Breaking News
ಮನೆಯ ಮುಂದೆ ಮೂತ್ರವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನ್ಯಾಯವಾದಿ ಹಾಗೂ ಅವರ ಪತ್ನಿ ಮೇಲೆ ಹಲ್ಲೆ!

*ಜಮೀರ್ ಇತರರನ್ನು ಬಂಧಿಸುವಂತೆ ಮಾಜಿ ಶಾಸಕ ಮುನವಳ್ಳಿ ನೇತೃತ್ವದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮನೆಯ ಮುಂದೆ ಮೂತ್ರ ಮಾಡಿದ ವಿಷಯಕ್ಕೆ ಸಂಬಂಧಪಟ್ಟಂತೆ ಜಮೀರ್ ಹಾಗೂ ಐವತ್ತು ಹೆಚ್ಚು ಜನರು ಸೇರಿ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ಮಾಡಿದ ಘಟನೆ ಬಸವೇಶ್ವರ ಕಾಲೋನಿ(ಬಂಬೂ ಬಜಾರ್)ಯಲ್ಲಿ ಮಂಗಳವಾರ ಸಂಜೆ ಜರುಗಿದ್ದು ಹಲ್ಲೆ ಮಾಡಿದವರು ಕೂಡಲೇ ಬಂಧಿಸುವಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ನ್ಯಾಯವಾದಿ ಪ್ರಭಾಕರ್ ಆಪ್ತರು ಹಾಗೂ ವಕೀಲರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಗಂಗಾವತಿಯಲ್ಲಿ ಇಂಥ ಘಟನೆಗಳು ಪದೇಪದೇ ನಡೆಯುತ್ತಿದ್ದು ಪೊಲೀಸ್ ವೈಫಲ್ಯ ಕಾರಣವಾಗಿದೆ. ಕೆಲ ವ್ಯಕ್ತಿಗಳ ಕುಮ್ಮಕ್ಕಿನಿಂದ ನಗರದಲ್ಲಿ ಪದೇ ಪದೇ ಹಲ್ಲೆ, ದೌರ್ಜನ್ಯ, ಗೂಂಡಾಗಿರಿಯಂತಹ ಕೃತ್ಯಗಳು ನಡೆಯುತ್ತಿವೆ. ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಬೇಕೆಂದರು.

ಡಿಎಸ್ಪಿ ಜೆ.ಎಸ್.ನ್ಯಾಮಗೌಡ ಮಾತನಾಡಿ, ದೌರ್ಜನ್ಯ ಗುಂಡಾಗಿರಿ ಹಲ್ಲೆ ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಯಾರನ್ನು ಬಿಡುವ ಪ್ರಶ್ನೆ ಇಲ್ಲ ಅವರನ್ನು ಕೂಡಲೇ ಬಂಧಿಸಿ ಶಿಕ್ಷಿಸಲಾಗುತ್ತದೆ. ಎಲ್ಲರೂ ಸಹಕಾರ ನೀಡುವ ಮೂಲಕ ಗಂಗಾವತಿಯಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು. ಈಗಾಗಲೇ ಗಂಗಾವತಿ ನಗರದಾದ್ಯಂತ ಸಿಸಿ ಕ್ಯಾಮರಗಳನ್ನು ಅಳವಡಿಸಿ ಕಣ್ಗಾವಲು ಇಡಲಾಗಿದೆ ಅವರ ಹಿಂದೆ ಇರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷರು,ಕಾರ್ಯದರ್ಶಿ,ಪದಾಧಿಕಾರಿಗಳು ಬಿಜೆಪಿ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿದ್ದರು.

ಚಿಕಿತ್ಸೆ: ಮೂತ್ರ ವಿಸರ್ಜನೆ ಘಟನೆಯಲ್ಲಿ ಅಸ್ವಸ್ಥಗೊಂಡ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿ ಅನಸೂಯಾ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

**

“ಮೂತ್ರ ವಿಸರ್ಜನೆ ಮಾಡಿ ರದ್ದಾಂತಕ್ಕೆ ಕಾರಣನಾದ ಜಮೀರ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿ 6ವರ್ಷ ಪೂರೈಸಿದ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಶುಭಾಶಯ.

