Breaking News
ಕುರಿಗಾಹಿಯ ಮಗನಿಂದ ಕಾನೂನು ಲೋಕದ ಗೆಲುವು!

 

 *ಸಾಧನೆಯ ಶಿಖರ ಏರಿದ ರೇವಣ್ಣ, ಎಲ್‌ಎಲ್‌ಬಿಯಲ್ಲಿ ದ್ವಿತೀಯ ಸ್ಥಾನ, ಗ್ರಾಮಕ್ಕೆ ಹೆಮ್ಮೆ

ಕಿಷ್ಕಿಂಧವಾಣಿ ವಿಶೇಷ

ಬೆಳಗಾವಿ : ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಳತಗಾ ಎಂಬ ಸಣ್ಣ ಗ್ರಾಮ. ಇಲ್ಲಿ ದಿನವೂ ಕುರಿಗಳನ್ನು ಮೇಯಿಸುವುದೇ ಜೀವನವಾದ ಒಂದು ಸಾಮಾನ್ಯ ಕುಟುಂಬ. ಅದೇ ಕುಟುಂಬದ ಮಗ ರೇವಣ್ಣ ಶಿವಪೂರೆ ಇಂದು ಎಲ್‌ಎಲ್‌ಬಿ ಪದವಿಯಲ್ಲಿ ದ್ವಿತೀಯ ಸ್ಥಾನ ಪಡೆದು ಸುವರ್ಣ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದಾನೆ.

ರೇವಣ್ಣನ ತಂದೆ ದೇವಪ್ಪ ಶಿವಪೂರೆ ಕುರಿಗಾಹಿ. ದಿನದ ಬಹುಭಾಗವನ್ನು ಕುರಿಗಳೊಂದಿಗೆ ಹೊಲಗಳಲ್ಲಿ ಕಳೆದರೂ, ಮಗನ ಶಿಕ್ಷಣಕ್ಕೆ ಯಾವತ್ತೂ ತಗ್ಗು ಬಾರದಂತೆ ನೋಡಿಕೊಂಡವರು. ಆರ್ಥಿಕ ಸವಾಲುಗಳು ಇದ್ದರೂ, “ಓದಿ ದೊಡ್ಡವನಾಗು” ಎಂಬ ತಂದೆಯ ಮಾತು ರೇವಣ್ಣನಿಗೆ ಸದಾ ಪ್ರೇರಣೆಯಾಯಿತು.

ಗ್ರಾಮದ ಸರಳ ಪರಿಸರದಲ್ಲಿ ಬೆಳೆದ ರೇವಣ್ಣ, ಬಾಲ್ಯದಲ್ಲೇ ಓದಿನತ್ತ ಹೆಚ್ಚು ಆಸಕ್ತಿ ತೋರಿದ. ಬೆಳಗಿನ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡಿ, ಉಳಿದ ಸಮಯವನ್ನು ಪುಸ್ತಕಗಳೊಂದಿಗೆ ಕಳೆಯುತ್ತಿದ್ದ. ಶಾಲೆಯ ದಿನಗಳಿಂದಲೇ ಅವನ ಪರಿಶ್ರಮ ಮತ್ತು ಶಿಸ್ತು ಶಿಕ್ಷಕರ ಗಮನ ಸೆಳೆದಿತ್ತು.

ಮುಂದೆ ಕಾನೂನು ಪದವಿಯನ್ನು ಆಯ್ಕೆ ಮಾಡಿಕೊಂಡ ರೇವಣ್ಣ, ತನ್ನ ಗುರಿಯತ್ತ ಅಚಲವಾಗಿ ಸಾಗಿದ. ಕಾಲೇಜಿನಲ್ಲಿಯೂ ನಿರಂತರ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ಆತ್ಮವಿಶ್ವಾಸದಿಂದ ಎಲ್‌ಎಲ್‌ಬಿ ಪದವಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ, ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವದಲ್ಲಿ ಸುವರ್ಣ ಪದಕ ಪಡೆದುಕೊಂಡನು.

ರೇವಣ್ಣನ ಈ ಸಾಧನೆ ಕೇವಲ ಅವನ ಕುಟುಂಬಕ್ಕಷ್ಟೇ ಅಲ್ಲ, ಸಂಪೂರ್ಣ ಗ್ರಾಮದ ಹೆಮ್ಮೆ. ಕುರಿಗಾಹಿಯ ಮಗನೊಬ್ಬ ಕಾನೂನು ಕ್ಷೇತ್ರದಲ್ಲಿ ಮೆರೆದಿರುವುದು ಅನೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ಭರವಸೆ ಮೂಡಿಸಿದೆ.

