Breaking News
ಬಸ್ಸಾಪುರ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆಗೆ ಬೋಂಗಾ ಅಪಾರ ಪ್ರಮಾಣದ ನೀರು ಪೋಲು!

 

*ರೈತರ ಭತ್ತದ ಗದ್ದೆ ಮತ್ತು ರೆಸಾರ್ಟ್ ಗಳಿಗೆ ನುಗ್ಗಿದ ನೀರು,ಲಕ್ಷಾಂತರ ರೂ.ಗಳ ನಷ್ಟ.
*ರಾಯಚೂರು ಜಿಲ್ಲೆಯ ಕುಡಿಯುವ ನೀರಿಗಾಗಿ ಮಾ.11ರಿಂದ ಎಡದಂಡೆ ಕಾಲುವೆ ನೀರು ಹರಿಸಲಾಗುತ್ತಿತ್ತು.
*ಕಾಲುವೆಯಿಂದ ನೀರು ಸೋರಿಕೆ ಕುರಿತು ರೈತರಿಂದ ನೀರಾವರಿ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ, ಬೋಂಗಾ ಬಿದ್ದು ಕಾಲುವೆ ಒಡೆದು
ಅಪಾರ ಪ್ರಮಾಣದ ನೀರು ನೂರಾರು ಎಕರೆ ಭತ್ತದ ಗದ್ದೆ ಮತ್ತು ರೆಸಾರ್ಟ್ ಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಮಂಗಳವಾರ ಮಧ್ಯರಾತ್ರಿ ಸಮೀಪದ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಜರುಗಿದೆ.
ರಾಯಚೂರು ಜಿಲ್ಲೆಗೆ ಬೇಸಿಗೆ ನಿಮಿತ್ಯ ಕುಡಿಯುವ ನೀರನ್ನು ಎಡದಂಡೆಯ ಕಾಲುವೆಯ ಮೂಲಕ ಪೂರೈಕೆ ಮಾಡಲು ತುಂಗಭದ್ರಾ ಡ್ಯಾಮಿನಿಂದ ಮಾರ್ಚ್ 11 ರಿಂದ ನಿರಂತರವಾಗಿ ನೀರು ಹರಿಸಲಾಗುತ್ತಿತ್ತು .
ಮಂಗಳವಾರ ಕಾಲುವೆಯಲ್ಲಿ ಸುಮಾರು 2300 ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ.
ಬಸಾಪುರ ಹತ್ತಿರ ಎಡದಂಡೆ ಸಣ್ಣ ಸೇತುವೆ ಬಳಿ
ಕಳೆದ ವರ್ಷ ಬೋಂಗಾ ಬಿದ್ದಿರುವ ಕುರಿತು ರೈತರು ಜಲಸಂಪನ್ಮೂಲ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮ ಮಂಗಳವಾರ ಮಧ್ಯರಾತ್ರಿ ಬಸಾಪುರ ಹತ್ತಿರ ಎಡದಂಡೆ ಕಾಲುವೆ ಸೋರಿಕೆ ಕಂಡು ಬಂದಿದ್ದು ಸುಮಾರು 60 ಫೀಟಿನಷ್ಟು ಕಾಲುವೆ ಕೊಚ್ಚಿಕೊಂಡು ಹೋಗಿ ನೂರಾರು ಎಕರೆ ಭತ್ತದ ಗದ್ದೆ ಹಾಗೂ ಸುಮಾರು ಹತ್ತಕ್ಕೂ ಹೆಚ್ಚು ರೆಸಾರ್ಟ್ ಗಳಿಗೆ ಕಾಲುವೆ ನೀರು ನುಗ್ಗಿದ್ದರಿಂದ ಭತ್ತದ ಬೆಳೆ ನಷ್ಟವಾಗಿದೆ, ರೆಸಾರ್ಟ್ ಗಳು ಮತ್ತು ಅವುಗಳಲ್ಲಿದ್ದ ಫ್ರಿಡ್ಜ್ ,ಜನರೇಟರ್ , ಬೈಕ್ ಗಳು, ರೆಸಾರ್ಟ್ ಗಳ ಇತರ ಸಲಕರಣೆಗಳು ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಕಾಲುವೆಯಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಡ್ಯಾಮಿನ ಅಧಿಕಾರಿಗಳು ನೀರಿನ ಹರಿವನ್ನು ಕಡಿಮೆ ಮಾಡಿದ್ದರು ಸಾಣಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಮರಳಿ ಬಸಾಪುರ ಕಡೆ ಬರುತ್ತಿರುವುದರಿಂದ ನೀರಿನ ಪ್ರವಾಹ ತಗ್ಗುತ್ತಿಲ್ಲ ಇದರಿಂದ ಇನ್ನಷ್ಟು ಭತ್ತದ ಗದ್ದೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆ ಇದೆ.
ಸ್ಥಳಕ್ಕೆ ಜಲಸಂಪನ್ಮೂಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಕಟಾವಿಗೆ ಬಂದಿದ್ದ ಭತ್ತದ ಗದ್ದೆಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿದ್ದು ಸರಕಾರ ರೈತರಿಗೆ ಪ್ರತಿ ಎಕರೆಗೆ 50,000 ಪರಿಹಾರವನ್ನು ಕಲ್ಪಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಅಕಾಲಿಕ ಗಾಳಿ, ಮಳೆ ಧರೆಗೆ ಉರುಳಿದ ಗಿಡಮರಗಳು! ಮಲ್ಲಾಪುರದಲ್ಲಿ ಮಾವಿನ ಮರಕ್ಕೆ ಸಿಡಿಲು ಬಡಿದು ಬೆಂಕಿ!

 

 

*ವಿದ್ಯುತ್ ಸರಬರಾಜು ಸ್ಥಗಿತ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುರಿದ ಗಾಳಿ ಮಳೆಗೆ ಗಿಡಮರಗಳು ಧರೆಗೆ ಉರುಳಿವೆ.

ಗಂಗಾವತಿ ನಗರದಲ್ಲಿ ಬೀಸಿದ. ಬಿರುಗಾಳಿಯ

ಧೂಳು ಪಾದಚಾರಿಗಳು ಮತ್ತು ಬೈಕ್ ಸವಾರರು ನಿಲ್ಲುವಂತೆ ಮಾಡಿತು. ಬಿರುಗಾಳಿಗೆ ಮರಗಳ ಎಲೆಗಳು ರಸ್ತೆಗಳ ತುಂಬಾ ಹರಡಿವೆ.

