಂತೆ ಆನೆಗೊಂದಿ ಭಾಗದಲ್ಲಿ ಯಾವುದೇ ಎಎಸ್ಐ ಸ್ಮಾರಕಗಳು ಇಲ್ಲ. ಇಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ಗುರುತಿಸಲ್ಪಟ್ಟ ಎಲ್ಲಾ ದೇವಸ್ಥಾನಗಳು, ಸ್ಮಾರಕಗಳನ್ನು ನೂರಾರು ವರ್ಷಗಳಿಂದ ಸ್ಥಳೀಯರು ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಸ್ಥಳೀಯರಿಗೆ ಒದಗಿಸಿ ಕೊಟ್ಟಿದ್ದಾರೆ. ಇದರಿಂದ ಉದ್ಯೋಗ ದದೊರೆಯುತ್ತವೆ. ಜೊತೆಗೆ ದೇಶ ವಿದೇಶದಲ್ಲಿ ಆನೆಗೊಂದಿ ಕಿಷ್ಕಿಂಧಾ ಭಾಗ ಪ್ರಸಿದ್ಧವಾಗಿದೆ. ದೇಶದ ಎಲ್ಲಾ ಪ್ರವಾಸಿ ತಾಣಗಳಲ್ಲಿ ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಲಾಗಿದ್ದರು. ಆನೆಗೊಂದಿ ಭಾಗದಲ್ಲಿರುವ ರಸ್ತೆಗಳನ್ನು ಅಗಲೀಕರಣ ಮಾಡಲು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಡ್ಡಗಾಲಿನಿಂದಾಗಿ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಹಳೆಮಳೆಗಳನ್ನು ಕೆಡವಿ ಹೊಸ ಮನೆಗಳ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಜನಸಂಖ್ಯೆ ಹೆಚ್ಚುತ್ತಿದೆ ಗ್ರಾಮಗಳು ವಿಸ್ತರಣೆಯಾಗಲು ಹಂಪಿ ಪ್ರಾಧಿಕಾರ ಬಿಡುತ್ತಿಲ್ಲ.
ನಿರೀಕ್ಷೆ ಸುಳ್ಳಾಗಿದೆ: ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಂದರ್ಭದಲ್ಲಿ ಆನೆಗೊಂದಿ ಭಾಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಪ್ರತಿ ವರ್ಷ ಸ್ಟೇಕ್ ಹೋಲ್ಡರ್ಸ್ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಜೊತೆಗೆ ಪ್ರತಿ 10 ವರ್ಷಕ್ಕೊಮ್ಮೆ ಮಾಸ್ಟರ್ ಪ್ಲಾನ್, ಮಹಾಯೋಜನೆ ಪ್ರಕಟಣೆ ಮಾಡುವ ಮಾತನಾಡಿದ್ದರು, ಆದರೆ 35 ವರ್ಷ ಕಳೆದರೂ ಆನೆಗುಂದಿ ಭಾಗ ಮೊದಲಿದ್ದಂತೆ ಇದೆ ಯಾವುದೇ ಕಾರ್ಯಕ್ರಮಗಳು ಅಭಿವೃದ್ಧಿ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ನಿರ್ಣಯವನ್ನು ಮಾಡಿ ಆನೆಗೊಂದಿ ಭಾಗದಲ್ಲಿ ಯಾವುದೇ ಎಎಸ್ಐ ಸ್ಮಾರಕ ಇಲ್ಲ,ಆದ್ದರಿಂದ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಕಾರದಿಂದ ಹೊರಗಿಟ್ಟು ಹಂಪಿ ಪ್ರದೇಶದಲ್ಲಿ ಮಾತ್ರ ಪ್ರಾಧಿಕಾರ ತನ್ನ ಕೆಲಸ ಮಾಡಲಿ, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದಂತ ಹೋರಾಟ ನಡೆಸಲು ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿ.ಎಚ್.ಪ್ರಸಾದ,ಪ್ರಶಾಂತ,ರಾಗ, ಹೊನ್ನಪ್ಪ ನಾಯಕ,ಶ್ರೀನಾಥ,ನೀಲಪ್ಪ,ಹರ್ಷಾ,ನ್ಯಾಯವಾದಿ ಸಾಯಿಕುಮಾರ,ವಿರೇಶ ಹನುಮನಹಳ್ಳಿ,ಮಂಜುನಾಥ ಗೌಡ,ಬಾಳೇಶ ಹನುಮನಹಳ್ಳಿ ಸೇರಿದಂತೆ ಅನೇಕರಿದ್ದರು.

