ಆನೆಗೊಂದಿ ಕಿಷ್ಕಿಂಧಾ ಭಾಗಕ್ಕೆ ಮಾತ್ರ ಯುನೆಸ್ಕೋ ಗುಮ್ಮ! ಹಂಪಿ,ಕಮಲಾಪೂರದಲ್ಲಿ ಪ್ರಾಧಿಕಾರದ ನಿಯಮಗಳು ಗಾಳಿಗೆ!

*ಹಂಪಿ ಕಮಲಾಪೂರ ಭಾಗದ ಪ್ರವಾಸೋದ್ಯಮಕ್ಕೆ ಜನಪ್ರತಿನಿಧಿಗಳ ಕೃಪಕಟಾಕ್ಷ
*ಅಸಹಾಯಕರಾಗಿರುವ ಆನೆಗೊಂದಿ ಕಿಷ್ಕಿಂಧಾ ಜನರು ಮತ್ತು ಜನಪ್ರತಿನಿಧಿಗಳು?
ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ಯುನೆಸ್ಕೋ ವ್ಯಾಪ್ತಿಯಲ್ಲಿರುವ ಆನೆಗೊಂದಿ ಕಿಷ್ಕಿಂಧಾ ಭಾಗದ 15 ಹಳ್ಳಿಗಳಲ್ಲಿ ಮಾತ್ರ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಇಲ್ಲಿಯ ಜನರಿಗೆ ಯುನೆಸ್ಕೋ ಗುಮ್ಮನ್ನು ಬಿಟ್ಟು ಅಸಹಾಯಕರನ್ನಾಗಿ ಮಾಡಿದ್ದಾರೆ.
ಆದರೆ ಯುನೋಸ್ಕೋ ವ್ಯಾಪ್ತಿಯ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಧೀನದಲ್ಲಿ ಬರುವ ಕಮಲಾಪುರ ಮತ್ತು ಹಂಪಿ ಭಾಗದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ವಾಣಿಜ್ಯ ವ್ಯವಹಾರಗಳು ನಡೆಯಲು ಅಲ್ಲಿಯ ಶಾಸಕರು ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಕೃಪಾಕಟಾಕ್ಷ ಇರುವುದರಿಂದ ಅಲ್ಲಿಯ ಜನರು ಆರಾಮವಾಗಿ ವ್ಯಾಪಾರ ವಹಿವಾಟಿನ ಮೂಲಕ ಪ್ರವಾಸೋದ್ಯವನ್ನು ಅಭಿವೃದ್ಧಿಪಡಿಸುತ್ತಿದ್ದಾರೆಂಬ ಆರೋಪಗಳನ್ನು ಮಾಡಲಾಗುತ್ತಿದೆ.
ಏಪ್ರಿಲ್ ಮೊದಲ ವಾರದಲ್ಲಿ ಆನೆಗೊಂದಿ ಕಿಷ್ಕಿಂಧಾ ಭಾಗದಲ್ಲಿ ಯುನೆಸ್ಕೋ ಮಾರ್ಗಸೂಚಿಯಂತೆ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರವಾಸೋದ್ಯಮ ನಡೆಯುತ್ತಿರುವ,ಸ್ಮಾರಕಗಳ ಬಗ್ಗೆ ಮನವರಿಕೆ ಮಾಡಿಕೊಳ್ಳು ಯುನೆಸ್ಕೋದ ಭಾರತದ ಉಸ್ತುವಾರಿ ಪ್ರತಿನಿಧಿಗಳು ಆಗಮಿಸುತ್ತಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಪ್ಪಳ ಜಿಲ್ಲಾಡಳಿ ಆನೆಗೊಂದಿ ಕೋರ್ ಝೋನ್ ನಲ್ಲಿರುವ ವಾಣಿಜ್ಯ ವಿದ್ಯುತ್ ಸಂಪರ್ಕಗಳನ್ನು 15 ದಿನಗಳ ಮುಂಚಿಂತವಾಗಿ ಕಡಿತಗೊಳಿಸಿ ಇಡೀ ಪ್ರದೇಶವನ್ನು ಕತ್ತಲುಗೊಳಿಸುವ ಜತೆಗೆ ಕುಡಿಯುವ ನೀರಿನ ತೊಂದರೆ ಸೇರಿ ಇಲ್ಲಿಗೆ ನಿತ್ಯವೂ ಬರುವ ಸಾವಿರಾರು ಜನ ಪ್ರವಾಸಿಗರಿಗೆ ತೊಂದರೆ ಕೊಟ್ಟಿದೆ.