ತಾಲೂಕಿನ ಮಲ್ಲಾಪುರದಲ್ಲಿ ಭಾರಿ ಪ್ರಮಾಣದ ಸಿಡಿಲು ಹೊಡೆದ ಪರಿಣಾಮ ಎರಡು ಮಾವಿನ ಮರಗಳಿಗೆ ಬೆಂಕಿ ಹತ್ತಿಕೊಂಡಿದೆ.

ಅಕಾಲಿಕ ಆನೇಕಲ್ಲು ಮಳೆ ಗಾಳಿಯ ಪರಿಣಾಮವಾಗಿ ಮಾವಿನ ಕಾಯಿಗಳು ನೆಲಕ್ಕೆ ಹುರುಳಿದ್ದು ರೈತರಿಗೆ ನಷ್ಟ ಸಂಭವಿದೆ. ಗಾಳಿಯಿಂದ ವಿದ್ಯುತ್ ಕಂಬಗಳು ಬಿದ್ದಿರುವ ಕಾರಣ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಲ್ಲಾಪುರದಲ್ಲಿ ಮಾವಿನ ಮರಗಳಿಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಕಳೆದ ಎರಡು ದಿನಗಳಿಂದ ಸಂಜೆ ಅಕಾಲಿಕ ಮಳೆ ಸುರಿಯುತ್ತಿದ್ದು ಗ್ರಾಮೀಣ ಭಾಗದಲ್ಲಿ ಆಣೆಕಲ್ಲು ಮಳೆಯಾಗಿದೆ. ಅಕ್ಕಾಲಿಕ ಮಳೆ ಮತ್ತು ಸಿಡಿಲು ಬಡಿದ ಪ್ರಕರಣದಲ್ಲಿ ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ.

ಸಿಲಿಂಡರ್ ಅಭಾವ ಹೊಟೇಲ್ ಗಳ ಮೇಲೆ ದಾಳಿ ೧೦ ಗೃಹಬಳಕೆ ಸಿಲಿಂಡರ್ ವಶಕ್ಕೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಇರಾನ್ ಯುದ್ಧ ಪರಿಣಾಮದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ನಗರ ಪ್ರದೇಶದಲ್ಲಿ ಹೋಟೆಲ್ ತಳ್ಳುಬಂಡಿ ಗಾಡಿ ಸೇರಿದಂತೆ ಇತರೆ ವಾಣಿಜ್ಯ ಸ್ಥಳಗಳಲ್ಲಿ ಗೃಹಬಳಕೆಯ ಸಿಲಿಂಡರ್ ಗಳನ್ನು ಬಳಕೆ ಮಾಡಿ ಉಪಹಾರ, ಊಟ ತಯಾರಿಸುತ್ತಿದ್ದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 10

ಕ್ಕೂ ಹೆಚ್ಚು ಗೃಹಬಳಕೆಯ ಬಳಕೆಯ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಹೆಚ್ಚಾಗಿ ಅಂಗಡಿ, ತಳ್ಳುಬಂಡಿ ಚಹಾದ ಹೋಟೆಲ್ ,ಕ್ಯಾಂಟೀನ್ ಗಳಲ್ಲಿ ಗ್ರಹಬಳಕೆಯ ಸಿಲಿಂಡರನ್ನು ಅಕ್ರಮವಾಗಿ ಬಳಸುತ್ತಿದ್ದು ಮನೆಗಳಲ್ಲಿ ಗ್ರಾಹಕರಿಗೆ ಸಿಲಿಂಡರ್ ಗಳ ಅಭಾವ ಉಂಟಾಗಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಗೃಹ ಬಳಕೆಯ ಸಿಲಿಂಡರ್ ಬಳಸಿ ವಾಣಿಜ್ಯ ವ್ಯವಹಾರ ನಡೆಸುವವರ ವಿರುದ್ಧ ದಾಳಿ ನಡೆಸಿ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದ್ದು ಆಹಾರ ಇಲಾಖೆ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.

ದಾಳಿಯ ಸಂದರ್ಭದಲ್ಲಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಯಾಶಸ್ ಯರೆಸೀಮೆ,ಶೇಖರಪ್ಪ, ನಾಗರತ್ನ,ಮುರ್ತುಜಾ ಸೇರಿ ಸಿಲಿಂಡರ್ ಪೂರೈಸುವ ಡೀಲರ್ ಗಳಿದ್ದರು.

ನಗರಸಭೆ:ಮನೆ ತೆರಿಗೆಯ ಆದಾಯಕ್ಕಿಂತ ವಾಣಿಜ್ಯ ತೆರಿಗೆಯ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಲು ಸಲಹೆ.

*ಸಿಟಿ ಮಾರ್ಕೆಟ್ ಸ್ಥಳಾಂತರ ಮಾಡಿ ಆದಾಯ ದ್ವಿಗುಣ ಮಾಡಿ

*ಬೀದಿ ಬದಿ ವ್ಯಾಪಾರಸ್ಥರ ತೆರಿಗೆ ಮೇಲೆ ನಿಗಾ ಇರಲಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ನಗರಸಭೆಯ ೨೦೨೬-ಮತ್ತು ೨೭ ನೇ ಸಾಲಿ ಆಯವ್ಯಯ(ಹಣಕಾಸು ಮಂಡನೆಯ) ೨೯ ಕೋಟಿಗು ಅಧಿಕ ಮಂಡಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಘೋಷಣೆ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಆರ್. ವಿರುಪಾಕ್ಷ ಮೂರ್ತಿ ಹೇಳಿದರು.

ಅವರು ನಗರಸಭೆಯ ಸಭಾಂಗಣದಲ್ಲಿ ೨೦೨೬-ಮತ್ತು ೨೭ ನೇ ಸಾಲಿ ಆಯವ್ಯಯ(ಹಣಕಾಸು ಮಂಡನೆಯ) ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಆದಾಯ ತೆರಿಗೆ ಶೇ. ೪ರಷ್ಟು ಹೆಚ್ಚುಗೋಳಿಸಲಾಗುವುದು.