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು:

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ

ಅಭಿನಂದಿಸಿದ್ದಾರೆ.

ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ದತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು.

ವಿರೋಧ ಪಕ್ಷವಾದ ಬಿಜೆಪಿ ಸುಳ್ಳು ಕೇಸ್ ಗಳನ್ನು ಹಾಕಿ ಬಗೆಬಗೆಯ ಕಿರುಕಳ ನೀಡಿದರೂ ಶಿವಕುಮಾರ್ ಅವರು ಮಣಿಯದೆ ಪಕ್ಷಕ್ಕೆ ನಿಷ್ಠರಾಗಿ ಉಳಿದಿರುವುದು ಕಾಂಗ್ರೆಸ್ ಪಕ್ಷದ ಬಗ್ಗೆ ಅವರಲ್ಲಿರುವ ರಾಜಿಯಿಲ್ಲದ ನಿಷ್ಠೆಗೆ ಸಾಕ್ಷಿಯಾಗಿದೆ.. ಇದು ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಸ್ಪೂರ್ತಿದಾಯಕ ನಡವಳಿಕೆ ಆಗಿದೆ.

ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆಯಲ್ಲಿ ಡಿ.ಕೆ. ಶಿವಕುಮಾರ್ ಹಗಲಿರುಳು ದುಡಿದಿದ್ದಾರೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮತ್ತೆ ಕಟ್ಟುವಲ್ಲಿ ಶಿವಕುಮಾರ್ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದಾರೆ.

ನನಗಿಂತ ಕಿರಿಯರಾದ ಶಿವಕುಮಾರ್ ಅವರಿಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ. 2028ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ. ಇದಕ್ಕಾಗಿ ನಡೆಯುವ ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ನಾನು ಕೂಡಾ ಜೊತೆಯಿರುತ್ತೇನೆ ಎಂದು ಶುಭ ಕೋರಿದ್ದಾರೆ.

ಅಪೂರ್ಣವಾಗಿರುವ ವಾಲ್ಮೀಕಿ ಭವನಗಳಿಗೆ ೨ಕೋಟಿ ರೂ.ಅನುದಾನ ಕ್ಕೆ ಶಾಸಕ ರೆಡ್ಡಿ ಆಗ್ರಹ.

 *ವಿಧಾನಸಭೆಯ ಅಧಿವೇಶನದಲ್ಲಿ ಸರಕಾರಕ್ಕೆ ಪ್ರಶ್ನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2021-22 ಸಾಲಿನಲ್ಲಿ ಅಂದಿನ ಬಿಜೆಪಿ ಸರಕಾರ 10 ವಾಲ್ಮೀಕಿ ಭವನ ನಿರ್ಮಿಸಲು ಶೇ. 25ರಷ್ಟು ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿತ್ತು.ಅನುದಾನದ ಕೊರತೆಯಿಂದಾಗಿ ಇಂದಿನವರೆಗೂ ವಾಲ್ಮೀಕಿ ಭವನದ ಕಾಮಗಾರಿ ಅಪೂರ್ಣವಾಗಿದೆ. ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಒಂದು ರೂಪಾಯಿ ಅನುದಾನವನ್ನು ಸಹ ಬಿಡುಗಡೆ ಮಾಡಿಲ್ಲ,ಕೂಡಲೇ ಅಗತ್ಯವಿರುವ ಎರಡು ಕೋಟಿ ರೂಗಳನ್ನು ಬಿಡುಗಡೆ ಮಾಡಿ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದರು. ಇದಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಉತ್ತರ ನೀಡಿ ಈಗಾಗಲೇ ಅಪೂರ್ಣಗೊಂಡಿರುವ ವಾಲ್ಮೀಕಿ ಭವನಗಳಿಗೆ ಅಗತ್ಯವಿರುವ ಎರಡು ಕೋಟಿ ರೂಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವ ಭರವಸೆ ನೀಡಿದರು. ವಾಲ್ಮೀಕಿ ನಿಗಮದ ಹಗರಣದ ಎಲ್ಲಾ ಹಣವನ್ನು ಸರ್ಕಾರ ವಸೂಲಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯ ಅಧವೇಶನದಲ್ಲಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅನುದಾನದಲ್ಲೇ ಗಂಗಾವತಿ ವಿಧಾನಸಭಾ ಕ್ಷೇತ್ರದ ಎಲ್ಲಾ ಅಪೂರ್ಣ ವಾಲ್ಮೀಕಿ ಭವನಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಕೂಡಲೇ ಹಣ ಬಿಡುಗಡೆ ಮಾಡುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಸರ್ಕಾರದ ಗಮನ ಸೆಳೆದರು.