ತಡೆ ಬಾಗಿಲು ಗ್ರಾಮದ ಶ್ರೀರಂಗದೇವರಾಯಲು ಸರ್ಕಲ್ ಅಕ್ಕಪಕ್ಕದಲ್ಲಿ ಖಾಸಗಿ ಜಮೀನುಗಳಲ್ಲಿ ಸ್ಥಳೀಯರು ಚಹಾ,ಗೋಬಿಮಂಚೂರಿ, ಜ್ಯೂಸ್ ಸೇರಿ ಹಣ್ಣು ಹಂಪಲು ಮಾರಾಟ ಮಾಡಲು ಶೆಡ್ ಹಾಕಿಕೊಂಡು ಜೆಸ್ಕಾಂ ನಿಂದ ಕಮರ್ಷಿಯಲ್ ನಿಯಮದಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆದು ವ್ಯಾಪಾರ ವಹಿವಾಟು ನಡೆಸಿ ಬದುಕು ನಡೆಸುತ್ತಿದ್ದರು.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಯುನೆಸ್ಕೋ ತಂಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿಯ ಜೆಸ್ಕಾಂ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿಸಿದ್ದಾರೆ.
ಹಂಪಿ ಭಾಗದಲ್ಲೂ ಕಮರ್ಷಿಯಲ್ ವಿದ್ಯುತ್ ಸಂಪರ್ಕಗಳಿವೆ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಹಂಪಿ ಭಾಗದ ಕಮಲಾಪುರ ಸೇರಿದಂತೆ 13 ಗ್ರಾಮಗಳಲ್ಲಿ ಸಹ ವಾಣಿಜ್ಯ ವ್ಯವಹಾರಗಳು ಬಹಿರಂಗವಾಗಿ ನಡೆಯುತ್ತಿವೆ, ಜೊತೆಗೆ ಅಲ್ಲಿಯೂ ಸಹ ಕಮರ್ಷಿಯಲ್ ವಿದ್ಯುತ್ ಸಂಪರ್ಕ ಪಡೆದು ಅಂಗಡಿ ಮುಂಗಟ್ಟುಗಳನ್ನು ನಡೆಸಲಾಗುತ್ತಿದೆ. ಆದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಂಪಿ ಭಾಗದಲ್ಲಿ ನಡೆಯುತ್ತಿರುವ ವಾಣಿಜ್ಯ ವ್ಯವಹಾರ ಕಾಣಿಸುವುದಿಲ್ಲ .ಬದಲಿಗೆ ಆನೆಗೊಂದಿಯ
ಭಾಗದ 15 ಗ್ರಾಮಗಳಲ್ಲಿ ಯಾವುದೇ ವಾಣಿಜ್ಯ ವ್ಯವಹಾರ ನಡೆಯಬಾರದು, ವಿಶೇಷವಾಗಿ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿ ಸೀಮೆ ಕೋರ್ ಜೋನ್ ಇರುವುದರಿಂದ ಕಡ್ಡಾಯವಾಗಿ ಯಾವುದೇ ವ್ಯಾಪಾರ ವಹಿವಾಟು ನಡೆಯಬಾರದು, ನಡೆದರೆ ಇದರ ಕಾನೂನಿಗೆ
ವಿರುದ್ಧ ಜೆಸ್ಕಾಂ,ಅರಣ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಜಿಲ್ಲಾಡಳಿತ ಪದೇ ಪದೇ ಕಾರ್ಯಾಚರಣೆಯ ನೆಪದಲ್ಲಿ ಸಣ್ಣಪುಟ್ಟ ಗೂಡಂಬಡಿಗಳನ್ನು ತೆರವು ಮಾಡಿ ಸ್ಥಳೀಯರು ಪ್ರವಾಸೋದ್ಯಮದ ಮೂಲಕ ಸ್ವಯಂ ಉದ್ಯೋಗ ಮಾಡದಂತೆ ನಿರ್ಬಂಧ ಹಾಕಲಾಗುತ್ತಿದೆ.