ಯುಗಾದಿ ಹಬ್ಬದ ಮುಗಿದ ನಂತರ ಗುಂಡಮ್ಮ ಕ್ಯಾಂಪ ಸಿಟಿ ಮಾರ್ಕೆಟ್ ಗೆ ಸ್ಥಳಾಂತರ ಮಾಡಲಾಗುವುದು. ಎಲ್ಲರ ಸಲಹೆ ಸೂಚನೆಗಳನ್ನು ತೆಗದು ಕೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಅನುಮೋದನೆ ಪಡೆದುಕೊಂಡು ಬಜೆಟ್ ಘೋಷಣೆ ಮಾಡಲಾಗುವುದು ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಬಿ.ಸಿ.ಐಗೊಳ ಮಾತನಾಡಿ, ಮನೆ ತೆರಿಗೆಗಿಂತ-ವಾಣಿಜ್ಯ ತೆರಿಗೆ ಹೆಚ್ಚಿಗೆ ಗೋಳಿಸಿಕೊಳ್ಳಬೇಕು.

ವಾಣಿಜ್ಯ ತೆರಿಗೆಮತ್ತು ಜಾಹಿರಾತು ತೆರಿಗೆಮೂಲಕ ನಗರಸಭೆ ಆದಾಯ ಸಂಪನ್ಮೂಲ ಕ್ರೋಡಿಕರಿಸಿಕೋಳ್ಳಿ. ನಗರದಲ್ಲಿರುವ ಉದ್ಯಾನವನಗಳ ಸುಂದರೀಕರಣಗೊಳಿಸಿ ಸಾರ್ವಜನಿಕರಿಗೆ ಹೋರೆಯಾಗಲಾರದಂತೆ ಶುಲ್ಕ ನಿಗದುಪಡಿಸಿಕೊಳ್ಳಿ ಎಂದರು.

ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಮೊದಲು ಗುಂಡಮ್ಮ ಕ್ಯಾಂಪಗೆ ಮಾರುಕಟ್ಟೆ ಸ್ಥಳಾಂತರಿಸಿ ನಗರಸಭೆಯ ಆದಾಯ ದ್ವಿಗುಣಗೋಳಿಸಿ. ಅನಧಿಕೃತ ಲೇಔಟಗಳಲ್ಲಿ ಇರುವ ಮನೆಗಳನ್ನು ಸಕ್ರಮ ಗೊಳಿಸಿ ನಗರಸಭೆ ಆದಾಯ ಭರಿಸಿಕೊಂಡು ಮೂಲಭುತ ಸೌರ್ಕಯ ಒದಗಿಸಿ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷ ಮೌಲಾಸಾಬ,ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ ಚೌಡ್ಕಿ,ನಗರಸಭೆ ಸದಸ್ಯ ಮಸ್ತಕಅಲಿ ಮಾತನಾಡಿ ನಗರಸಭೆ ಆದಾಯವನ್ನು ವಾಣಿಜ್ಯ ಮೂಲಕ ಇಮ್ಮಡಿಗೊಳಿಸಿಕೊಳ್ಳಿ. ಆಸ್ತಿ ತೆರಿಗೆ ಹೆಚ್ಚಿಸಿ ತೊಂದರೆ ಮಾಡಬೇಡಿ ಎಂದರು.

ಸಭೆಯಲ್ಲಿ ವೀರಭದ್ರಪ್ಪ ಎಸ್, ಖಾದರ ಪಾಶಾ, ಪತ್ರಕರ್ತರಾದ ವೀರಾಪೂರ ಕೃಷ್ಣ,ಎಂ.ಜೆ. ಶ್ರೀನಿವಾಸ,ಪ್ರಸನ್ನದೇಸಾಯಿ ಅನಿಸಿಕೆ ವ್ಯಕ್ತಪಡಿಸಿದರು.

ದಿ ಕೇರಳ ಸ್ಟೋರಿ-2 ವಿದ್ಯಾರ್ಥಿನಿಯರು,ಮಹಿಳೆಯರಿಗೆ ಉಚಿತ ಪ್ರದರ್ಶನ:ದೀಪಕ್ ಬಾಂಠಿಯಾ.

*ಮಾ.17ರಂದು ಗಂಗಾವತಿ ಚಂದ್ರಹಾಸ ಟಾಕೀಸ್ ನಲ್ಲಿ ಪ್ರದರ್ಶನ ವ್ಯವಸ್ಥೆ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಮತಾಂತರ ಮತ್ತು ಲವ್ ಜಿಹಾದ್ ನಂತಹ ಕೃತ್ಯಕ್ಕೆ ಒಳಗಾಗುವ ವಿದ್ಯಾರ್ಥಿನಿಯರ ಕಥೆಯನ್ನು ಒಳಗೊಂಡ “ದಿ ಕೇರಳ ಸ್ಟೋರಿ ಭಾಗ 2” ಚಲನಚಿತ್ರವನ್ನು ಗಂಗಾವತಿ ನಗರದ ಚಂದ್ರಹಾಸ ಚಿತ್ರಮಂದಿರದಲ್ಲಿ ಮಾರ್ಚ್ 17ರಂದು ಸಂಜೆ 5.30 ಗಂಟೆಗೆ ಉಚಿತವಾಗಿ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದ್ದು ವಿದ್ಯಾರ್ಥಿನಿಯರು ಮತ್ತು ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ತಪ್ಪದೇ ವೀಕ್ಷಣೆ ಮಾಡುವಂತೆ ಬಿಜೆಪಿ ಯುವ ಘಟಕದ ಮುಖಂಡ ದೀಪಕ್ ಬಾಂಠಿಯಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ದಿ ಕೇರಳ ಸ್ಟೋರಿ ಭಾಗ-01 ದೇಶಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡು ಸಾಮಾಜಿಕ ಜಾಗೃತಿ ಮೂಡಿಸುವ ಜತೆಗೆ ಚರ್ಚೆ ಹುಟ್ಟು ಹಾಕಿತ್ತು. ಮತಾಂತರ ಮಾಡುವ ಉದ್ದೇಶದಿಂದ ಇಂದು ಮಹಿಳೆಯರು ಮತ್ತು ವಿದ್ಯಾರ್ಥಿನಿಯರನ್ನು ಕೆಲ ಮತಾಂದರು ತಲೆ ಕೆಡಿಸಿ ಧರ್ಮಂತರ ಮಾಡಲು ಪ್ರೀತಿಯ ನಾಟಕವಾಡುತ್ತಾರೆ ಈ ಕಥಾ ಹಂದರವನ್ನು ಹೊಂದಿರುವ ದಿ ಕೇರಳ ಸ್ಟೋರಿ ಭಾಗ 2 ಸಿನಿಮಾವನ್ನು ತಪ್ಪದೇ ಎಲ್ಲರೂ ನೋಡುವಂತೆ ದೀಪಕ್ ಮನವಿ ಮಾಡಿದ್ದಾರೆ