ನೂತನ ಜಡ್ಜ್ ಆಗಿ ನೇಮಕಗೊಂಡ ಸಂತೋಷ ಬೆಳಗೋಡ ಅವರಿಗೆ ಚಿಕ್ಕಜಂತಗಲ್ ಕರಿಮುಲ್ಲಾ ದರ್ಗಾದಲ್ಲಿ ಸನ್ಮಾನ.

*ಪರಿಶ್ರಮ ಅಧ್ಯಯನದ ಮೂಲಕ ಗುರಿ ಸಾಧಿಸಿದ ಸಂತೋಷ ಶ್ಲಾಘನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಸತತ ಪರಿಶ್ರಮ ಹಾಗೂ ಅಧ್ಯಯನದ ಮೂಲಕ ಯಾರು ಬೇಕಾದರೂ ಗುರಿಯನ್ನು ತಲುಪಬಹುದು ಎಂದು ನೂತನವಾಗಿ ಜಡ್ಜ್ ಆಗಿ ನೇಮಕಗೊಂಡಿರುವ ಸಂತೋಷ ಬೆಳಗೋಡು ಅವರಿಂದ ಸರ್ವರೂ ಸಾಧಿಸುವುದನ್ನು ಕಲಿಯಬೇಕು ಎಂದು ಚಿಕ್ಕಜಂತಗಲ್ ಕರಿಮುಲ್ಲಾ ದರ್ಗಾದ ಮುಖ್ಯಸ್ಥರಾದ

ಸೈಯದ್ ತಾಹಿರ್ ಕಾದ್ರಿ ಆದಿಲ್ ಪಾಶ ಸಾಹೇಬರು ಸಜ್ಜದ ನಸಿನ್ ಕರಿ ಮುಲ್ಲಾ ಕಾದ್ರಿ ಹೇಳಿದರು.

ಅವರು ತಾಲೂಕಿನ ಚಿಕ್ಕ ಜಂತಗಲ್ ಗ್ರಾಮದ ಶ್ರೀ ಕರಿಮುಲ್ಲಾ ಖಾದ್ರಿ ಅವರ ದರ್ಗಾದ ಉರುಸು ಕಾರ್ಯಕ್ರಮದಲ್ಲಿ ನೂತನವಾಗಿ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಸಂತೋಷ ಬೆಳಗೋಡು ಇವರನ್ನು ಸಮಸ್ತ ಮುಸ್ಲಿಂ ಸಮಾಜದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಶಿಕ್ಷಣದ ಮೂಲಕ ಸರ್ವರೂ ಉನ್ನತ ಹುದ್ದೆಗೆ ಹೋಗಲು ಸಾಧ್ಯ, ಆದರೆ ಪರಿಶ್ರಮ ಮತ್ತು ಸತತ ವಿದ್ಯಾಭ್ಯಾಸ ಮಾಡುವುದು ಅವಶ್ಯಕ.ಗ್ರಾಮೀಣ ಭಾಗದಲ್ಲಿ ಹುಟ್ಟಿ ಉನ್ನತ ಶಿಕ್ಷಣ ಪಡೆದು ಪಾಲಕರ ಕನಸನ್ನು ಮಕ್ಕಳು ನನಸು ಮಾಡಿ ಇಡೀ ಸಮುದಾಯ ಮೆಚ್ಚುವ ಕಾರ್ಯ ಮಾಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ

ಕಾರ್ಯಕ್ರಮದಲ್ಲಿ ಚಿಕ್ಕ ಜಂತಗಲ್ ಗ್ರಾಮದ ಹಿರಿಯರಾಗಿರುವ ಸೈಯದ್ ಅಲಿ ಸಾಹೇಬ, ನ್ಯಾಯವಾದಿಗಳಾದ ಸೈಯದ್ ಹಾಶುಮುದ್ದೀನ್, ಗೌಸ್ ಪಿರ್, ಎಜಿಪಿ ಭಾನು ಬಿ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮುಖಂಡ ಡಾ.ಶೇಖ್ ಇಲಿಯಸ್ ಬಾಬಾ, ಶರಣಯ್ಯ ಸ್ವಾಮಿ, ಬಟಾರಿ ಮಂಜುನಾಥ, ಬಿ ವೀರಪ್ಪ, ಅಂದನಯ್ಯ ಸ್ವಾಮಿ, ರಾಜಸಾಬ, ರಾಜಶೇಖರ, ಮುಕ್ಕಣ್ಣಗೌಡ, ಬಿ ಮಂಜು, ಆದಿಂ ಪಾಷಾ, ವಲಿಸಾಬ, ಇಮ್ರಾನ ಸಾಬ, ಬುಡನ ಸಾಬ, ಬಾಸು ಸಾಬ, ಬಶೀರ್, ಖಾಜಾ ಸಾಬ, ಶೇಕ್ ಮಹಮ್ಮದ

ಸೇರಿ ಅನೇಕರಿದ್ದರು.

ಗಂಗಾವತಿ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಯಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ!

*ಪುಡಾರಿಗಳ ಅಡ್ಡ ಆಗಿರುವ ಕೇಂದ್ರ ಬಸ್ ನಿಲ್ದಾಣ. 

*ನಿತ್ಯವೂ ಪ್ರಯಾಣಿಕರು,ವ್ಯಾಪಾರಿಗಳ ಮೇಲೆ ನಿಶಾಚರಿಗಳಿಂದ ಹಲ್ಲೆ, ದೌರ್ಜನ್ಯ.

*ಒಂದು ವರ್ಷದಿಂದ ಕೆಟ್ಟು ನಿಂತಿರುವ ಬಸ್ ನಿಲ್ದಾಣದ ಸಿಸಿ ಕ್ಯಾಮರಾಗಳು.

*ರಾತ್ರಿ ವೇಳೆ ನಗರದ ವಿವಿಧ ಸರ್ಕಲ್ ಗಳ ಪುಡಾರಿ ಯುವಕರಿಂದ ಗುಂಡು ಪಾರ್ಟಿ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ದುಷ್ಕರ್ಮಿಯೊರ್ವ ವಿನಾಕಾರಣ ವ್ಯಕ್ತಿಯೊಬ್ಬರ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ತಲೆ ಮತ್ತು ಎಡ ಭಾಗದ ಕಣ್ಣು, ಕಿವಿಗೆ ತೀವ್ರ ಗಾಯವಾದ ಪ್ರಕರಣ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಮಧ್ಯ ರಾತ್ರಿ ಜರುಗಿದೆ.

