Breaking News
ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಕ್ರಸ್ಟಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಕ್ರಸ್ಟ್ ಗೇಟ್ ಗಳ ಬದಲಾವಣೆ ಕಾರ್ಯವನ್ನು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದು, ಬರುವ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್ ನ ಎಂಎಲ್ಸಿ

ಟಿ.ಎ. ಶರವಣ ಅವರು ಟಿಬಿ ಅಣೆಕಟ್ಟು ಕ್ರೇಸ್ಟ್ ಗೇಟ್ ಅಳವಡಿಕೆ ವಿಚಾರ ಪ್ರಸ್ತಾಪಿಸಿದಾಗ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.

ತುಂಗಭದ್ರಾ ಕ್ರಸ್ಟಗೇಟ್ ಅಳವಡಿಕೆ ವಿಚಾರವನ್ನು ಪ್ರಸ್ತಾಪಿಸಿ, ಬೆಂಗಳೂರಿನಲ್ಲಿ ಮನೆ ಹಂಚಿಕೆ, ಕೇರಳದಲ್ಲಿ ಮನೆ ನಿರ್ಮಾಣ ಸೇರಿದಂತೆ ಅನೇಕ ಬೇರೆ ಬೇರೆ ವಿಚಾರಗಳನ್ನು ಎಳೆದು ತಂದಿದ್ದಾರೆ. ಟಿಬಿ ಅಣೆಕಟ್ಟಿನ ಕ್ರಸ್ಟಗೇಟ್ ಅಳವಡಿಕೆ ವಿಚಾರ ಬಹಳ ಗಂಭೀರವಾದದು. ಶರವಣ ಹಾಗೂ ಇತರ ಸದಸ್ಯರನ್ನು ನಾನು ತುಂಗಭದ್ರಾ ಅಣೆಕಟ್ಟೆಗೆ ಕಳುಹಿಸಿ ಕೊಡುತ್ತೇನೆ, ಹೋಗಿ ನೋಡಲಿ. ಅಲ್ಲಿ ಕ್ರಸ್ಟ ಗೇಟ್ ತುಂಡರಿಸಿದಾಗ, ಅಣೆಕಟ್ಟು ಸಂಪೂರ್ಣ ಅಲ್ಲಾಡಿದಂತೆ ಭಾಸವಾಗಿತ್ತು. ನಾವು ಕೇವಲ 7 ದಿನಗಳಲ್ಲಿ ದುರಸ್ತಿ ಮಾಡಿದೆವು. ಆಗ ಜನಾರ್ದನ ರೆಡ್ಡಿ ಏನು ಹೇಳಿಕೆ ಕೊಟ್ಟಿದ್ದರು ಎಂಬುದು ಗೊತ್ತಿದೆ. ಆಗ ನಾನು ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂದು ಹೇಳಿದ್ದೆ. ನಂತರ ನಾವು ರಾಜ್ಯದ ಎಲ್ಲಾ ಅಣೆಕಟ್ಟುಗಳ ಅಧ್ಯಯನ ನಡೆಸಿ ಹಳೇ ಗೇಟ್ ಗಳ ಬದಲಾವಣೆಗೆ ತೀರ್ಮಾನ ಮಾಡಿದೆವು. ಮೊದಲ ಹಂತದಲ್ಲಿ ತುಂಗಭದ್ರಾ ಡ್ಯಾಂ ಕ್ರಸ್ಟಗೇಟ್ ಬದಲಿಸುತ್ತಿದ್ದೇವೆ. ಪತ್ರಿಕೆಯಲ್ಲಿ ಮಾರ್ಚ್ 10ರ ವೆರೆಗೆ 14 ಗೇಟ್ ಬದಲಿಸಲಾಗಿದ್ದು, ತಜ್ಞರ ಪ್ರಕಾರ ಒಂದು ಕ್ರೆಸ್ಟ್ ಗೇಟ್ ಅಳವಡಿಕೆಗೆ 7 ದಿನಗಳ ಕಾಲಾವಕಾಶ ಬೇಕು. ಹಲವು ಗೇಟ್ ಗಳ ಅಳವಡಿಕೆ ಕಾರ್ಯ ನಡೆದರೆ ಈ ಪ್ರಕ್ರಿಯೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ” ಎಂದು ತಿಳಿಸಿದರು.