ಎಎಸ್ ಐ ಸ್ಮಾರಕಗಳಿಲ್ಲದಿದ್ದರೂ ಆನೆಗೊಂದಿ ಕಿಷ್ಕಿಂಧಾ ಭಾಗ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅವೈಜ್ಞಾನಿಕ, ಪ್ರಾಧಿಕಾರದಿಂದ ಕಿಷ್ಕಿಂಧಾ ಭಾಗ ಕೈ ಬಿಡುವಂತೆ ಆಗ್ರಹ!

*ಮಾ.18ರಂದು ಕಡೆಬಾಗಿಲು ಶ್ರೀರಂಗದೇವರಾಯಲು ಸರ್ಕಲ್‌ ಬಳಿ ಸ್ಥಳೀಯರಿಂದ ಪ್ರತಿಭಟನೆ.

*ಸ್ಟೇಕ್ ಹೋಲ್ಡರ್ ಅಭಿಪ್ರಾಯವಿಲ್ಲದೆ 2021 ರಲ್ಲಿ ಮಾಸ್ಟರ್ ಪ್ಲಾನ್ ರಚನೆ ಆಕ್ರೋಶ.

*ಹಲ್ಲು ಕಿತ್ತ ಹಾವಿನಂತಾಗಿರುವ ಆನೆಗೊಂದಿ, ಸಾಣಾಪೂರ ಮತ್ತು ಮಲ್ಲಾಪೂರ ಗ್ರಾ.ಪಂ.ಆಡಳಿತ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆನೆಗುಂದಿ ಭಾಗದಲ್ಲಿ ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಎಎಸ್ಐ ಸ್ಮಾರಕಗಳು ಇರದಿದ್ದರೂ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅಭಿವೃದ್ಧಿಗೆ ಮಾರಕಾಗುವಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಕೂಡಲೇ ಆನೆಗೊಂದಿ ಕಿಸ್ಕಿಂದ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ವೆಂಕಟೇಶ್ ಬಾಬು ಹಾಗೂ ಗ್ರಾಮ ಮಾಜಿ ಸದಸ್ಯ ಮಲ್ಲಿಕಾರ್ಜುನ ಹಿರೇಮಠ ಒತ್ತಾಯಿಸಿದರು.

ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 35 ವರ್ಷಗಳಿಂದ ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಜೊತೆಗೆ ನೂರಾರು ವರ್ಷಗಳಿಂದ ವಾಸವಾಗಿರುವ ಮನೆಗಳನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಡ್ಡಗಾಲು ಹಾಕುತ್ತಿದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರು ಪರವಾನಿಗೆ ಪಡೆಯಲು ಹರಸಹಾಸಪಟ್ಟರೂ ಹಂಪಿ ಅಭಿವೃದ್ಧಿ ಪದಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಸ್ಥಳೀಯ ಯುವಕರೆಲ್ಕಾ ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗುವ ಸ್ಥಿತಿ ಬಂದಿದೆ. ಗ್ರಾಮ ಸ್ವರಾಜ್ಯ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿಯವರ ಕನಸನ್ನು ಆನೆಗೊಂದಿ, ಸಾಣಾಪುರ, ಮಲ್ಲಾಪುರ ಮತ್ತು ಸಂಗಪುರ ಗ್ರಾಮಗಳಲ್ಲಿ ಅನುಷ್ಠಾನ ಮಾಡಲು ಆಗುತ್ತಿಲ್ಲ, ಪ್ರತಿಯೊಂದು ವಿಷಯದಲ್ಲಿಯೂ ಅಭಿವೃದ್ಧಿ ಪ್ರಾಧಿಕಾರ ಮೂಗು ತೂರಿಸಿ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ.

ಆದ್ದರಿಂದ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೂಡಲೇ ಕೈಬಿಡಬೇಕು. ಇದಕ್ಕಾಗಿ ಸ್ಥಳೀಯ ಎಲ್ಲಾ ಜನರನ್ನು ಸೇರಿಸಿ ಮಾ. 18ರಂದು ಕಡಬಾಗಿಲು ಶ್ರೀರಂಗದೇವರಾಯಲು ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ.

ವಿಶ್ವ ಪರಂಪರ ಪಟ್ಟಿಗೆ ಸೇರುವ ಪ್ರದೇಶದಲ್ಲಿ ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯವರು ಗುರುತಿಸುವ ಎಎಸ್ಐ ಸ್ಮಾರಕಗಳು ಇರಬೇಕು. ಆನೆಗೊಂದಿ ಭಾಗದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ಹಕ್ಕಿನಲ್ಲಿ ಕೊಟ್ಟಿರುವ ಮಾಹಿತಿಯಂತೆ ಆನೆಗೊಂದಿ ಭಾಗದಲ್ಲಿ ಯಾವುದೇ ಎಎಸ್ಐ ಸ್ಮಾರಕಗಳು ಇಲ್ಲ. ಇಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ಗುರುತಿಸಲ್ಪಟ್ಟ ಎಲ್ಲಾ ದೇವಸ್ಥಾನಗಳು, ಸ್ಮಾರಕಗಳನ್ನು ನೂರಾರು ವರ್ಷಗಳಿಂದ ಸ್ಥಳೀಯರು ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಸ್ಥಳೀಯರಿಗೆ ಒದಗಿಸಿ ಕೊಟ್ಟಿದ್ದಾರೆ. ಇದರಿಂದ ಉದ್ಯೋಗ ದದೊರೆಯುತ್ತವೆ. ಜೊತೆಗೆ ದೇಶ ವಿದೇಶದಲ್ಲಿ ಆನೆಗೊಂದಿ ಕಿಷ್ಕಿಂಧಾ ಭಾಗ ಪ್ರಸಿದ್ಧವಾಗಿದೆ. ದೇಶದ ಎಲ್ಲಾ ಪ್ರವಾಸಿ ತಾಣಗಳಲ್ಲಿ ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಲಾಗಿದ್ದರು. ಆನೆಗೊಂದಿ ಭಾಗದಲ್ಲಿರುವ ರಸ್ತೆಗಳನ್ನು ಅಗಲೀಕರಣ ಮಾಡಲು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಡ್ಡಗಾಲಿನಿಂದಾಗಿ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಹಳೆಮಳೆಗಳನ್ನು ಕೆಡವಿ ಹೊಸ ಮನೆಗಳ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಜನಸಂಖ್ಯೆ ಹೆಚ್ಚುತ್ತಿದೆ ಗ್ರಾಮಗಳು ವಿಸ್ತರಣೆಯಾಗಲು ಹಂಪಿ ಪ್ರಾಧಿಕಾರ ಬಿಡುತ್ತಿಲ್ಲ.

