ಕಿಷ್ಕಿಂಧಾ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಬ್ಯಾನರ್ ಅಭಿಯಾನ!

*ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ಮನೆ ಮನೆ ರಸ್ತೆ ಇದ್ದಕ್ಕೂ ರಾರಾಜಿಸುತ್ತಿರುವ ಪ್ರಾಧಿಕಾರ ಮುಕ್ತ ಅಭಿಯಾನದ ಬ್ಯಾನರ್.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಆನೆಗೊಂದಿ ಕಿಷ್ಕಿಂಧಾ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಆನೆಗೊಂದಿ ಭಾಗದ 15 ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದ್ದು ಗ್ರಾಮದ ಮನೆ ಮತ್ತು ರಸ್ತೆ ಉದ್ದಕ್ಕೂ ಪ್ರಾಧಿಕಾರ ಮುಕ್ತ ಕಿಷ್ಕಿಂಧಾ ಅಂಜನಾದ್ರಿ ಭಾಗ ಎನ್ನುವ ಘೋಷಣೆಯೊಂದಿಗೆ ಆನೆಗೊಂದಿ ಭಾಗದ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ಬರೆಸಿ ಅಂಜನಾದ್ರಿ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಧಿಕಾರಿಗಳಿಗೆ ಮತ್ತು ಯುನ್ನೋಸ್ಕೋ ತಂಡದ ಪ್ರತಿನಿಧಿಗಳಿಗೆ ತಮ್ಮ ಕಷ್ಟಗಳನ್ನು ಇಲ್ಲಿಯ ಜನರು ಹೇಳಿಕೊಳ್ಳುತ್ತಿದ್ದಾರೆ.
ಕಳೆದ 35 ವರ್ಷಗಳ ಹಿಂದೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಅವೈಜ್ಞಾನಿಕವಾಗಿ ಸೇರಿಸಲಾಗಿದೆ. ಜೊತೆಗೆ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿ ಗ್ರಾಮಗಳನ್ನು ಶೇ.100ರಷ್ಟು ಕೋರ್ ಝೋನ್ ಎಂದು ಅವೈಜ್ಞಾನಿಕವಾಗಿ ಘೋಷಣೆ ಮಾಡಿ ವಾಣಿಜ್ಯ, ವ್ಯಾಪಾರ ನೂತನ ಕಟ್ಟಡ ನಿರ್ಮಾಣ, ಹಾಗೂ ಬಿದ್ದ ಮನೆಗಳನ್ನು ಪುನಃ ನಿರ್ಮಿಸಿಕೊಳ್ಳಲು ಅವಕಾಶ ಇಲ್ಲದಂತೆ ಹಂಪಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳೀಯರಿಗೆ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಸಣ್ಣ ಪುಟ್ಟ ವ್ಯಾಪಾರ ಮಾಡಲು ಅಂಗಡಿ ಮುಂಗಟ್ಟುಗಳನ್ನು ರಸ್ತೆ ಬದಿಯಲ್ಲಿ ಇಟ್ಟುಕೊಂಡು ಅವುಗಳಿಗೆ ವಿದ್ಯುತ್ ಸಂಪರ್ಕ ಜೋಡಣೆಗೆ ಅಡ್ಡಿಪಡಿಸುತ್ತಿದ್ದಾರೆ. ಪ್ರಸ್ತುತ ಇರುವ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿಸುವುದು ಮತ್ತು ಹೊಸ ವ್ಯಾಪಾರ ವಹಿವಾಟುಗಳಿಗೆ ವಿದ್ಯುತ್ ಸಂಪರ್ಕ ಕೊಡದಂತೆ ಜೆಸ್ಕಾಂ ಅಧಿಕಾರಿಗಳಿಗೆ ಪ್ರಾಧಿಕಾರದ ಅಧಿಕಾರಿಗಳು ತಾಕೀತು ಮಾಡುತ್ತಿರುವುದು ಸ್ಥಳೀಯರನ್ನು ಕೆರಳಿಸಿದೆ.
ಈ ಮಧ್ಯೆ ಯುನೆಸ್ಕೋ ತಂಡದ ಪ್ರತಿನಿಧಿಗಳು ಆನೆಗೊಂದಿ, ಅಂಜನಾದ್ರಿ ಭಾಗದಲ್ಲಿ ನೂತನ ನಿರ್ಮಾಣಗಳು ಹಾಗೂ ಪರಿಸರ ಉಳಿಸಲಾಗಿದೆಯಾ ಎನ್ನುವ ಕುರಿತು ಪರಿಶೀಲನೆ ನಡೆಸಲು ಆಗಮಿಸುತ್ತಿದ್ದು ಪ್ರಾಧಿಕಾರ ಮುಕ್ತ ಅಭಿಯಾನದ ಬ್ಯಾನರ್ ಮೂಲಕ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಬರೆಸಿ ಸ್ಥಳೀಯರು ಯುನೆಸ್ಕೋ ತಂಡದವರ ಗಮನಕ್ಕೆ ತರುವ ಯತ್ನ ಮಾಡುತ್ತಿದ್ದಾರೆ.
ಈಗಾಗಲೇ ಕಡೆಬಾಗಿಲು ಶ್ರೀರಂಗದೇವರಾಯಲು ವೃತ್ತದಲ್ಲಿ ಮತ್ತು ಸಾಣಾಪುರದ ಗ್ರಾಮ ಪಂಚಾಯತ್ ಎದುರು ಹಾಗೂ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಆನೆಗೊಂದಿ ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮುಕ್ತಗೊಳಿಸುವಂತೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

