ತಾಲೂಕಿನಾದ್ಯಂತ ಗುಡುಗು ಸಹಿತ ಅಕಾಲಿಕ ಮಳೆಗೆ ಜನ ಜಾನುವಾರುಗಳಿಗೆ ಅಪಾರ ಹಾನಿ.

*ನೆಲಕ್ಕುರುಳಿದ ಭತ್ತದ ಬೆಳೆ ಮಾವಿನ ಫಸಲು,ಪರಿಹಾರಕ್ಕೆ ಆಗ್ರಹ.
*ಸಿದ್ದಿಕೇರಿಯಲ್ಲಿ ಆರು ಆಕಳು ಸಾವು!
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನಾದ್ಯಂತ ಗುರುವಾರ ಮಧ್ಯ ರಾತ್ರಿ ಸುರಿದ ಗುಡುಗು ಸಹಿತ ಅಕಾಲಿಕ ಮಳೆಗೆ ಗಂಗಾವತಿ ನಗರ,ಹೊಸಳ್ಳಿ, ಸಿದ್ದಿಕೇರಿ,ಮಲ್ಲಾಪೂರ,ಆನೆಗೊಂದಿ ಹಾಗೂ ಢಣಾಪೂರ ಗ್ರಾಮಗಳಲ್ಲಿ ಬೆಳೆದು ನಿಂತಿದ್ದ ಭತ್ತದ ಬೆಳೆ,ಮಾವಿನ ಫಸಲು ಮತ್ತು ಬಾಳೆ ಬೆಳೆ,ತೆಂಗಿನ ಗಿಡಗಳು, ನೆಲಕ್ಕುರುಳಿ ಅಪಾರ ಹಾನಿಯಾಗಿದೆ.
ಹಿರೇಜಂತಗಲ್ ಗ್ರಾಮದ
ಯಮನೂರಪ್ಪ ಅವರ ಬೆಳೆದ ಭತ್ತದ ಹೊಲ ಸಂಪೂರ್ಣವಾಗಿ ನಾಶವಾಗಿದ್ದು, ಸುಮಾರು ₹10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
ಹೊಸಹಳ್ಳಿ ಗ್ರಾಮದ ರೈತ ವಿಠೋಬಣ್ಣ ಇವರಿಗೆ 3 ಎಕರೆ ಭತ್ತದ ಬೆಳೆ ಕೂಡ ಮಳೆಗೆ ಸಂಪೂರ್ಣ ಹಾನಿಯಾಗಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಈ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ನಷ್ಟವನ್ನು ಅಂದಾಜಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ರೈತರ ಆಗ್ರಹ:
ಬೆಳೆ ನಷ್ಟಕ್ಕೆ ತುರ್ತು ಪರಿಹಾರ ಘೋಷಣೆ
ಜಾನುವಾರು ಸಾವುಗಳಿಗೆ ಪರಿಹಾರ ಧನ
ಮನೆ ಹಾನಿಗೆ ಪರಿಹಾರ ಮತ್ತು ಪುನರ್ ನಿರ್ಮಾಣ ನೆರವು
ಪ್ರಕೃತಿ ವಿಪತ್ತು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ
ಈ ಅಕಾಲಿಕ ಮಳೆಯಿಂದ ಗಂಗಾವತಿ ತಾಲೂಕಿನ ರೈತರ ಬದುಕು ಮತ್ತೊಮ್ಮೆ ಸಂಕಷ್ಟದ ಅಂಚಿಗೆ ತಳ್ಳಲ್ಪಟ್ಟಿದೆ.

