Breaking News
ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗ ಕೈಬಿಡುವಂತೆ ಪ್ರಧಾನಿ ಮತ್ತು ಸಿಎಂ ಗೆ ಸ್ಥಳೀಯರಿಂದ ಪತ್ರ ಚಳುವಳಿ.   

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗುಂದಿ ಕಿಷ್ಕಿಂಧಾ ಆನೆಗೊಂದಿ ಭಾಗವನ್ನು ಕೈ ಬಿಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಯ ಸಿದ್ದರಾಮಯ್ಯನವರಿಗೆ ಆನೆಗೊಂದಿ ಭಾಗದ 15 ಗ್ರಾಮಗಳ ಗ್ರಾಮಸ್ಥರು ಮೇಲ್ ಮುಖಾಂತರ ಪತ್ರ ಬರೆದು ಮನವಿ ಮಾಡಿದ್ದಾರೆ.

35 ವರ್ಷಗಳ ಹಿಂದೆ ಯುನೋಸ್ಕೋ ಪ್ರದೇಶವನ್ನು ವಿಶ್ವ ಪರಂಪರ ಪಟ್ಟಿಗೆ ಸೇರಿಸಿದ ನಂತರ ಹಂಪಿ ಭಾಗದ 14 ಆನೆಗೊಂದಿ ಭಾಗದ 15 ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಮಹಾಯೋಜನೆ( ಮಾಸ್ಟರ್ ಪ್ಲಾನ್) ತಿದ್ದುಪಡಿ ಮಾಡುವ ಕುರಿತು ಸರ್ಕಾರ ಮತ್ತು ಸ್ಥಳೀಯ ರೊಂದಿಗೆ ಒಪ್ಪಂದವಾಗಿದ್ದು ಆದರೆ ಅಧಿಕಾರಿಗಳು ಏಕ ಪಕ್ಷಿಯವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಮತ್ತು ಮಾಸ್ಟರ್ ಪ್ಲಾನ್ ಗಳನ್ನು ತಮಗಿಷ್ಟ ಬಂದಂತೆ ಮಾಡಿಕೊಂಡು ಅವೈಜ್ಞಾನಿಕವಾಗಿ ಝೋನ್ ಗಳನ್ನು ಸೃಷ್ಟಿ ಮಾಡಿಕೊಂಡು ಆನೆಗೊಂದಿ ಭಾಗವನ್ನು ಅಭಿವೃದ್ಧಿಯಿಂದ ಹಿಮ್ಮುಖವಾಗುವಂತೆ ಮಾಡಿದ್ದಾರೆ. ಆದ್ದರಿಂದ ನೂರಾರು ವರ್ಷಗಳಿಂದ ವಾಸವಾಗಿರುವ ನಾವೆಲ್ಲ ಹಿರಿಯರು ನಿರ್ಮಿಸಿರುವ ಮನೆ,ಮಠಗಳನ್ನು ಪುನರ್ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈಬಿಡಬೇಕು. ಇದರಿಂದ ಈ ಭಾಗದ ಅಭಿವೃದ್ಧಿಯಾಗುತ್ತದೆ. ಕಳೆದ ಎರಡು ತಲೆ ಮಾರುಗಳಿಂದ ಇಲ್ಲಿ ಹೊಸ ಮನೆಗಳ ನಿರ್ಮಾಣ ಮತ್ತು ಬಿದ್ದಿರುವ ಹಳೆಮನೆಗಳನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಆಗುತ್ತಿಲ್ಲ. ಪ್ರತಿಯೊಂದಕ್ಕೂ ಪ್ರಾಧಿಕಾರ ಕ್ಯಾತೆ ತೆಗಿಯುತ್ತಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಜೊತೆಗೆ ಬದುಕುವ ಹಕ್ಕನ್ನು ಪ್ರಾಧಿಕಾರದ ಅಧಿಕಾರಿಗಳು ಕಸಿದುಕೊಂಡಿದ್ದು ಪರೋಕ್ಷವಾಗಿ ಊರುಗಳನ್ನು ಒಕ್ಕಲಿಸುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಹೊಸಪೇಟೆ ಕಡೆ ವಾಣಿಜ್ಯ ವ್ಯಾಪಾರ ಮಾಡುವವರ ಕುಮ್ಮಕ್ಕಿನಿಂದ ಇಂತಹ ಕೃತ್ಯಗಳು ನಡೆಯುತ್ತಿವೆ ಎನ್ನುವ ಅನುಮಾನವನ್ನು, ಆದ್ದರಿಂದ ಶತಶತಮಾನಗಳಿಂದಲೂ ಆನೆಗೊಂದಿ ಭಾಗದಲ್ಲಿರುವ ಸ್ಮಾರಕಗಳನ್ನು ಸ್ಥಳೀಯರೇ ಸಂರಕ್ಷಣೆ ಮಾಡಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಸಹ ಸ್ಥಳೀಯರು ಹೊಂದಿದ್ದು ಸರ್ಕಾರ ಕೂಡಲೇ ಆನೆಗುಂದಿ ಭಾಗದ 15 ಗ್ರಾಮಗಳನ್ನು ಹಂಪಿ ಪ್ರಾಧಿಕಾರದಿಂದ ಕೈಬಿಡಬೇಕು.ಜೊತೆಗೆ ಆನೆಗೊಂದಿ ಮತ್ತು ವಿರುಪಾಪುರ ಕಡ್ಡಿಯನ್ನು 1988 ಕರ್ನಾಟಕ ರಾಜ್ಯ ಪುರಾತತ್ವ ಮತ್ತು ರಾಜ್ಯ ವಸ್ತು ಸಂರಕ್ಷಣಾ ಕಾಯ್ದೆ ತಿದ್ದುಪಡಿ ಮಾಡಿ ಕೋರ್ ಝೋನ್ ಎಂದು ಘೋಷಣೆ ಮಾಡಿದ್ದು ಈಗಾಗಲೇ ವಿರುಪಾಪುರ ಗಡ್ಡಿಯನ್ನು ಜನವಸತಿ ರಹಿತವನ್ನಾಗಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಆನೆಗೊಂದಿಯನ್ನು ಕೂಡ ಜನವಸತಿ ರಹಿತವನ್ನಾಗಿ ಪ್ರಾಧಿಕಾರದ ಅಧಿಕಾರಿಗಳು ಷಡ್ಯಂತರ ಮಾಡಿರುವ ಸಂಶಯವಿದ್ದು ಕೂಡಲೇ ಸರ್ಕಾರ ಸೂಕ್ತ ನಿರ್ಣಯ ತೆಗೆದುಕೊಂಡು ಆನೆಗೊಂದಿ ಭಾಗದ 15 ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅವರ ಕಚೇರಿಯ ಮೇಲ್

ಗೆ ಪತ್ರವನ್ನು ಕಳಿಸುವ ಮೂಲಕ ಮನವಿ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಆನೆಗೊಂದಿ ಭಾಗದ 15 ಗ್ರಾಮಗಳ ಗ್ರಾಮಸ್ಥರು ಕಡೆಬಾಗಿಲು ಗ್ರಾಮದ ಶ್ರೀರಂಗದೇವರಾಯಲು ಸರ್ಕಲ್ ನಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಾಣಾಪುರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ಜೊತೆಗೆ ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಹ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮುಕ್ತ ಗ್ರಾಮವನ್ನು ಮಾಡಬೇಕೆಂದು ಪ್ರತಿಭಟನೆ ನಡೆಸಿ ಮನೆ ಪತ್ರ ಸಲ್ಲಿಸಿದ್ದಾರೆ. ಇದೀಗ 15 ಗ್ರಾಮಗಳ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮುಕ್ತ ಆನಿಗೊಂದಿ ಗ್ರಾಮ ಎನ್ನುವ ಅಭಿಯಾನದ ಮೂಲಕ ಹೋರಾಟ ನಡೆಸುತ್ತಿದ್ದಾರೆ.