ಎಲ್ಲಾ ಕ್ರಸ್ಟಗೇಟ್ ಬದಲಿಸುವ ತೀರ್ಮಾನ ಮಾಡಿದ್ದು, 19ನೇ ಸ್ಟಾಪ್ ಲಾಗ್ ಗೇಟ್ ತೆರವುಗೊಳಿಸಿ ಸ್ಪಿಲ್ ಗೇಟ್ ಅಳವಡಿಕೆಗೆ 2025 ಏಪ್ರಿಲ್ 24ರಂದು ಅಹಮದಾಬಾದಿನ ಹಾರ್ಡ್ ವೇರ್ ಟೂಲ್ ಅಂಡ್ ಮಷಿನರಿ ಪ್ರಾಜೆಕ್ಟ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 34.48 ಕೋಟಿ ರೂ. ವೆಚ್ಚದಲ್ಲಿ ಉಳಿದ 32 ಸ್ಪಿಲ್ ವೇ ಗೇಟ್ ಅಳವಡಿಕೆಯನ್ನು 15 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಸಲು ಇದೇ ಸಂಸ್ಥೆಯೊಂದಿಗೆ ಜೂನ್ 10, 2025ರಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ. 25 ಗೇಟ್ ಗಳ ಫ್ಯಾಬ್ರಿಕೇಶನ್ ಕೆಲಸ ಮುಗಿದಿದ್ದು, 2 ಗೇಟ್ ಗಳ ಕೆಲಸ ನಡೆಯುತ್ತಿದೆ. 26 ಗೇಟ್ ಗಳನ್ನು ತೆಗೆಯಲಾಗಿದ್ದು, 2 ಗೇಟ್ ಗಳ ತೆರವು ಕಾರ್ಯ ನಡೆಯುತ್ತಿದೆ. ಇದರಲ್ಲಿ 14 ಗೇಟ್ ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 3 ಗೇಟ್ ಗಳ ಕಾರ್ಯ ಪ್ರಕ್ರಿಯೆಯಲ್ಲಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಗೇಟ್ ಬದಲಾವಣೆ ಮುಗಿಸಲು ವ್ಯವಸ್ಥೆ ಮಾಡಲಾಗಿದೆ” ಎಂದು ವಿವರಿಸಿದರು.

ನವಲಿ ಸಮನಾಂತರ ಡ್ಯಾಂ: ಆಂಧ್ರ ಚರ್ಚೆಗೆ ಬರುತ್ತಿಲ್ಲ:ಇನ್ನು ನವಲಿ ಸಮತೋಲಿತ ಜಲಾಶಯ ನಿರ್ಮಾಣ ವಿಚಾರದಲ್ಲಿ ಆಂಧ್ರ ಪ್ರದೇಶದವರು ಮಾತುಕತೆಗೆ ಬರುತ್ತಿಲ್ಲ. ಕೆಲವರು ಪರ್ಯಾಯ ಮಾರ್ಗಗಳ ಸಲಹೆ ನೀಡಿದ್ದು, ಆಂಧ್ರ ಸಿಎಂ ಈ ವಿಚಾರವಾಗಿ ಚರ್ಚೆ ಮಾಡಲು ಸಮಯ ನೀಡುತ್ತಿಲ್ಲ. ಈ ಅಣೆಕಟ್ಟು ನಮ್ಮ ಆಸ್ತಿ. ಈ ವಿಚಾರದಲ್ಲಿ ಕೇವಲ ಕರ್ನಾಟಕ ಏಕಾಂಗಿಯಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಮೂರು ರಾಜ್ಯದವರು ಸೇರಿ ತೀರ್ಮಾನ ಮಾಡಬೇಕು. ನೀರು ಹರಿದು ಸಮುದ್ರಕ್ಕೆ ಹೋಗುತ್ತಿದೆ. ಇದನ್ನು ಉಳಿಸಿ ಜನರಿಗೆ ನೀಡಲು ನಿಮ್ಮೆಲ್ಲರ ರಾಜಕೀಯ ಬದ್ಧತೆ, ಶಕ್ತಿ ನೀಡಿದರೆ ನಾವು ವ್ಯವಸ್ಥೆ ಮಾಡಬಹುದು. ಕ್ರಸ್ಟಗೇಟ್ ಬದಲಾವಣೆ ವಿಚಾರವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಸರಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ

ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಕೆ. ನೈಜತೆ ಪರಿಶೀಲನೆಗೆ ಆರು ಜನ ನೋಡಲ್ ಅಧಿಕಾರಿಗಳ ನೇಮಕ.
*ನಕಲಿ ದಾಖಲೆ ಸಲ್ಲಿಸಿದ ಅತಿಥಿ ಉಪನ್ಯಾಸಕರಲ್ಲಿ ಡವ..ಡವ..

