*ಈಡಿಗ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ 750 ಕಿ.ಮೀ.ಬೆಂಗಳೂರು ಪಾದಯಾತ್ರೆ ಸ್ಪಂದಿಸದ ರಾಜ್ಯ ಸರಕಾರ ಸ್ವಾಮೀಜಿ ಆಕ್ರೋಶ.
*ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಚಿವ ತಂಗಡಗಿಯವರನ್ನು ಹೋಗದಂತೆ ಸಚಿವ ಮಧುಬಂಗಾರಪ್ಪ ತಡೆದು ಸಿಎಂ ಕಿವಿ ಚುಚ್ವುವ ಮಾತನಾಡಿದ್ದಾರೆ:ಆರೋಪ
*ರೆಡ್ಡಿ ಶ್ರೀನಿವಾಸ ಕೊಂಡಿ ಮಂಚಣ್ಣ ಇದ್ದಂತೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಆಗಲಿ ಎಂದು ಅತ್ಯಂತ ಹಿಂದುಳಿದ ಮಠಾಧೀಶರ ವೇದಿಕೆಯ ಪರವಾಗಿ ಬೆಂಬಲ ನೀಡಿದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮನ್ನು ಹಾಗೂ ಆರ್ಯ ಈಡಿಗ ಸಮಾಜವನ್ನು ವಿರೋಧಿಸಲು ಪ್ರಮುಖ ಕಾರಣವಾಗಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಈಡಿಗ ಸಮಾಜದವರು ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಆರ್ಯ ಈಡಿಗರ ಸಮಾಜದ ಜಗದ್ಗುರು ಪೂಜ್ಯ ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಗಂಗಾವತಿಯ ಸರ್ವೇಶ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಆರ್ಯ ಈಡಿಗ ಸಮಾಜದವರು ರಾಜ್ಯದಲ್ಲಿ
ಶೇ. 95 ರಷ್ಟು ಅತ್ಯಂತ ಬಡತನದಲ್ಲಿದ್ದು ಈಡಿಗರ ಸಮಾಜವನ್ನು ಮೇಲೆತ್ತುವ ಸಲುವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಮತ್ತು ಕಲಬುರ್ಗಿಯಿಂದ ಬೆಂಗಳೂರಿಗೆ ಎರಡು ಬಾರಿ ಪಾದಯಾತ್ರೆ ಮಾಡಿ ಸರಕಾರದ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಕಲಬುರ್ಗಿಯಿಂದ 750 ಕಿಲೋಮೀಟರ್ ಬೆಂಗಳೂರು ಪಾದಯಾತ್ರೆ ನಂತರ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಹಿಂದುಳಿದ ವರ್ಗದ ಸಚಿವ ಶಿವರಾಜ ತಂಗಡಗಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ತಮ್ಮ ಮನವಲಿಸಲು ಮುಂದೆ ಬಂದರು. ಆದರೆ ತಮ್ಮ ಬೇಡಿಕೆಗಳು ಮುಖ್ಯಮಂತ್ರಿಯವರು ಈಡೇರಿಸುವ ಭರವಸೆಗಳಾಗಿದ್ದು ತಮ್ಮ ನೇತೃತ್ವದಲ್ಲಿ ಆರ್ಯ ಈಡಿಗ ಸಮಾಜದ ಕೆಲ ಮುಖಂಡರ ಸಭೆಯನ್ನು ಮುಖ್ಯಮಂತ್ರಿಗಳೊಂದಿಗೆ ನಡೆಸಲು ವ್ಯವಸ್ಥೆ ಮಾಡುವಂತೆ ಸಚಿವ ಶಿವರಾಜ್ ತಂಗಡಗಿ ಅವರ ಮೂಲಕ ಹೇಳಿ ಕಳಿಸಲಾಗಿತ್ತು, ಆರ್ಯ ಈಡಿಗ ಸಮಾಜದವರೇ ಆಗಿರುವ ಸಚಿವ ಮಧು ಬಂಗಾರಪ್ಪ ಸೇರಿದಂತೆ ಆರು ಜನ ಎಂಎಲ್ಎಗಳು ಸ್ವಾಮೀಜಿಗಳನ್ನು ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಬರಬಾರದು ಎಂದು ತಾಕೀತು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಯ ಈಡಿಗ ಸಮಾಜದ ಸಚಿವ ಮಧು ಬಂಗಾರಪ್ಪ ಮತ್ತು ಆರು ಜನ ಶಾಸಕರು ನಮ್ಮ ಸಮಾಜಕ್ಕೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಮ್ಮ ಸಮಾಜದ ಆರು ಜನ ಶಾಸಕರಿಗೆ ಸರಿಯಾದ ಬುದ್ದಿ ಕಲಿಸಲು ಯೋಜನೆ ರೂಪಿಸಲಾಗಿದ್ದು 224 ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ಯ ಈಡಿಗ ಜಾಗೃತಿ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಬುದ್ಧಿ ಕಲಿಸಲಾಗುತ್ತದೆ. ಏಪ್ರೀಲ್ ಮೊದಲ ವಾರದಲ್ಲಿ ಕಾರಟಗಿಯಲ್ಲಿ ಸಚಿವ ಶಿವರಾಜ್ ತಂಗಡಗಿ ನಿವಾಸದ ಹತ್ತಿರ ಆರ್ಯ ಈಡಿಗರ ಶಕ್ತಿ ಸಮಾವೇಶ ನಡೆಸಿ ಲಕ್ಷಾಂತರ ಈಡಿಗ ಸಮಾಜದವರನ್ನು ಕರೆಸಿ, ಶಕ್ತಿಪ್ರದರ್ಶನ ಮಾಡಲಾಗುತ್ತದೆ.
ರೆಡ್ಡಿ ಶ್ರೀನಿವಾಸ ಕೊಂಡಿ ಮಂಚಣ್ಣ ಪೂಜ್ಯ ಆರೋಪ:
ವಿಶ್ವಗುರು ಬಸವಣ್ಣನವರ ಕಾಲದಲ್ಲಿ ಕೊಂಡಿ ಮಂಚಣ್ಣ ಎನ್ನುವ ವ್ಯಕ್ತಿ ಇಡೀ ಸಮಾಜಕ್ಕೆ ಮಾರಕವಾಗುವ ಕೃತ್ಯಗಳನ್ನು ಮಾಡಿ ಬಸವಣ್ಣನವರಿಗೆ ಸಂಕಷ್ಟ ತಂದಿಟ್ಟಿದ್ದರು. ಅದರಂತೆ ಆರ್ಯ ಈಡಿಗ ಸಮಾಜದಲ್ಲಿ ರೆಡ್ಡಿ ಶ್ರೀನಿವಾಸ ಅವರು ಕೊಂಡಿ ಮಂಚಣ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ.
ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಅವರು ತಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ 2023ನೇ ಇಸ್ವಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ಶಿವರಾಜ ತಂಗಡಗಿ ಅವರನ್ನು ಮಂತ್ರಿ ಮಾಡಲು ತಮ್ಮನ್ನು ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿ ಕೆ.ಸಿ. ವೇಣುಗೋಪಾಲ್ ಅವರ ಮೂಲಕ ಸಚಿವರನ್ನಾಗಿ ಮಾಡಿಸುವಾಗ ತಮ್ಮ ನೆರವನ್ನು ಪಡೆದುಕೊಂಡ ಶಿವರಾಜ್ ತಂಗಡಗಿ ಹಾಗೂ ರೆಡ್ಡಿ ಶ್ರೀನಿವಾಸ್ ಇದೀಗ ತಮ್ಮ ವಿರುದ್ಧವೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಮತ್ತು ಗುತ್ತಿಗೆ ಕಾಮಗಾರಿ ಪಡೆಯಲು ಶಿವರಾಜ್ ತಂಗಡಗಿಯವರನ್ನು ಓಲೈಸಲು ರೆಡ್ಡಿ ಶ್ರೀನಿವಾಸ್ ಮುಂದಾಗಿದ್ದು ಇಂತಹ ಸಮಾಜ ದ್ರೋಹಿಗಳಿಗೆ ಮುಂಬರುವ ದಿನಗಳಲ್ಲಿ ಸರಿಯಾಗಿ ಬುದ್ಧಿ ಕಲಿಸಲಾಗುತ್ತದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಆರ್ಯ ಈಡಿಗರ ಸಮಾಜದ ಜಿಲ್ಲಾಧ್ಯಕ್ಷ ಕಾಶಿವಿಶ್ವನಾಥ ಬಿಚ್ಚಾಲಿ ಮುಖಂಡರಾದ
ಯರಡೋಣಿ ನಾಗಪ್ಪ, ಪರಮೇಶ್ವರ,ವಿರೇಶ,ಶಾಮಣ್ಣ, ಅಂಬುಜಮ್ಮ,ಸುಭಾಷ್, ಆನಂದಬಾಬು,ಶ್ರವಣ ಸೇರಿ ಹಲವರಿದ್ದರು.
***
ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ, ಹಿರಿಯ ಪತ್ರಕರ್ತ ದಿನೇಶ್ ಅಮ್ಮಿನ ಮಟ್ಟು ಸೇರಿದಂತೆ ಕೆಲವು ಪ್ರಮುಖ ಆರ್ಯ ಈಡಿಗ ಸಮಾಜದ ಹಿರಿಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಭಾವ ಬೀರುವ ಶಕ್ತಿ ಇದ್ದರೂ ಅವರು ವೇದಿಕೆ ಮುಂಭಾಗದಲ್ಲಿ ಒಂದು ತರಹ ವೇದಿಕೆ ಹಿಂಭಾಗದಲ್ಲಿ ಒಂದು ತರ ಇರುತ್ತಾರೆ. ಆದ್ದರಿಂದ ಅವರ ಹತ್ತಿರ ಸಮಾಜದ ಬೇಡಿಕೆಗಳ ಕುರಿತು ತಾವು ಚರ್ಚೆ ಮಾಡಿಲ್ಲ. ಬಿ.ಕೆ.ಹರಿಪ್ರಸಾದ ಅವರಿಗೆ ಸಿದ್ದರಾಮಯ್ಯನವರು ಸಚಿವ ಸ್ಥಾನ ಯಾಕೆ ಕೊಟ್ಟಿಲ್ಲ. ದಿನೇಶ ಅಮ್ಮಿನಮಟ್ಟು ಅವರ ಹೆಸರು ವಿಧಾನಪರಿಷತ್ ಸ್ಥಾನಕ್ಕೆ ಶಿಫಾರಸ್ಸು ಆಗಿದ್ದರೂ ಯಾಕೆ ಆ ಸ್ಥಾನ ಬೇರೆಯವರಿಗೆ ಯಾಕೆ ಹೋಯಿತು.
ಬಿಜೆಪಿ ಸರ್ಕಾರ ಇದ್ದಾಗಲೂ ಸಹ ಕೋಟ ಶ್ರೀನಿವಾಸ ಪೂಜಾರಿ ಸುನಿಲ್ ಕುಮಾರ್ ಸೇರಿದಂತೆ ಪ್ರಮುಖರ ವಿರುದ್ಧ ತಾವು ಹೋರಾಟ ಮಾಡಿದ್ದು ಆರ್ಯ ಈಡಿಗ ಸಮಾಜಕ್ಕಾಗಿ ನಿರಂತರ ಹೋರಾಟ ಮಾಡಲಾಗುತ್ತದೆ.
-ಪೂಜ್ಯ ಪ್ರಣವಾನಂದ ಸ್ವಾಮೀಜಿ.