Breaking News
ನಿರ್ಬಂಧ ಮಧ್ಯದಲ್ಲಿ ಕಿಷ್ಕಿಂಧಾ ಅಂಜನಾದ್ರಿ ದರ್ಶನಕ್ಕೆ ಬಂದ ಪುನೀತ್ ಕೆರೆಹಳ್ಳಿ, ಪೊಲೀಸರ‌ ಆಕ್ಷೇಪ ಉಲ್ಲಂಘಿಸಿ ಬೆಟ್ಟ ಹತ್ತಿರ ದೇವರ ದರ್ಶನ.

*ಮಾ.23 ರಂದು ಯಲಬುರ್ಗಾ ಹಿರೇವಂಕಲಕುಂಟಾದ ಹಿಂದು ಸಮಾವೇಶಕ್ಕೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ ಕೆರೆಹಳ್ಳಿ ಆಹ್ವಾನ ಹಿನ್ನೆಲೆಯಲ್ಲಿ ಇಬ್ಬರಿಗೂ ಜಿಲ್ಲಾಡಳಿತ ನಿರ್ಬಂಧ.

*ಮಾಹಿತಿ ತಿಳಿಯದೇ ಅಂಜನಾದ್ರಿ ಗೆ ಆಗಮಿಸಿದ ಪುನೀತ ಕೆರೆಹಳ್ಳಿ,ಪೊಲೀಸರೊಂದಿಗೆ ವಾಗ್ವಾದ.

*ಪಟ್ಟು ಬಿಡದೇ ಬೆಟ್ಟ ಹತ್ತಿದ ಕೆರೆಹಳ್ಳಿ ಫಾಲೋ ಮಾಡಿದ ಪೊಲೀಸರು.

*ಕೊನೆಗೂ ಪುನೀತ್ ಗೆ ನೋಟೀಸ್ ನೀಡಿ ಜಿಲ್ಲಾ ಗಡಿ ದಾಟಿಸಿದ ಪೊಲೀಸರು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಗಂಗಾವತಿ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಪರ್ವತಕ್ಕೆ ದರ್ಶನಕ್ಕೆ ಆಗಮಿಸಿದ್ದ ಆರೆಸ್ಸೆಸ್ ಸಂಘ ಪರಿವಾರದ ಪುನೀತ್ ಕೆರೆಹಳ್ಳಿ ಅವರಿಗೆ ಕೊಪ್ಪಳ ಜಿಲ್ಲಾಡಳಿತ ನಿಷೇಧವಿದ್ದರೂ ಕಿಷ್ಕಿಂಧಾ ಅಂಜನಾದ್ರಿ ದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಶನಿವಾರ ಬೆಳ್ಳಿಗ್ಗೆ ಜರುಗಿತು.

ನೋಟಿಸ್ ನೀಡದೇ ಅಂಜನಾದ್ರಿ ದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಪುನೀತ್ ಕೆರೆಹಳ್ಳಿ ಖಂಡಿಸಿ ಕಿಷ್ಕಿಂಧಾ ಅಂಜನಾದ್ರಿ ದರ್ಶನ ಪಡದೇ ಪಡೆಯುತ್ತೇನೆ ರಾಜ್ಯ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಜಿಲ್ಲಾಡಳಿತದ ಅಧಿಕಾರಿಗಳು ಏನು ಕ್ರಮ ಕೈಗೊಳ್ಳಲಿ ಎಂದು ಪೊಲೀಸರ ವಿರೋಧದ ಮಧ್ಯ ಬೆಟ್ಟ ಹತ್ತಿ ಶ್ರೀ ಆಂಜನೇಯನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ದರ್ಶನದ ನಂತರ ಬೆಟ್ಟ ಇಳಿದ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರು ಜಿಲ್ಲಾ ಪ್ರವೇಶದ ನಿರ್ಬಂಧದ ನೋಟೀಸ್ ಅನ್ನ ನೀಡಿದರು ನಂತರ ಅವರನ್ನು ಕೊಪ್ಪಳ ಜಿಲ್ಲೆಯ ಗಡಿ ದಾಟಿಸಿ ಕಳುಹಿಸಿದರು.