ಸಹಾಯಕತೆ: ಯುನೆಸ್ಕೋ ವ್ಯಾಪ್ತಿಗೆ ನಮ್ಮ ಗ್ರಾಮಗಳು ಬಂದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ನಂಬಿ 35 ವರ್ಷಗಳ ಹಿಂದೆ ಆನೆಗೊಂದಿ ಭಾಗದ 15 ಹಳ್ಳಿಗಳ ಜನರು ಇದೀಗ ಅಸಹಾಯಕತೆಯಿಂದ ತಮ್ಮ ನೆರವಿಗೆ ಯಾರು ಬರುತ್ತಾರೆ ಎಂದು ಕಾಯುತ್ತಿದ್ದಾರೆ. ಕೆಲವು ಒತ್ತಡಕ್ಕೆ ಮಣಿದಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪ್ರಾಧಿಕಾರದ ನಿಯಮಗಳು ಮತ್ತು ಯುನೋಸ್ಕೋ ನಿಯಮಗಳು ಆನೆಗೊಂದಿ ಭಾಗಕ್ಕೆ ಮೀಸಲು ಎನ್ನುವಂತೆ ವರ್ತಿಸುತ್ತಿದ್ದು, ಹಂಪಿ ಭಾಗದಲ್ಲಿ ಎಲ್ಲಾ ವಾಣಿಜ್ಯ ವ್ಯವಹಾರಗಳು ಅಲ್ಲಿಯ ಜನಪ್ರತಿನಿಧಿಗಳ ಕೃಪಾಕಟಾಕ್ಷದಲ್ಲಿ ನಡೆಯುತ್ತಿರುವ ಕುರಿತು ಆನೆಗೊಂದಿ ಭಾಗದ ಸ್ಥಳೀಯರು ಆರೋಪ ಮಾಡುತ್ತಾರೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳಿಗೆ ಯುನೆಸ್ಕೋ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಹಳೆಯ ಮತ್ತು ಅವೈಜ್ಞಾನಿಕ ನಿಯಮಗಳ ಮೂಲಕ ಮನವರಿಕೆ ಮಾಡಿರುವುದರಿಂದ ಆನೆಗೊಂದಿ ಭಾಗದ ಜನರು ಮತ್ತು ಜನಪ್ರತಿಗಳು ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಮಾಡುವಲ್ಲಿ ಅಸಹಕಾರಂತೆ ವರ್ತಿಸುತ್ತಿರುವ ಕುರಿತು
ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹಂಪಿ-ಕಮಲಾಪುರ ಭಾಗದಲ್ಲಿ ಹೋಟೆಲ್ ಸೇರಿದಂತೆ ಎಲ್ಲಾ ವಾಣಿಜ್ಯ ವ್ಯವಹಾರಗಳು ನಡೆಯುತ್ತಿದ್ದರೂ ಅಲ್ಲಿ ಹಂಪಿ ಪ್ರಾಧಿಕಾರ ಸೇರಿ ಯಾವುದೇ ಸರಕಾರಿ ಇಲಾಖೆ ಮತ್ತು ಸರಕಾರಿ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಅಲ್ಲಿಯ ವ್ಯವಹಾರವನ್ನು ಬಂದ್ ಮಾಡಿಸಲು ಮುಂದಾಗುತ್ತಿಲ್ಲ. ಆನೆಗೊಂದಿ ಭಾಗದಲ್ಲಿ ಮಾತ್ರ ಹಂಪಿ ಪ್ರಾಧಿಕಾರ ಬೇರೆ ಬೇರೆ ಇಲಾಖೆ ಮತ್ತು ಸರ್ಕಾರದ ಸಂಸ್ಥೆಗಳು ಇಲ್ಲಿಯ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತವಾಗುವಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಯಾವ ನ್ಯಾಯ ಎಂದು ಆನೆಗೊಂದಿ ಭಾಗದ ಸ್ಥಳೀಯರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