ನಿರೀಕ್ಷೆ ಸುಳ್ಳಾಗಿದೆ: ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಂದರ್ಭದಲ್ಲಿ ಆನೆಗೊಂದಿ ಭಾಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಪ್ರತಿ ವರ್ಷ ಸ್ಟೇಕ್ ಹೋಲ್ಡರ್ಸ್ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಜೊತೆಗೆ ಪ್ರತಿ 10 ವರ್ಷಕ್ಕೊಮ್ಮೆ ಮಾಸ್ಟರ್ ಪ್ಲಾನ್, ಮಹಾಯೋಜನೆ ಪ್ರಕಟಣೆ ಮಾಡುವ ಮಾತನಾಡಿದ್ದರು, ಆದರೆ 35 ವರ್ಷ ಕಳೆದರೂ ಆನೆಗುಂದಿ ಭಾಗ ಮೊದಲಿದ್ದಂತೆ ಇದೆ ಯಾವುದೇ ಕಾರ್ಯಕ್ರಮಗಳು ಅಭಿವೃದ್ಧಿ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ನಿರ್ಣಯವನ್ನು ಮಾಡಿ ಆನೆಗೊಂದಿ ಭಾಗದಲ್ಲಿ ಯಾವುದೇ ಎಎಸ್ಐ ಸ್ಮಾರಕ ಇಲ್ಲ,ಆದ್ದರಿಂದ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಕಾರದಿಂದ ಹೊರಗಿಟ್ಟು ಹಂಪಿ ಪ್ರದೇಶದಲ್ಲಿ ಮಾತ್ರ ಪ್ರಾಧಿಕಾರ ತನ್ನ ಕೆಲಸ ಮಾಡಲಿ, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದಂತ ಹೋರಾಟ ನಡೆಸಲು ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿ.ಎಚ್.ಪ್ರಸಾದ,ಪ್ರಶಾಂತ,ರಾಗ, ಹೊನ್ನಪ್ಪ ನಾಯಕ,ಶ್ರೀನಾಥ,ನೀಲಪ್ಪ,ಹರ್ಷಾ,ನ್ಯಾಯವಾದಿ ಸಾಯಿಕುಮಾರ,ವಿರೇಶ ಹನುಮನಹಳ್ಳಿ,ಮಂಜುನಾಥ ಗೌಡ,ಬಾಳೇಶ ಹನುಮನಹಳ್ಳಿ ಸೇರಿದಂತೆ ಅನೇಕರಿದ್ದರು.

ಸ್ಥಳೀಯ ನ್ಯಾಯಾಲಯಕ್ಕೆ ನ್ಯಾಯಮೂರ್ತಿ ಸಿಎಂ ಪೂಣಚ್ಚ ಭೇಟಿ.

*ಎರಡನೇ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪನೆ, ವಕೀಲರ ಭವನ ನಿರ್ಮಾಣಕ್ಕೆ ಮನವಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ನ್ಯಾಯಾಲಯಕ್ಕೆ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಸಿಎಂ ಪೂಣಚ್ಚ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಸಿ, ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕುಮಾರ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಶ್ರೇಣಿ ನ್ಯಾಯಾಧೀಶ ಜಿಬಿ ಹಳ್ಳಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ್ ಪಾಟೀಲ್, ಸಿವಿಲ್ ನ್ಯಾಯಾಧೀಶೆ ಮೇಘ ಸೋಮಣ್ಣನವರ್,

ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ ಕಾರ್ಯದರ್ಶಿ ಹೆಚ್ ಎಂ ಮಂಜುನಾಥ್ ಉಪಾಧ್ಯಕ್ಷ ಪ್ರಕಾಶ್ ಕುಸಬಿ,

ಲೋಕೋಪಯೋಗಿ ಇಲಾಖೆಯ ಇಇ

ಹೇಮಂತ್ ರಾಜ್, ಎಇಇ ವಿಶ್ವನಾಥ, ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗಂಗಾವತಿ ವಕೀಲರ ಸಂಘವತಿಯಿಂದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡಲು, ಎರಡನೇ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪಿಸಲು ಮತ್ತು ವಕೀಲರ ಭವನ ನಿರ್ಮಾಣ ಮಾಡಲು ಮನವಿ ಮಾಡಲಾಯಿತು.

ಶ್ರೀಮಲ್ಲಿಕಾರ್ಜುನ ಮಠದಲ್ಲಿ ಮೂಲ ಸೋಮನಾಥ ಜ್ಯೋತಿರ್ಲಿಂಗ ದರ್ಶನ.

*ಆರ್ಟ್ ಆಫ್ ಲಿವ್ಹಿಂಗ್ ವ್ಯವಸ್ಥೆ

*ಜ್ಯೋತಿರ್ಲಿಂಗ ದರ್ಶನ ಪಡೆದ ಸಾವಿರಾರು ಭಕ್ತರು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದಲ್ಲಿ ಮಲ್ಲಿಕಾರ್ಜುನ ಮಠದಲ್ಲಿ ಮೂಲ ಸೋಮನಾಥ ಜ್ಯೋತಿರ್ಲಿಂಗ ದರ್ಶನ ರವಿವಾರ ಸಂಜೆ ಕಾರ್ಯಕ್ರಮ ಶ್ರದ್ಧೆ, ಭಕ್ತಿಯಿಂದ ಜರುಗಿತು.