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಸರಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಳ್ಳಲು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರ ದಾಖಲಾತಿಗಳ ನೈಜತೆ ಪರಿಶೀಲನೆಗಾಗಿ ಪ್ರಾದೇಶಿಕವಾರು
ಆರು ಪ್ರಾಧ್ಯಾಪಕರನನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಆದೇಶ ಮಾಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಖಾಲಿ ಇದ್ದ ಪ್ರಾಧ್ಯಾಪಕರ ಹುದ್ದೆಗಳ ಹಿನ್ನೆಲೆಯಲ್ಲಿ ಆಯಾ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಯುಜಿ ಮತ್ತು ನಾನ್ ಯುಜಿ ಅರ್ಹತೆಯಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಾತಿ ಪ್ರಕ್ರಿಯೆ ಜರುಗಿ ಅತಿಥಿ ಉಪನ್ಯಾಸಕರು ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಈಗಾಗಲೇ ತಮ್ಮ ಕರ್ತವನ್ನು ನಿರ್ವಹಿಸುತ್ತಿದ್ದಾರೆ.
ಈ ಮಧ್ಯೆ ಅತಿಥಿ ಉಪನ್ಯಾಸಕರ ಹುದ್ದೆ ಸಿಗದವರು ಮತ್ತು ಸಾಮಾಜಿಕ ಹೋರಾಟಗಾರರು ನಕಲಿ ಪಿಎಚ್ಡಿ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ನೇಮಕಗೊಂಡಿರುವವರನ್ನು ಕುರಿತು ಆಕ್ಷೇಪಣೆ ಸಲ್ಲಿಸಿದ್ದರಿಂದ ಉನ್ನತ ಶಿಕ್ಷಣ ಇಲಾಖೆ ದಾಖಲೆಗಳ ನೈಜತೆಯನ್ನು ಪಡೆದುಕೊಳ್ಳಲು ಹಲವು ಸೂಚನೆ ನೀಡಿದ್ದರೂ ಸಹ ಬಹುತೇಕ ಅಧಿಕ ಅತಿಥಿ ಉಪನ್ಯಾಸಕರು ತಮ್ಮ ದಾಖಲೆಗಳ ನೈಜತೆ
ಸಲ್ಲಿಸಿಲ್ಲ. ಈ ಮಧ್ಯೆ ಸುಮಾರು 1200 ಜನ ಅತಿಥಿ ಉಪನ್ಯಾಸಕರು ವಿವಿಧ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹೊರಗೆ ಹೋಗಿದ್ದಾರೆ. ಜೊತೆಗೆ ಉನ್ನತ ಶಿಕ್ಷಣ ಇಲಾಖೆಯವರು ಆಯಾ ಕಾಲೇಜಿನ ಪ್ರಾಚಾರ್ಯರು ನೈಜತೆ ಪ್ರಮಾಣ ಪತ್ರ ಪರಿಶೀಲನೆ ಮಾಡುವ ಆದೇಶ ಹೊರಡಿಸಿದ್ದು ಇದು ಅವೈಜ್ಞಾನಿಕ ವಾಗಿದೆ ಆದ್ದರಿಂದ ಉನ್ನತ ಶಿಕ್ಷಣ ಇಲಾಖೆ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡುವಂತೆ ಅತಿಥಿ ಉಪನ್ಯಾಸಕರ ಸಂಘದವರು ಇಲಾಖೆ
ಮತ್ತು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದರಿಂದ ಇದೀಗ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಪ್ರಾದೇಶಿಕವಾರು ಆರು ಜನ ಪ್ರಾಧ್ಯಾಪಕರನ್ನು ಅತಿಥಿ ಉಪನ್ಯಾಸಕರ ನಕಲಿ ಪಿಎಚ್ಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರಗಳ ನೈಜತೆಯನ್ನು
ಪರಿಶೀಲನೆ ಮಾಡಿ ಇಲಾಖೆಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಪ್ರಸ್ತುತ ಕರ್ತವ್ಯ ನಿರ್ವಹಿಸುವವರು ಮತ್ತು ರಾಜೀನಾಮೆ ನೀಡಿದವರ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ.
ಬಹುತೇಕ ಅತಿಥಿ ಉಪನ್ಯಾಸಕರು ನಕಲಿ ಪಿಎಚ್ಡಿ ಮತ್ತು ವೈದ್ಯಕೀಯ ಪ್ರಮಾಣ ಪತ್ರಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿ ಉಪನ್ಯಾಸಕರಾಗಿ ನೇಮಕಗೊಂಡಿದ್ದು ಇದನ್ನು ಪ್ರಶ್ನಿಸಿ ನಿಜವಾದ ಪಿ ಎಚ್ ಡಿ ಮಾಡಿದವರು ಮತ್ತು ಅಂಗವಿಕಲತೆಯನ್ನು ಹೊಂದಿದವರು ನಕಲಿ ಪಿಎಚ್ಡಿ ಮತ್ತು ಅಂಗವಿಕಲತೆಯ ಪ್ರಮಾಣ ಪತ್ರ ಹೊಂದಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂಯೆ ಉನ್ನತ ಇಲಾಖೆಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಇದೀಗ ರಾಜೀನಾಮೆ ನೀಡಿ ಹೊರಗೆ ಹೋಗಿರುವ 12 ನೂರು ಜನ ಅತಿಥಿ ಉಪನ್ಯಾಸಕರು ಸೇರಿದಂತೆ ಪ್ರಸ್ತುತ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ದಾಖಲಾತಿ ನಕಲಿಯೋ ಅಸಲಿಯೋ ಎಂಬ ಜಿಜ್ಞಾಸೆಯಲ್ಲಿ ಪ್ರತಿಯೊಬ್ಬ ಅತಿಥಿ ಉಪನ್ಯಾಸಕರ ಎದಿಯಲ್ಲಿ ಡವ..ಡವ.. ಶುರುವಾಗಿದ್ದು ಇಲಾಖೆ ಶೀಘ್ರದಲ್ಲೇ ನೈಜತೆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.