ಸರಳ ಜೀವನದಿಂದ ಉನ್ನತ ಸಾಧನೆಗೆ ತಲುಪಿದ ರೇವಣ್ಣನ ಕಥೆ, ಪರಿಶ್ರಮ ಮತ್ತು ಸಂಕಲ್ಪ ಇದ್ದರೆ ಯಾವುದೇ ಅಡೆತಡೆಗಳನ್ನೂ ಜಯಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ

 

***

ನನ್ನ ಸಾಧನೆಗೆ ಉಪನ್ಯಾಸಕರ ಪ್ರೋತ್ಸಾಹವೇ ಪ್ರಮುಖ ಕಾರಣ, ಮುಂದೆ ನ್ಯಾಯಾಧೀಶನಾಗುವ ಬಯಕೆ ಇದೆ.

-ರೇವಣ್ಣ ಶಿವಪೂರೆ

 

****

ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ, ರೇವಣ್ಣ ಅವರ ಮುಂದಿನ ಕಾನೂನು ಹೋರಾಟ ಜೀವನ ಯಶಸ್ವಿಯಾಗಲಿ

-ಹನುಮಗೌಡ ನಿಡಗುಂದಿ, ಹೈಕೋರ್ಟ್ ವಕೀಲರು.

ನಿಯಮ ಉಲ್ಲಂಘಿಸಿ ಸಾಣಾಪುರದಲ್ಲಿ ಲೇಔಟ್ ಗೆ ಪರವಾನಿಗೆ ನೀಡಿದ ಹಂಪಿ ಪ್ರಾಧಿಕಾರ ?

*ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಳ್ಳವರಿಗೆ ಒಂದು, ಬಡವರಿಗೆ ಮತ್ತೊಂದು ನ್ಯಾಯ!

*ಗ್ರೀನ್ ಝೋನ್ ಭೂಮಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಲೇಔಟ್ ರಚನೆಗೆ ನಿಯಮ ಮೀರಿ ಅವಕಾಶ

*ರಸ್ತೆಗೆ ಸಂಬಂಧಿಸಿದಂತೆ ವ್ಯತ್ಯಾಸವಿದ್ದರೂ ಭೂ ಪರಿವರ್ತನೆಗೆ ಓಕೆ ಅನುಮಾನ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಿಯಮ ಮೀರಿ ತಾಲೂಕಿನ ಸಾಣಾಪೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ಖಾಸಗಿಯವರ ಭೂ ಪರಿವರ್ತನೆ ಮಾಡಿದ್ದು ವ್ಯಾಪಕ ಚರ್ಚೆಗೆ ಒಳಗಾಗಿದೆ. ಮಾತೆತ್ತಿದರೆ ಕಾನೂನು ಎಂದು ಹೇಳುವ ಪ್ರಾಧಿಕಾರದ ಅಧಿಕಾರಿಗಳು ಹಣವಂತರ ಗ್ರೀನ್ ಝೋನ್ ನಲ್ಲಿರುವ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ನಿಯಮಗಳನ್ನು ಗಾಳಿ ತೂರಿ ಲೇಔಟ್ ರಚನೆ ಮಾಡುವ ಮೂಲಕ ಆನೆಗೊಂದಿ ಭಾಗದ ಸ್ಥಳೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಾಣಾಪೂರ ಗ್ರಾಮದ ಸರ್ವೇ 22 ಮತ್ತು 23 ರಲ್ಲಿ ಬರುವ 4.7 ಎಕರೆ ಪ್ರದೇಶದ ಭತ್ತ ಬೆಳೆಯುವ ಗ್ರೀನ್ ಝೋನ್ ನಲ್ಲಿ ಬರುವ ಫಲವತ್ತಾದ ಭೂಮಿಯನ್ನು ರೇಸಾರ್ಟ್/ಹೆಲ್ತ್ ರೇಸಾರ್ಟ್ ನಿರ್ಮಿಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿನ್ಯಾಸ ಅನುಮೋದನೆಗಾಗಿ ಅರ್ಜಿ ಸಲ್ಲಿಸಲಾಗಿತ್ತು.

ಈ ವಿನ್ಯಾಸವನ್ನು ಗ್ರಾ.ಪಂ.ಗೆ ಸಲ್ಲಿಸಿ ಅನುಮೋದನೆ ಪಡೆದು ನಮೂನೆ 9/11 ಪಡೆಯಬೇಕಿದ್ದು ನಿಯಮಗಳ ಉಲ್ಲಂಘನೆಯ ಹಾಗೂ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸಾಣಾಪೂರ ಗ್ರಾ.ಪಂ.ಪಿಡಿಓ 9/11 ನೀಡಲು ತಡೆ ಹಿಡಿದಿದ್ದು ಭೂ ಮಾಲೀಕರು ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೂಲಕ ಪಿಡಿಓ ಅವರ ಮೇಲೆ ಒತ್ತಡ ಹೇರುತ್ತಿರುವ ಕುರಿತು ಆರೋಪ ಕೇಳಿ ಬಂದಿದೆ.