ಒಂದು ಸಾವಿರ ವರ್ಷಗಳ ಹಿಂದೆ ಮೊಗಲರ ಆಕ್ರಮಣದಿಂದಾಗಿ ಲುಪ್ತವಾಗಿದ್ದ ಸೋಮನಾಥದ ಮೂಲ ಜ್ಯೋತಿರ್ಲಿಂಗವನ್ನು ಗುರುದೇವ ಶ್ರೀ ಶ್ರೀ ರವಿಶಂಕರರು ಪುನಃ ಪ್ರತಿಷ್ಠಾಪಿಸಿದರು. ಸನಾತನ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವನ್ನು ಸತ್ಯಯುಗದಲ್ಲಿ ಸೋಮ: ಅಂದರೆ ಚಂದ್ರನು ಪ್ರತಿಷ್ಠಾಪಿಸಿದನು ಮತ್ತು ಇಲ್ಲಿ ಶ್ರೀ ಕೃಷ್ಣನು ತಪಸ್ಸು ಮಾಡಿದ್ದನು ಎಂಬ ಪ್ರತೀತಿ ಇದೆ. ಈ ಮೂಲ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿತ್ತು ಎಂದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಶಿಲೆಯ ಕೇಂದ್ರ ಭಾಗವು ಅತ್ಯಂತ ಪ್ರಬಲವಾದ ಕಾಂತೀಯ ಶಕ್ತಿಯಿಂದ ಕೂಡಿದೆ. ಕ್ರಿ.ಶ1026ರಲ್ಲಿ ಮೊಹಮ್ಮದ್ ಘಜನಿಯು ದೇವಾಲಯದ ಮೇಲೆ ಆಕ್ರಮಣ ಮಾಡಿ ಈ ಜ್ಯೋತಿರ್ಲಿಂಗವನ್ನು ಆದ್ರಗೊಳಿಸಿದನು. ಶಾಶ್ವತವಾಗಿ ನಷ್ಟವಾಗಿದೆ ಎಂದುಕೊಂಡಂತಹ ಈ ಶಿವಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಪುರೋಹಿತರು ರಹಸ್ಯವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅವರು ಈ ಚೂರುಗಳಿಗೆ ಶಿವಲಿಂಗದ ಆಕಾರವನ್ನು ನೀಡಿದರು ಮತ್ತು ಸುಮಾರು ಸಾವಿರ ವರ್ಷಗಳ ಕಾಲ ತಲೆ-ತಲಾಂತರದಿಂದ ಇದನ್ನು ಸಂರಕ್ಷಿಸಿಕೊಂಡು ಬಂದರು. ಈ ಶಿವಲಿಂಗಗಳನ್ನು ಪೂಜಿಸುವಾಗ ಅಗ್ನಿಹೋತ್ರಿಗಳು ಒಂದು ಅಪರೂಪದ ವಿದ್ಯಮಾನವನ್ನು ಗಮನಿಸಿದರು. ಈ ಶಿಲೆಗಳು ಅಯಸ್ಕಾಂತೀಯ ಗುಣವನ್ನು ಹೊಂದಿದ್ದವು. ಸಾಮಾನ್ಯವಾಗಿ ವಸ್ತುವಿನ ಧ್ರುವಗಳಲ್ಲಿ ಕಾಂತೀಯ ಶಕ್ತಿಯು ಕಂಡುಬರುತ್ತದೆ ಆದರೆ, ಅಪರೂಪವಾಗಿ ಈ ಶಿಲೆಯ ಕೇಂದ್ರದಲ್ಲಿ ಬಲವಾದ ಕಾಂತೀಯತೆ ಇರುವುದು ವೈಜ್ಞಾನಿಕ ಪರೀಕ್ಷೆಯಲ್ಲಿ ಖಚಿತವಾಯಿತು. ಭೂ ವಿಜ್ಞಾನಿಗಳು ಇಂತಹ ವಸ್ತುವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

1924ರಲ್ಲಿ ಕಂಚಿ ಶಂಕರಾಚಾರ್ಯರು ಈ ಅಗ್ನಿಹೋತ್ರಿಗಳಿಗೆ ಈ ಶಿವಲಿಂಗಗಳನ್ನು ನೂರು ವರ್ಷಗಳ ಕಾಲ ಗುಪ್ತವಾಗಿ ಸಂರಕ್ಷಿಸುವಂತೆ ತಿಳಿಸಿದರು ಮತ್ತು ಅದನ್ನು ಗುರುದೇವರಿಗೆ ನೀಡುವಂತೆ ಸೂಚಿಸಿದ್ದರು. ಜನವರಿ 2025 ರಲ್ಲಿ ಅಗ್ನಿಹೋತ್ರಿಗಳು ಈ ಶಿವಲಿಂಗಗಳನ್ನು ಗುರುದೇವರಿಗೆ ಹಸ್ತಾಂತರಿಸಿದರು. ಮಹಾಶಿವರಾತ್ರಿಯಂದು ಜ್ಯೋತಿರ್ಲಿಂಗದ ಈ ಭಾಗಗಳನ್ನು ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಒಂದು ಸಾವಿರ ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಮತ್ತು ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಆರ್ಟ್ ಆಫ್ ಲಿವ್ಹಿಂಗ್ ನ ರಘು ಪವರ್, ಸತ್ಯಂ ,ಮಹೇಶ,ಮಂಜುನಾಥ, ಬಸವನಗೌಡ ಪಾಟೀಲ್, ಅಮರೇಗೌಡ,ದರೋಜಿ‌ ಸತ್ಯನಾರಾಯಣ, ಗುರುರಾಜ ಕಾರಂತ,ಸದಾನಂದ ಶೆಟ್,ರೂಪರಾಣಿ ರಾಯಚೂರು, ಸುನೀತಾ, ರಜನೀ ಕೊಟ್ಟಾಲ್,ರವೀಂದ್ರ ಹೂಲಗೇರಿ, ನ್ಯಾಯವಾದಿ ಸಿದ್ದನಗೌಡ ಪಾಟೀಲ್, ಚಂದ್ರಗೌಡ ಪಾಟೀಲ್, ಚನ್ನಬಸಯ್ಯಸ್ವಾಮಿ,ರುದ್ರಯ್ಯ ಸ್ವಾಮೀ ಅಯೋಧ್ಯೆ,ಸೂಗೂರಪ್ಪ ವಲ್ಕಂದಿನ್ನಿ ಸೇರಿ ಅನೇಕರಿದ್ದರು.