ಮಾ.23 ರಂದು ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಆರೆಸ್ಸೆಸ್ ಹಾಗೂ ಸಂಘ ಪರಿವಾರದವರು ಆಯೋಜಿಸಿರುವ ಹಿಂದು ಸಮಾವೇಶದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಗೋ ರಕ್ಷಣೆ ಹೋರಾಟ ಮಾಡುವ ಪುನೀತ್ ಕೆರೆಹಳ್ಳಿ ಮುಖ್ಯಭಾಷಣ ಮಾಡಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರೆಹಳ್ಳಿ ಅವರಿಗೆ ಮಾ.21-23 ಸಂಜೆ ವರೆಗೆ

ಕೊಪ್ಪಳ ಜಿಲ್ಲಾ ಪ್ರವಾಸವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಡಾ.ಸುರೇಶ ಇಟ್ನಾಳ

ಆದೇಶ ಮಾಡಿದ್ದಾರೆ.

ಎಸ್ಸಿ ಒಳಮೀಸಲಾತಿ ನ್ಯಾ. ನಾಗಮೋಹನ್ ದಾಸ್ ಅವೈಜ್ಞಾನಿಕ ವರದಿ ತಿರಸ್ಕಾರಕ್ಕೆ ದಲಿತ ಬಲಗೈ ಬಣ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ :ಎಸ್ಸಿ

ಒಳ ಮೀಸಲಾತಿ ಹಂಚಿಕೆಯ ವಿಚಾರವಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯು ಅವೈಜ್ಞಾನಿಕವಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಇಲ್ಲವಾದಲ್ಲಿ ತಿರಸ್ಕರಿಸಿ ಮತ್ತೊಮ್ಮೆ ಮೀಸಲಾತಿ ಮರು ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಬಲಗೈ ಸಮುದಾಯದ ಒಕ್ಕೂಟದ ಅಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿಯವರ ಆದೇಶದಂತೆ ಗಂಗಾವತಿಯ ಸರ್ಕಿಟ್ ಹೌಸ್ ನಲ್ಲಿ ದಲಿತ ಬಲಗೈ ಸಮುದಾಯದ ಸಂಘಟನೆಗಳ ನಾಯಕರೆಲ್ಲರರು ಒತ್ತಾಯಿಸಿದರು. ಈ ಸಂಬಂಧ ಮಾ. 25 ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ದಲಿತ ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನೆಗೆ

ತೆರಳು ಕುರಿತು ಚರ್ಚೆ ನಡೆಸಲಾಯಿತು.

ದಲಿತ ಸಮುದಾಯದ ಹಿರಿಯ ನಾಯಕ ಕುಂಟೋಜಿ ಮರಿಯಪ್ಪ ಮಾತನಾಡಿ,

ನಾವು ಮೀಸಲಾತಿಯ ವಿರೋಧಿಗಳು ಅಲ್ಲಾ. ಆದರೆ ರೋಸ್ಟರ್ ಪದ್ಧತಿಯಲ್ಲಿ ಸಮನಾಗಿ ಹಂಚಿಕೆ ಮಾಡದೆ ಬಿಂದುಗಳಲ್ಲಿ ಏರುಪೇರು ಮಾಡಿದ್ದು ಇವುಗಳನ್ನು ಸರಿಪಡಿಯುವಕರಿದ್ದ.ಇಲ್ಲವಾದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ಸಾದ್ಯತೆ ಇದ್ದು ಕೂಡಲೇ ಸರಿಪಡಿಸಬೇಕು.