ಲೇಔಟ್ ವಿನ್ಯಾಸದಲ್ಲಿ ಹುಲಿಗಿ ಮುಖ್ಯ ರಸ್ತೆ ಹಾಗೂ ಸಾಣಾಪೂರ ದಕ್ಷಿಣ ದಿಕ್ಕಿನಲ್ಲಿ 40 ಅಡಿ ಉದ್ದದ ರಸ್ತೆಯನ್ನು ತೋರಿಸಲಾಗಿದೆ. ಆದರೆ ಭೂ ಪರಿವರ್ತನೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿರಾಪೇಕ್ಷಣಾ ಪಡೆಯುವ ಮುಂಚೆ ಸಲ್ಲಿಸಿದ ಸಂಯೋಜಿತ ಸ್ಕೆಚ್ ನಲ್ಲಿ ವಿನ್ಯಾಸದಲ್ಲಿ(ಲೇಔಟ್) ತೋರಿಸಿದ ರಸ್ತೆ ಇರುವುದಿಲ್ಲ. ಆದರೂ ನವೆಂಬರ್ 2025 ರಲ್ಲಿ ಹಂಪಿ ಪ್ರಾಧಿಕಾರದ ಸಭೆಯಲ್ಲಿ ಸಾಣಾಪೂರ ಸರ್ವೇ ನಂಬರ್ 22 ಮತ್ತು 23 ರಲ್ಲಿ ಪ್ರಸ್ತಾವಿತ ಏಕನಿವೇಶನ ವಾಣಿಜ್ಯ ಉದ್ದೇಶದ ಅರ್ಜಿಗೆ ಅನುಮೋದನೆ ನೀಡಲಾಗಿದೆ. 4.7 ಎಕರೆ ಭೂಮಿಯನ್ನು ಬಿನ್ ಶೇತಿ ನಕ್ಷೆ ಹಾಗೂ ವಿನ್ಯಾಸ ನಕ್ಷೆಯಲ್ಲಿ ತೋರಿಸಿದಂತೆ 40 ಅಡಿ ರಸ್ತೆ ಇಲ್ಲ. ದಕ್ಷಿಣಕ್ಕೆ ತೋರಿಸಿದ ರಸ್ತೆ ಸರ್ವೇ ನಂಬರ್ 20 ರಲ್ಲಿ ಬರುತ್ತದೆ. ಜತೆಗೆ ಹುಲಿಗಿ ಮುಖ್ಯರಸ್ತೆಯಲ್ಲಿರುವ (ಶ್ರೀಹುಲಿಗೆಮ್ಮ ದೇವಾಲಯ ಹತ್ತಿರ) ನೀರಾವರಿ ಇಲಾಖೆಯ ವಾಹನಗಳು ಸಂಚಾರ ಮಾಡಲು ಇರುವ ಹಳೆಯ ರಸ್ತೆಯನ್ನು ಭೂ ಮಾಲೀಕರು ತಮ್ಮದೇ ಭೂಮಿ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದು ಇದೀಗ ಸರ್ವೇ ನಂಬರ್ 22 ಮತ್ತು 23 ರಲ್ಲಿರುವ 4.7 ಎಕರೆ ಭೂಮಿಯನ್ನು ಕೃಷಿಯೇತರ ಎಂದು ಘೋಷಣೆ ಮಾಡಿರುವುದು ನಿಯಮ ಉಲ್ಲಂಘನೆಯಾಗಿದ್ದು ಈ ಕುರಿತು ಪ್ರಾಧಿಕಾರ, ಜಿಲ್ಲಾಧಿಕಾರಿಗಳು ಮತ್ತು ಗ್ರಾ.ಪಂ. ಗೆ ಸ್ಥಳೀಯರು ಆಕ್ಷೇಪ ಸಲ್ಲಿಸಿ ಗ್ರಾ.ಪಂ.ನಲ್ಲಿ ಈ ಏಕ ನಿವೇಶನ ವಿನ್ಯಾಸ(ಲೇಔಟ್)ಕ್ಕೆ ಅನುಮೋದನೆ ಹಾಗೂ ನಮೂನೆ 9/11 ನೀಡದಂತೆ ಒತ್ತಾಯಿಸಿದ್ದಾರೆ.