ಗಂಗಾವತಿ: ರಾಷ್ಟ್ರೀಯ ಲೋಕ ಅದಾಲತ್- ನಾಲ್ಕು ನ್ಯಾಯಾಲಯಗಳಲ್ಲಿ 617 ಕೇಸ್ ಗಳ ಇತ್ಯರ್ಥ!

*8.48 ಕೋಟಿ ರೂ. ಸರಕಾರಕ್ಕೆ ಜಮೆ,ವೈಮನಸ್ಸು ಬಿಟ್ಟು ಒಂದಾದ ಮೂರು ಜೋಡಿ ದಂಪತಿಗಳು.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:.ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ನಾಲ್ಕು ನ್ಯಾಯಾಲಯಗಳ ಅದಾಲತ್ ನಲ್ಲಿ 617 ಪ್ರಕರಣ ಇತ್ಯರ್ಥಹೊಂಡಿದ್ದು, 8.48 ರೂ. ಕೋಟಿ ಸರಕಾರಕ್ಕೆ ಜಮೆಯಾಗಿದೆ. ಮೂವರು ದಂಪತಿಗಳು ವೈಷಮ್ಯ ಬಿಟ್ಟು ಒಂದಾಗಿರುವುದು ಇಂದಿನ ಲೋಕ ಅದಾಲತ್ ನ ವಿಶೇಷವಾಗಿದೆ.
ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯಿಂದ ಮಾಹಿತಿ ನೀಡಲಾಗಿದೆ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಅಧ್ಯಕ್ಷರು ಆಗಿರುವ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಸಿವಿಲ್ ನ್ಯಾಯಾಧೀಶ ಗುಡದಪ್ಪ ಬಸವಣೆಪ್ಪ ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣವರ ಉಪಸ್ಥಿತಿಯಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನಾಲ್ಕು ತಾಲೂಕ ನ್ಯಾಯಾಲಯದಲ್ಲಿ ಒಟ್ಟು 10884 ಬಾಕಿ ಪ್ರಕರಣಗಳಿದ್ದು ಸದರಿ ರಾಷ್ಟ್ರೀಯ ಲೋಕ ಅದಾಲತನಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ ಸಾಲ ವಸೂಲಿ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ, ಜನನ ಮರಣ, ಮತ್ತು ಕ್ರಿಮಿನಲ್ ಕೇಸಸ್ ಗಳನ್ನು ಸೇರಿ 1438 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿತ್ತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 51 ಮೋಟಾರು ವಾಹನ ಇತರೆ ಪ್ರಕರಣಗಳು 60 ಒಟ್ಟು 111 ಪ್ರಕರಣಗಳು ಇತ್ಯರ್ಥ. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 20 ಮೋಟಾರು ವಾಹನ 02 ವೈವಾಹಿಕ ಪ್ರಕರಣ 03 ಬ್ಯಾಂಕ ಪ್ರಕರಣ 10 ಚೆಕ್ ಬೌನ್ಸ್ 04 ಇನ್ನಿತರ ಪ್ರಕರಣಗಳು ಸೇತಿ ಒಟ್ಟು 39 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 21 ಚೆಕ್ ಬೌನ್ಸ್ 01 ಕೌಟಂಬಿಕ ದೌರ್ಜನ್ಯ 182 ಜನನ ಮರಣ 86 ಕ್ರೀಮಿನಲ್ ಸೇರಿ ಇನ್ನಿತರ 16 ಪ್ರಕರಣಗಳು ಒಟ್ಟು 306 ಪ್ರಕರಣಗಳು ಇತ್ಯರ್ಥಪಡಿಸಿದೆ. ಮತಗತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 04 ಚೆಕ್ ಬೌನ್ಸ , ಕೌಟಂಬಿಕ ದೌರ್ಜನ್ಯ 101 ಜನನ ಮರಣ 33 ಕ್ರೀಮಿನಲ್ ಕೇಸಸ್ ಇನ್ನಿತರ 23 ಪ್ರಕರಣಗಳು ಸೇರಿ ಒಟ್ಟು 161 ಪ್ರಕರಣಗಳು ಇತ್ಯರ್ಥಪಡಿಸಿದ್ದು, ನಾಲ್ಕು ನ್ಯಾಯಾಲಯಗಳು ಸೇರಿ ಲೋಕದ ಅದಾಲತನಲ್ಲಿ ಒಟ್ಟು 617 ಪ್ರಕರಣಗಳು ಇತ್ಯರ್ಥಗೊಂಡಿರುತ್ತದಲವೆ. ಹಾಗೂ ನಾಲ್ಕು ನ್ಯಾಯಾಲಯದಲ್ಲಿ ಸೇರಿ 8,48,25,621.00 ರೂ. ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ. ಸದರಿ ಲೋಕ ಅದಾಲತನಲ್ಲಿ ವಕೀಲರು ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸಂಘದ ಸದಸ್ಯರು ಮತ್ತು ವಕೀಲರಗಳು ಲೋಕ ಅದಾಲತನಲ್ಲಿ ಭಾಗವಹಿಸಿ ಲೋಕ ಯಶಸ್ವಿಗೊಳಿಸಿದ್ದಾರೆ.

