Breaking News
ಎಸ್ಡಿಎಂಸಿ ಸಭೆಯ ಸುತ್ತಾ ಅನುಮಾನದ ಹುತ್ತಾ!.. ಹೊಸಳ್ಳಿ ಶಾಲೆಯ ಜಾಗ ಮರಳಿ ಸ್ವಾಮೀಜಿಗೆ ವಹಿಸಲು ಎಸ್ಡಿಎಂಸಿ ಅಧ್ಯಕ್ಷೆ ಹಾಗೂ ಹೆಚ್‌ಎಂ ಠರಾವು ಪಾಸ್!

 

*ಎಸ್ಡಿಎಂಸಿ ಅವಧಿ 2024ಕಕ್ಕೆ ಮುಗಿದರೂ 2025ರ ಡಿಸೆಂಬರ್ 12 ರಂದು ಎಸ್ಡಿಎಂಸಿ ಸಭೆ!

*ಇಷ್ಟೆಲ್ಲಾ ನಡೆದರೂ ಬಾಯಿ ಮುಚ್ಚಿಕೊಂಡಿರುವ ಬಿಇಒ, ಡಿಡಿಪಿಐ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ

ಗಂಗಾವತಿ: ತಾಲೂಕಿನ ಹೊಸಳ್ಳಿ ಗ್ರಾಮದ ಶೈಕ್ಷಣಿಕ ಅಭಿವೃದ್ಧಿ ಮತ್ತು ಗ್ರಾಮೀಣ ಮಕ್ಕಳು ಓದು ಬರಹ ಕಲಿಯಲಿ ಎನ್ನುವ ಸದುದ್ದೇಶದಿಂದ ಈ ಹಿಂದಿನ ಕಲ್ಮಠದ ಪೂಜ್ಯರು 50 ವರ್ಷಗಳ ಹಿಂದೆ ಹೊಸಳ್ಳಿಯ ಶಾಲೆಗೆ(ಪ್ರಸ್ತುತ ಕಲ್ಮಠಶ್ರೀಚನ್ನಬವಸ್ವಾಮಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣವನ್ನೂ ಮಾಡಲಾಗಿದೆ) ಐದು ಎಕರೆ ಭೂಮಿ ನೀಡಿದ್ದು ಪ್ರಸ್ತುತ ಇರುವ ಪೂಜ್ಯರು ಅದನ್ನು ವಾಪಸ್ ಪಡೆಯಲು ಷಡ್ಯಂತ್ರ ನಡೆಸಿದ್ದು ಗ್ರಾಮೀಣ ಭಾಗದ ಶೈಕ್ಷಣಿಕ ಬೆಳವಣಿಗೆಗೆ ಮಾರಕವಾಗಿದ್ದು ಕಳೆದ 50 ವರ್ಷಗಳಿಂದ ಕಾರ್ಯ ನಿರ್ವಹಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಕೊಟ್ಟ ಜಾಗವನ್ನು ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಿಸದೇ ನಿರ್ಲಕ್ಷ್ಯ ವಹಿಸಿದ್ದು ಜತೆಗೆ ಇತ್ತೀಚೆಗೆ 2025 ರಲ್ಲಿ ಶಾಲೆಯ ಅಂದಿನ ಹೆಚ್.ಎಂ ಅವರು ಕುತಂತ್ರ ನಡೆಸಿ ಎಸ್ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಶಾಲೆಗೆ 2 ಎಕರೆ ಭೂಮಿ ಸಾಕು ಉಳಿದ ಭೂಮಿ ಕಲ್ಮಠದ ಸ್ವಾಮೀಜಿಯವರಿಗೆ ಸಂಬಂಧಿಸಿದ್ದು ಎಂದು ಠರಾವು ಪಾಸ್ ಮಾಡಿದ್ದು ಕೂಡಲೇ ಶಿಕ್ಷಣ ಇಲಾಖೆಯ ಆಯುಕ್ತರು ಶಾಲೆಯ ಹೆಚ್.ಎಂ. ಬಿಇಒ ಹಾಗೂ ಡಿಡಿಪಿಐ ಅವರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಮಲ್ಲಯ್ಯ ಪಾರಿವಾಳ, ಡಿಎಸ್‌ಎಸ್ ಭೀಮಮಾರ್ಗದ ಬಣದ ಜಿಲ್ಲಾ ಮುಖಂಡ ಡಿ.ಮಹೇಶ, ದುರುಗಪ್ಪ ಹಾಗೂ ರಗಡಪ್ಪ ಒತ್ತಾಯಿಸಿದ್ದಾರೆ.