ಇಂತಹ ಪ್ರಕರಣಗಳು ಹನುಮನಹಳ್ಳಿಯಲ್ಲಿ 40 ಅಡಿ ರಸ್ತೆ ಇಲ್ಲದಿದ್ದರೂ ಪ್ರಾಧಿಕಾರ ಹೊಟೇಲ್ ನಿರ್ಮಾಣಕ್ಕೆ ಅನುಮತಿ ನೀಡಿದೆ. ಅದೇ ರೀತಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಮತ್ತೊಂದು ಸಾಣಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ಖಾಸಗಿ ರೇಸಾರ್ಟ್ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವ ಮುಂಚೇಯೆ ಭೂ ಪರಿವರ್ತನೆಯಾಗಿದ್ದು ವಿನ್ಯಾಸ ಅನುಮೋದನೆಯಾಗಿಲ್ಲದಿದ್ದರೂ ಪ್ರಾಧಿಕಾರದ ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನ ಮೂಡಿಸಿದೆ.

 

***”

ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪತ್ರ ಹಂಪಿ ಪ್ರಾಧಿಕಾರ ನೀಡುತ್ತದೆ, ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡಿ ಆದೇಶ ಮಾಡುತ್ತಾರೆ. ನಂತರ ಹಂಪಿ ಪ್ರಾಧಿಕಾರ ಏಕ ನಿವೇಶನ ವಾಣಿಜ್ಯವಿನ್ಯಾಸ(ಲೇಔಟ್)ಅನುಮೋದಿಸುತ್ತದೆ. ಏಕ ನಿವೇಶನ ವಿನ್ಯಾಸಕ್ಕೆ ಅನುಮೋದನೆ ನೀಡಿ ನಮೂನೆ 9/11 ನೀಡುವ ಅಧಿಕಾರ ಗ್ರಾ.ಪಂ. ಇದೆ. ರಸ್ತೆ ಎಷ್ಟು ವಿಸ್ತೀರ್ಣ ಇರಬೇಕೆನ್ನುವುದನ್ನು ಗ್ರಾ.ಪಂ. ನಿರ್ಧರಿಸುವುದಿಲ್ಲ. ಯಾಕೆಂದರೆ ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪತ್ರ ಕೊಡುವ ಮುಂಚೆ ಪ್ರಾಧಿಕಾರದ ತಂಡ ಇವೆಲ್ಲವನ್ನೂ ಪರಿಶೀಲಿಸುತ್ತದೆ.

-ವತ್ಸಲಾ ಪಿಡಿಓ ಸಾಣಾಪೂರ

ಗಂಗಾವತಿಯಲ್ಲಿ ಮೊಟ್ಟಮೊದಲ ಬಾರಿಗೆ ವಾಕ್ ಇನ್ ಇಂಟರ್ವ್ಯೂ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ನರ್ಸರಿಯಿಂದ ನೌಕರಿಯವರೆಗೆ ಎಂಬ ದೃಢಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ವಿದ್ಯಾನಿಕೇತನ ವಿದ್ಯಾಸಂಸ್ಥೆಯು ಈ ಭಾಗದ ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವ ಯೋಜನೆ ಮತ್ತು ಯೋಚನೆಗಳನ್ನು ಹೊಂದಿದ್ದು, ಈ ದಿಶೆಯಲ್ಲಿ ಗಂಗಾವತಿಯಲ್ಲಿ ಮೊಟ್ಟ ಮೊದಲನೇ ಬಾರಿಗೆ ದೇಶದ ಹೆಸರಾಂತ ಸಾಫ್ಟ್ವೇರ್ ಕಂಪನಿಯಾದ ಟಿಸಿಎಸ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನವರು
ಶ್ರೀ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯ ಹಾಗೂ ದೇಶಪಾಂಡೆ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಮೇ05 ರಂದು ಗಂಗಾವತಿ ತಾಲೂಕಿನ ವಡ್ಡರಟ್ಟಿಯ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಈ ಭಾಗದ ತಾಂತ್ರಿಕೇತರ ಪದವೀಧರರಿಗೆ (BBA, B.COM, BA, BFSI, BHM, BSW, BBM) ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನವನ್ನು ನಡೆಸುತ್ತಿದ್ದು, ನಮ್ಮ ಭಾಗದ ಪ್ರತಿಭಾವಂತ ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸಲು ಈ ನೇರ ಸಂದರ್ಶನವು ಅತ್ಯಂತ ಸಹಕಾರಿಯಾಗಲಿದ್ದು,
ಈ ಭಾಗದ ಅರ್ಹ ಪದವೀಧರರು ಈ ನೇರ ಸಂದರ್ಶನದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮನವಿ ಮಾಡಿದ್ದಾರೆ.