**
ಅಪಘಾತ ವಿಮೆ‌ ರೂ.90.00 ಲಕ್ಷ ಪರಿಹಾರ ವಿತರಣೆ
ವ್ಯಾಜ್ಯ ಪೂರ್ವ 1739 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿದೆ. ಸದರಿ ಲೋಕದ ಅದಾಲತನಲ್ಲಿ ಒಟ್ಟು 30 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. 25,97,642.00 ಸರ್ಕಾರಕ್ಕೆ ಜಮಾ ಮಾಡಲಾಗಿದೆ. MVC 557/25 ರ ಪ್ರಕರಣದಲ್ಲಿ ಬಿ. ಅಂಜಿನಪ್ಪ ಮತ್ತು ಶ ಸಿದ್ರಾಮಸ್ವಾಮಿ ಆರ್ ಹಿರೇಮಠ ವಕೀಲರು ಇವರು HDFC ERGO Insurance ಕಂಪನಿಯ ಪರವಾಗಿ ಈ ಪ್ರಕರಣದ ಅರ್ಜಿದಾರರು ವಾಯು ವಿವಾಹರಕ್ಕೆ ಹೋಗುವಾಗ ಹಿಂದುಗಡೆಯಿಂದ ಮೋಟರ್ ಸೈಕಲ್ ವಾಹನ ಬಂದು ಅಪಘಾತ ಮಾಡಿದು ಅರ್ಜಿದಾರರು ಗುತ್ತಿಗೆದಾರರಾಗಿದ್ದು ಸದರಿ ಅರ್ಜಿದಾರ ಹುಲುಗಪ್ಪ ತಂದೆ ಸುಬಾಸ್ ಕಂದಕುರರು ಮೃತ ಪಟ್ಟಿರುತ್ತಾರೆ. ಮೃತರ ವಾರಸ್ತುದಾರರಿಗೆ ರಾಷ್ಟ್ರೀಯ ಲೋಕ ಅದಾಲತನಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮೂಲಕ ರೂ. 90,00,ಲಕ್ಷ ರೂ.ಗಳ ಪರಿಹಾರ ನೀಡಲಾಯಿತು

ಗಂಗಾವತಿ: ಮೃತ್ಯು ಇಂಜೆಕ್ಷನ್ ಹಾವಳಿ!  ಮಾತ್ರೆ ಪುಡಿಯ ಇಂಜೆಕ್ಷನ್ ಚುಚ್ಚಿಕೊಳ್ತಿದ್ದಾರೆ ಯುವಕರು!

*ನಗರ ಠಾಣೆ ದೂರು ದಾಖಲು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದಲ್ಲಿ ಈಗ ಹೊಸದೊಂದು ಆತಂಕ ಶುರುವಾಗಿದೆ!

ಶಾಮಿಯಾನ ಕೆಲಸ ಮಾಡೋ ಯುವಕರು, ಸ್ಲಂ ನಿವಾಸಿಗಳನ್ನೇ ಟಾರ್ಗೆಟ್ ಮಾಡಿರೋ ‘ಟ್ಯಾಬ್ಲೆಟ್’ ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ! ಮೈಕೈ ನೋವಿಗೆ ಬಳಸೋ ಪೇನ್ ಕಿಲ್ಲರ್ ಮಾತ್ರೆ ಈಗ ಕಿಕ್ ಕೊಡೋ ಡ್ರಗ್ಸ್ ಆಗಿ ಬದಲಾಗಿದೆ!

ಯುವಕರ ಬದುಕಲ್ಲಿ ಇಂಜೆಕ್ಷನ್ ವಿಷ!

ಶಾಮಿಯಾನ ಕೆಲಸ ಮಾಡುವಾಗ ಬರೋ ಮೈಕೈ ನೋವನ್ನ ಕಡಿಮೆ ಮಾಡಿಕೊಳ್ಳೋಕೆ ಅಂತ ಯುವಕರು ನುಂಗೋಕೆ ಶುರು ಮಾಡಿದ ‘ಟ್ಯಾಪೆಂಟಡಾಲ್’ ಅನ್ನೋ ಮಾತ್ರೆ ಈಗ ಅವರ ಪ್ರಾಣಕ್ಕೆ ಕುತ್ತಾಗಿದೆ. ಮೊದಲು ಮಾತ್ರೆ ನುಂಗುತ್ತಿದ್ದವರು ಈಗ ಹೆಚ್ಚಿನ ಅಮಲಿಗಾಗಿ ಆ ಮಾತ್ರೆಯನ್ನ ಪುಡಿ ಮಾಡಿ, ನೀರಿನಲ್ಲಿ ಕಲಸಿ, ನೇರವಾಗಿ ನರಗಳಿಗೆ ಇಂಜೆಕ್ಟ್ ಮಾಡಿಕೊಳ್ತಿದ್ದಾರೆ! ಇದರಿಂದ ಕೈಕಾಲುಗಳು ಊದಿಕೊಳ್ಳುತ್ತಿವೆ, ಮೈಮೇಲೆ ಗಾಯಗಳಾಗ್ತಿವೆ!

ಫ್ಯಾನ್ಸಿ ಸ್ಟೋರ್‌ನಲ್ಲಿ ವಿಷದ ವ್ಯಾಪಾರ!

ನಗರದ ದುರ್ಗಾದೇವಿ ಗುಡಿ ಹತ್ತಿರ ಇರೋ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ ಈ ಕಿರಾತಕ ಕೆಲಸಕ್ಕೆ ಅಡ್ಡಾವಾಗಿದೆ! ಅಂಗಡಿ ಮಾಲೀಕ ಕಿಶನ್ ಕುಮಾರ್ ಕೇವಲ 300 ರೂಪಾಯಿಗೆ ಎರಡೆರಡು ಮಾತ್ರೆಗಳನ್ನ ವೈದ್ಯರ ಚೀಟಿ ಇಲ್ಲದೆ ಮಾರುತ್ತಿದ್ದಾನೆ. ಈ ಮಾತ್ರೆ ಸಿಗಲಿಲ್ಲ ಅಂದ್ರೆ ಯುವಕರು ಹುಚ್ಚರಂತಾಗ್ತಿದ್ದಾರೆ, ಹಣಕ್ಕಾಗಿ ಹೆತ್ತವರ ಜೇಬಿಗೇ ಕನ್ನ ಹಾಕ್ತಿದ್ದಾರೆ!

ದೂರು ದಾಖಲು:

ಈ ಜಾಲದ ಬಗ್ಗೆ ಸಂತ್ರಸ್ತ ಯುವಕ ಪೊಲೀಸ್ ಠಾಣೆ

ದೂರು ನೀಡಿದ್ದು ನಗರ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳೆ ಅವರು . ಬಿ.ಎನ್.ಎಸ್. ಸೆಕ್ಷನ್ 123 ರಡಿ ಕೇಸ್ ದಾಖಲಾಗಿದ್ದು, ಫ್ಯಾನ್ಸಿ ಸ್ಟೋರ್ ಮಾಲೀಕ ಕಿಶನ್ ಕುಮಾರ್‌ನನ್ನ ತನಿಖೆಗೆ ಒಳಪಡಿಸಲಾಗಿದ್ದು ಇನ್ನಷ್ಟು ದುಷ್ಕರ್ಮಿಗಳ ಬಂಧನ ಸಾಧ್ಯತೆ ಇದೆ.