ಶಾಲೆಯ ಜಾಗವನ್ನು ಕಬಳಿಸುವ ಉದ್ದೇಶದಿಂದ 04-08-2024 ರಂದು ಎಸ್ಡಿಎಂಸಿ ಅವಧಿ ಮುಗಿದರೂ 13-12-2025 ರಂದು ಎಸ್ಡಿಎಂಸಿ ಸಭೆ ಕರೆದಂತೆ ದಾಖಲೆ ಸೃಷ್ಠಿ ಮಾಡಿ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಶಾಲೆಯ ಮುಖ್ಯಗುರುಗಳು ಶಾಲೆ ಮತ್ತು ಕಾಂಪೌಂಡ್ ಇರುವ ಎರಡು ಎಕರೆ ಜಾಗ ಮಾತ್ರ ಶಾಲೆಗೆ ಸೇರಿದ್ದು ಪಹಣಿಯಲ್ಲಿ ಐದು ಎಕರೆ ಎಂದು ನಮೂದು ಆಗಿದೆ. ಆದ್ದರಿಂದ ಮೂರು ಎಕರೆ ಭೂಮಿಯನ್ನು ಕಲ್ಮಠದ ಸ್ವಾಮೀಜಿಯವರಿಗೆ ಸಂಬಂಧಿಸಿರುತ್ತದೆ ಎಂದು ಠರಾವು ಪಾಸ್ ಮಾಡಿ ಠರಾವಿಗೆ ಎಸ್ಡಿಎಂಸಿ ಅಧ್ಯಕ್ಷೆ ದುರುಗಮ್ಮ ಹಾಗೂ ಮುಖ್ಯ ಶಿಕ್ಷಕಿ ಮಲ್ಲಿಕಾ ಸೇರಿದಂತೆ 18 ಜನ ಸದಸ್ಯರು ಸಹಿ ಮಾಡಿದ್ದಾರೆ. ಹೀಗೆ ಮಾಡಲು ಇವರಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಫೇಕ್ ದಾಖಲೆ ಸೃಷ್ಠಿಸಿರುವ ಅನುಮಾನ ವ್ಯಕ್ತವಾಗುತ್ತಿದೆ. ಕೂಡಲೇ ಮುಖ್ಯಶಿಕ್ಷಕಿಯವರನ್ನು ಸಸ್ಪೆಂಡ್ ಮಾಡಬೇಕು.

ಶಾಲೆಗಾಗಿ ಪೂಜ್ಯರು ಕಳೆದ 50 ವರ್ಷಗಳ ಹಿಂದೆ ಐದು ಎಕರೆ ಭೂಮಿ ದಾನವಾಗಿ ನೀಡಿದ್ದರು. ಇದೀಗ ಕಲ್ಮಠದ ಡಾ.ಕೊಟ್ಟೂರು ಮಹಾಸ್ವಾಮಿಗಳು ಐದು ಎಕರೆ ಭೂಮಿಯಲ್ಲಿ ಮೂರು ಎಕರೆ ಭೂಮಿಯನ್ನು ಮರಳಿ ಪಡೆಯಲು ಅಧಿಕಾರಿಗಳು ಹಾಗೂ ಕೆಲವರನ್ನು ಬುಕ್ ಮಾಡಿಕೊಂಡು ಶಾಲೆಗೆ ಸಂಚಕಾರ ತಂದಿದ್ದಾರೆ. ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಹಳೆಯ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದು ಶೀಘ್ರ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುತ್ತದೆ. ಕನ್ನಡ ಶಾಲೆಗಳ ಬಗ್ಗೆ ಮಾತನಾಡುವ ಕನ್ನಡ ಪರ ಹಾಗೂ ದಲಿತ ಪರ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ಶಾಲೆಯ ಜಾಗ ಉಳಿಸುವ ಹೋರಾಟಕ್ಕೆ ಸಾಥ್ ಕೊಡಬೇಕೆಂದು ಹೊಸಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.