ಪಡಿತರ ಅಕ್ಕಿ ಅಕ್ರಮ ಸಂಗ್ರಹ:3 ಜನರಿಗೆ ಜೈಲು ಶಿಕ್ಷೆ,ತಲಾ 10ಸಾವಿರ ದಂಡ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಸರಕಾರ ಬಡ ಜನರಿಗಾಗಿ ಕೊಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮೂರು ಜನರಿಗೆ ನಗರದ ಪ್ರಧಾನ ಸಿವಿಲ್ ನ್ಯಾಯಾಲಯ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
2021 ಏಪ್ರಿಲ್ 29 29ರಂದು ಖಚಿತವಾದ ಮಾಹಿತಿಯ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ನಗರದ ಮಹಾವೀರ ಸರ್ಕಲ್ ಹತ್ತಿರ ಇರುವ ಡಾ. ವಿವಿ ಸಿನಿವಾಲರ್ ಆಸ್ಪತ್ರೆ ಹಿಂದುಗಡೆ ಅಕ್ರಮವಾಗಿ ಬಡವರಿಗೆ ಕೊಡುವ ಪಡಿತರ (ಪಿಡಿಎಸ್) ಅಕ್ಕಿ ಚೀಲಗಳನ್ನು ಸಂಗ್ರಹಿಸಿ ಇಟ್ಟಿದ್ದ ಆರೋಪಿಗಳಾದ ಗಂಗಾವತಿಯ ಸಂತೆಬೆಯಲು ನಿವಾಸಿ ಮಹಬೂಬ್ (34), ಮೆಹಬೂಬ್ ನಗರದ ಹುಸೇನ್ (21) ಹಾಗೂ ಮಹಬೂಬ್ ನಗರದ ಆಟೋ ಚಾಲಕ ದಾದಾ ಕಲಂದರ್(35) ಇವರನ್ನು ಅಕ್ರಮ ಸಂಗ್ರಹ ಅಕ್ಕಿ ಚೀಲಗಳ ಜೊತೆ ಬಂಧಿಸಿ ನಗರ ಠಾಣೆಯಲ್ಲಿ ಅಗತ್ಯ ವಸ್ತು ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ್ ಪಾಟೀಲ್ ಅವರು ಬುಧವಾರ ತೀರ್ಪು ನೀಡಿ ಮೂರು ಜನ ಆರೋಪಿತರ ಆರೋಪ ಸಾಬೀತಾಗಿದ್ದು ಇವರಿಗೆ ಅಗತ್ಯ ವಸ್ತು ಕಾಯ್ದೆ 1955 ಕಲಂ 3/7 ರ ಪ್ರಕಾರ ಮೂರು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

