ಹೊಸ ಜಾಹೀರಾತು ನೀತಿ:ಜಿಲ್ಲಾ ಮಟ್ಟದ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆ ಎಂಎಲ್ಸಿ ಕೆ. ಶಿವಕುಮಾರ.
* ವಿಧಾನ ಪರಿಷತ್ತಿನ ಅಧಿವೇಶದಲ್ಲಿ ಜಾಹೀರಾತು ನೀತಿ ಕುರಿತು ಪ್ರಸ್ತಾಪ.
* ಹೊಸ ಜಾಹೀರಾತು ನೀತಿಯಲ್ಲಿ ನ್ಯೂನ್ಯತೆಗಳಿದ್ದು ಸರಿಪಡಿಸುವಂತೆ ಸಲಹೆ.
* ನಿವೃತ್ತಿ ಹೊಂದುವ ಪತ್ರಕರ್ತರಿಗೆ ಮಾಶಾಸನ ಸರಳೀಕರಣಕ್ಕೆ ಮನವಿ.
ಕಿಷ್ಕಿಂಧವಾಣಿ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ 2026 ನೇ ಸಾಲಿನ ನೂತನ ಜಾಹೀರಾತು ನೀತಿಯನ್ನು ಅನುಷ್ಠಾನ ಮಾಡಲು ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು,ಈ ಜಾಹೀರಾತಿನಲ್ಲಿ ಇರುವ ಕೆಲ ಅಂಶಗಳಿಂದ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿರುವ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಜಾಹೀರಾತು ನೀತಿಯನ್ನು ಅನುಷ್ಠಾನ ಮಾಡುವ ಮೊದಲು ಕೆಲವು ತಿದ್ದುಪಡಿಗಳನ್ನು ಮಾಡುವಂತೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಅವರು ಮಂಗಳವಾರ ವಿಧಾನಪರಿಷತ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದರು.
ಪ್ರಸ್ತುತ ನೂತನ ಜಾಹೀರಾತು ನೀತಿ ಸ್ವಾಗತಾರ್ಹವಾಗಿದ್ದರೂ ಇದರಲ್ಲಿ ಕೆಲವು ಅಂಶಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಈ ನೀತಿಗಳ ಕುರಿತು ಪರಿಶೀಲನೆ ಮಾಡಬೇಕು. ಜೊತೆಗೆ ಪತ್ರಕರ್ತರೊಂದಿಗೆ ವಿಚಾರ ವಿನಿಮಯ ಮಾಡಿದ ನಂತರ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ತಾಲೂಕ ಮಠದ ಪತ್ರಿಕೆಗಳಿಗೆ ನೆರವಾಗುವಂತಹ ನೀತಿಯನ್ನು ಅನುಷ್ಠಾನ ಮಾಡಬೇಕು. ಜೊತೆಗೆ ನಿವೃತ್ತಿಯಾಗುವ ಹಿರಿಯ ಪತ್ರಕರ್ತರಿಗೆ ರಾಜ್ಯ ಸರ್ಕಾರ ನೀಡುವ ಮಾಶಾಸನ ಪಡೆಯಲು ಅತ್ಯಂತ ಕಠಿಣವಾದ ನಿಯಮಗಳಿದ್ದು ಅವುಗಳನ್ನು ಸರಳೀಕರಣ ಮಾಡುವ ಮೂಲಕ ಸೇವಾ ಭದ್ರತೆ ಇಲ್ಲದ ಪತ್ರಕರ್ತರಿಗೆ ನೆರವಾಗಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