ಗಂಗಾವತಿ ಜೆಸ್ಕಾಂ ಕಚೇರಿಯ ನಿವೃತ್ತ ಲೈನ್ ಮ್ಯಾನ್ ಶಿವಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಳಿತಿರುವ ಸಂದರ್ಭದಲ್ಲಿ ದುಷ್ಕರ್ಮಿ ಒಬ್ಬ ಆಗಮಿಸಿ ವಿನಾಕಾರಣ ಜಗಳ ತೆಗೆದು ಕಲ್ಲಿನಿಂದ ತಲೆ ಮತ್ತು ಎಡ ಭಾಗದ ಕಣ್ಣು ಕಿವಿಗೆ ಹೊಡೆದಿದ್ದರಿಂದ ದೂರ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಪುಡಾರಿಗಳ ಅಟ್ಟಹಾಸ ಹೆಚ್ಚಾಗಿದ್ದು ನಿತ್ಯವೂ ಪ್ರಯಾಣಿಕರು ಮತ್ತು ಸಾರ್ವಜನಿಕರ ಮೇಲೆ ಮತ್ತು ವ್ಯಾಪಾರಿಗಳ ಮೇಲೆ ದೌರ್ಜನ್ಯ ಗುಂಡಾಗಿರಿ ವ್ಯಸಗುವ ಗುಂಪು ಕೆಲಸ ಮಾಡುತ್ತಿದೆ. ಜೊತೆಗೆ ನಗರದ ವಿವಿಧ ಸರ್ಕಲ್ ಗಳಲ್ಲಿ ಮಧ್ಯರಾತ್ರಿ ಪುಡಾರಿಗಳು ಮಧ್ಯಪಾನ ಸೇವನೆ ಮಾಡಿ ಪ್ರಯಾಣಿಕರು, ಸಾರ್ವಜನಿಕರು ಮತ್ತು ವಾಹನ ಸವಾರರ ಮೇಲೆ ಹೊಡಿಬಡಿ ಮಾಡುತ್ತಿದ್ದಾರೆ.

ಕೆಟ್ಟು ನಿಂತ ಸಿ.ಸಿ. ಕ್ಯಾಮರಾಗಳು: ಕೇಂದ್ರ ಬಸ್ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಪ್ರಯಾಣಿಕರು ಸಾರ್ವಜನಿಕರು ಭೇಟಿ ನೀಡುತ್ತಾರೆ ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆ. ಎಸ್. ಆರ್. ಟಿ.ಸಿ ಕ್ಯಾಮರಗಳನ್ನು ಅಳವಡಿಸಿದ್ದು ಕಳೆದ ಒಂದು ವರ್ಷದಿಂದ ಸಿಸಿ ಕ್ಯಾಮರಗಳು ಕೆಟ್ಟು ನಿಂತಿವೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಿ.ಸಿ.ಕ್ಯಾಮೆರಾ ಗಳು ಇರುವ ಜಾಗದಲ್ಲಿ ವಿದ್ಯುತ್ ತೊಂದರೆ ಇದ್ದು ಕಳೆದ ಕೆಲವು ದಿನಗಳಿಂದ ಸಿ.ಸಿ. ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ.ದುರಸ್ತಿ ಮಾಡಿಸಲಾಗುತ್ತದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ದುಷ್ಕರ್ಮಿ‌ ಬಂಧನಕ್ಕೆ ಕ್ರಮ: ಕೇಂದ್ರ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿಯ ಕುರಿತು ಪೊಲೀಸ್ ಇಲಾಖೆಯ ಶ್ರೀ ಕೃಷ್ಣದೇವರಾಯ ವೃತ್ತದ ಸಿ ಸಿ ಕ್ಯಾಮರಾದಲ್ಲಿ ವಿಡಿಯೋ ಸೆರೆಯಾಗಿದ್ದು ದುಷ್ಕರ್ಮಿಯನ್ನು ಶೀಘ್ರದಲ್ಲೇ ಬಂದಿಸಲಾಗುತ್ತದೆ ಎಂದು ನಗರ ಪೊಲೀಸ್ ಠಾಣೆಯ ಸಿ. ಪಿ. ಐ. ಪ್ರಕಾಶ ಮಾಳೆ ತಿಳಿಸಿದ್ದಾರೆ.