Breaking News
ಮರಿಯಮ್ಮನಹಳ್ಳಿ ಬಿಎಂಎಂ ಕಾರ್ಖಾನೆ ಬಳಿ ಎನ್. ಎಚ್.ರಸ್ತೆಯಲ್ಲಿ ಸರಣಿ ಅಪಘಾತ.ಐವರ ಸಾವು ಶಂಕೆ.

ಕಿಷ್ಕಿಂಧವಾಣಿ ಸುದ್ದಿ
ಮರಿಯಮ್ಮನಹಳ್ಳಿ(ಹೊಸಪೇಟೆ): ತಾಲೂಕಿನ ಮರಿಯಮ್ಮನಹಳ್ಳಿ ಬಿ ಎಂ ಎಂ ಕಾರ್ಖಾನೆ ಬಳಿ ಎನ್ ಎಚ್ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸರಣಿ ಅಪಘಾತ ಜರುಗಿ ಐವರು ಮೃತಪಟ್ಟ ಸಂಖ್ಯೆ ಇದ್ದು ಹಲವರಿಗೆ ಗಾಯಗಳಾಗಿವೆ.
ಢಣಾಪುರ ಬಳಿ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಹರಿಯಾಣ ನೋಂದಣಿಯ ಲಾರಿಯೊಂದು ಕಾರು, ಸರ್ಕಾರಿ ಬಸ್ ಹಾಗೂ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಬೆಳ್ಳೊಳ್ಳಿ ಸಾಗಣೆ ಮಾಡುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮೊದಲು ಕಾರಿಗೆ, ಬಳಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಬಸ್ ಹಿಂಭಾಗಕ್ಕೆ ಭೀಕರವಾಗಿ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಸ್ಥಳದಲ್ಲೇ ಭಾರೀ ಅವ್ಯವಸ್ಥೆ ಉಂಟಾಯಿತು.
ಗಾಯಾಳುಗಳ ಸ್ಥಿತಿ : ಬಸ್ ಹೊಸಪೇಟೆಯಿಂದ ಚಿತ್ರದುರ್ಗದತ್ತ ತೆರಳುತ್ತಿದ್ದು, ಅಪಘಾತದ ವೇಳೆ ಬಸ್‌ನಲ್ಲಿದ್ದ ಸುಮಾರು 35 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ಮೂಲಗಳು ತಿಳಿಸಿವೆ.
ಹೆದ್ದಾರಿ ಕಾಮಗಾರಿಯಲ್ಲೇ ಅವಘಡ : ಅಪಘಾತ ಸಂಭವಿಸಿದ ಸ್ಥಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈ ಕಾರಣದಿಂದಲೇ ವಾಹನಗಳ ಚಾಲಕರು ಗೊಂದಲಕ್ಕೀಡಾಗಿ ಲಾರಿ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಟ್ರಾಫಿಕ್ ಜಾಮ್, ರಕ್ಷಣಾ ಕಾರ್ಯ : ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಹಾಗೂ ರಕ್ಷಣಾ ತಂಡಗಳು ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಉಪನ್ಯಾಸಕ ಕಳಕಪ್ಪ ಕುಂಬಾರ ಅಕಾಲಿಕ ಸಾವು!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಅತಿಥಿ ಉಪನ್ಯಾಸಕ ಕಳಕಪ್ಪ ಕುಂಬಾರ್ (41) ಇವರು ಮಾನ್ವಿ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ.
ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.
ವಿದ್ಯಾರ್ಥಿಗಳ ಅತ್ಯಂತ ಪ್ರೀತಿಯ ಗುರುಗಳಾಗಿದ್ದರು.
ಕುಟುಂಬದವರು ನೀಡಿದ
​ಮಾಹಿತಿಯ ಪ್ರಕಾರ, ಕಳಕಪ್ಪ ಅವರು ತಮ್ಮ ಅತ್ತೆಯ ಮನೆಯಾದ ಕಲ್ಲೂರು ಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಈ ಆಕಸ್ಮಿಕ ಸಾವು ಅವರ ಕುಟುಂಬಸ್ಥರು ಹಾಗೂ ಅಭಿಮಾನಿ ಬಳಗವನ್ನು ತೀವ್ರ ಆಘಾತಕ್ಕೆ ದೂಡಿದೆ.
​ವಿದ್ಯಾರ್ಥಿಗಳ ನೆಚ್ಚಿನ ‘ಸಮಾಜಶಾಸ್ತ್ರ ಉಪನ್ಯಾಸಕ
​ಕಳಕಪ್ಪ ಕುಂಬಾರ್ ಅವರು ಕೇವಲ ಪಾಠಕ್ಕಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಸರಳ ವ್ಯಕ್ತಿತ್ವ ಹಾಗೂ ಬೋಧನಾ ಶೈಲಿಯಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಮನ ಗೆದ್ದಿದ್ದರು.
​ಕಳಕಪ್ಪ ಅವರ ನಿಧನಕ್ಕೆ ಕಾಲೇಜಿನ ಪ್ರಾಂಶುಪಾಲರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ತಂದೆ ತಾಯಿ ಸೋದರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.