ನ್ಯಾಯಬದ್ಧ ಹೋರಾಟಕ್ಕೆ ಕೊಪ್ಪಳದ ವಿವಿಧ ತಾಲೂಕಿನ ದಲಿತ ಮುಖಂಡರು, ಸಂಘಟನೆಗಾರರು, ಮಹಿಳೆಯರು,ಯುವಕರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಲಕ್ಷಾಂತರ ಜನ ಸೇರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಬೇಕು ಮತ್ತು ಈ ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದರು.

ಸಮುದಾಯದ ಹಿರಿಯ

ಸಭೆಯಲ್ಲಿ ದಲಿತ ಬಲಗೈ ಸಮುದಾಯದ ಮುಖಂಡರಾದ ದೊಡ್ಡ ಬೋಜಪ್ಪ, ಸೋಮಶೇಖರ್ ಬಣ್ಣದಮನೆ,

ಜಿ.ಹುಲಗಪ್ಪ ಮಾಸ್ತರ, ಮಾಗಿ ಹುಲಗಪ್ಪ, ಅಂಬಣ್ಣ ಛಲವಾದಿ,ಹರೀಶ್ ಕುರಿ,ರಾಮಚಂದ್ರಪ್ಪ, ಹುಸೇನಪ್ಪ ಹಂಚಿನಾಳ ವಕೀಲರು, ಪ್ರತಾಪ್ ವಕೀಲರು, ತಿಮ್ಮಣ್ಣ ಮುಂಡಸ್ತ್, ಮಾರ್ಕಂಡೇಯ, ಆರತಿ ರವಿ, ಪೂಜಾರಿ ಬಸವರಾಜ ಆರತಿ ವೀರೇಶ್,ಆಂಜನೇಯ ಸೋಮನಾಳ,ಜಿ.ಟಿ. ನಾಗರಾಜ್, ಹಾಗೂ ಯುವಕರಾದ ಮಂಜುನಾಥ ಆರತಿ,ಮಲ್ಲಿಕಾ ಗೋಟೂರ ,ಪರುಶುರಾಮ,ಮಂಜುನಾಥ ಹಂಚಿನಾಳ,ಮುತ್ತುರಾಜ್, ಆನಂದ ಛಲವಾದಿ,ಭಾಷಾ ಚಲುವಾದಿ, ಜಡಿಯಪ್ಪ, ಯಮನಪ್ಪ,ಸಂತೋಷ್ , ರಾಮು ಕಿರಿ ಕಿರಿ,ಸುರೇಶ್, ರೇವಣ್ಣ, ಗೋವಿಂದಪ್ಪ, ಜುಮ್ಮಣ್ಣ, ಸುನಿಲ್ ಕುಮಾರ್ ಆರತಿ,ಇನ್ನೂ ಅನೇಕ ಯುವಕರಿದ್ದರು

ಜನರನ್ನು ಬೆಸೆಯಲು ಪ್ರತಿ ಧರ್ಮದಲ್ಲಿ ಹಬ್ಬಗಳು ಇವೆ:ಗಾಲಿ ಜನಾರ್ದನ ರೆಡ್ಡಿ

* ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆ ಸೇರಿ ಸಾಮೂಹಿಕ ಪ್ರಾರ್ಥನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಪ್ರತಿ ಧರ್ಮದಲ್ಲೂ ಜನರನ್ನು ಪರಸ್ಪರ ಬೆಸೆಯಲು ಹಬ್ಬಗಳು ಇವೆ, ಆದ್ದರಿಂದ ಜಾತಿ,ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಸಲ್ಲದು, ಪವಿತ್ರ ರಂಜಾನ್ ಐಕ್ಯತೆಯನ್ನು ಹೇಳುತ್ತದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಅವರು ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರ ಜೊತೆ ಸೇರಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ರಾಜಕೀಯಕ್ಕೆ ಪ್ರವೇಶ ಮಾಡಿದಾಗಿ ನಿಂದಲೂ ಧರ್ಮ,ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ, ಅಭಿವೃದ್ಧಿ ಮತ್ತು ಐಕ್ಯತೆ ಹೆಸರಿನಲ್ಲಿ ರಾಜಕೀಯ ಮಾಡಿ ಬಳ್ಳಾರಿ ಮತ್ತು ಗಂಗಾವತಿಯನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಮುಸ್ಲಿಂ ಪ್ರತಿಯೊಬ್ಬರು ದೇಶಭಕ್ತರಾಗಿ ದೇಶ,ಧರ್ಮಕ್ಕೆ ಮೊದಲು ಆದ್ಯತೆ ನೀಡಬೇಕು. ಆ ಮೂಲಕ ದೇಶದ ಅಭಿವೃದ್ಧಿ ಮತ್ತು ವೈಯಕ್ತಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಗುರುಗಳಾದ ಕಮಲ್ ಮುಸ್ತಾಪ್ ಹಾಗೂ ಈದ್ಗಾ ಕಮೀಟಿಯ ಪದಾಧಿಕಾರಿಗಳು ಮುಸ್ಲಿಂ ಸಮಾಜದ ಗುರುಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಕಾರಟಗಿ ತಾಲೂಕು ಕಮ್ಮವಾರಿ ಸಂಘದ ಲೋಗೋ ಬಿಡುಗಡೆ:

*ಕಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕಾರಟಗಿ ತಾಲೂಕು ಕಮ್ಮವಾರಿ ಸಂಘದ ರಚನೆ ಕಾರ್ಯಕ್ರಮ ಮರ್ಲಾನಹಳ್ಳಿಯ ರೆಡ್ಡಿ ವೀರಣ್ಣ ಸ್ಕೂಲಿನಲ್ಲಿ ಜರುಗಿತು ಸಂಘದ ಲೋಗೋವನ್ನು ಕಮ್ಮವಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಮ್ಮವಾರಿ ಸಮಾಜದ

ದುರ್ಗಾರಾವ್,ನೆಕ್ಕಂಟಿ ನಾಗರಾಜ, ಬಿ.ಗೋಪಾಲರಾವ್,ರವಿಕಾಂತ,ಕಂಠಮಣಿ ಶ್ರೀನಿವಾಸ ಸೇರಿ ಅನೇಕರಿದ್ದರು.

ಪದಾಧಿಕಾರಿಗಳ ಆಯ್ಕೆ:ಕಾರಟಗಿ ತಾಲೂಕು ಕಮ್ಮವಾರಿ ಸಂಘವನ್ನು ನೂತನ ರಚನೆ ಮಾಡಲಾಗಿದ್ದು ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಲ್ಲಾ ನಲ್ಲ

ಗೋಪಾಲಕೃಷ್ಣ, ಕಾರ್ಯದರ್ಶಿ ಜಾಲಿಪರ್ತಿ ರಾಮಬಾಬು,ಖಜಾಂಚಿ ಗೋಡ್ತಿ ವೆಂಕಟೇಶರಾವ್ ಆಯ್ಕೆಯಾಗಿದ್ದು ಉಳಿದ ಪದಾಧಿಕಾರಿಗಳ‌ ಆಯ್ಕೆ ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಕಾರ್ಯದರ್ಶಿ ಜಾಲಿಪರ್ತಿ ರಾಮಬಾಬು ತಿಳಿಸಿದ್ದಾರೆ.

ಹೊಸ ವರ್ಷದ ಯುಗಾದಿ ಮುಳ್ಳಿನ ಪವಾಡ!

 

*ಶ್ರೀ ಆಂಜನೇಯಸ್ವಾಮಿ ಪಲ್ಲಕ್ಕಿ ಮಹೋತ್ಸವ.
*ಶತಮಾನಗಳಿಂದ ವೈಶಿಷ್ಟ್ಯಪೂರ್ಣ
ಯುಗಾದಿ ಆಚರಣೆ.

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ:
ಹೊಸ ವರ್ಷ ಯುಗಾದಿ ಹಬ್ಬ ಕನ್ನಡ ನಾಡಿನದ್ಯಂತ ವೈಶಿಷ್ಟ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ.
ಆದರೆ ತುಂಗಭದ್ರಾ ಡ್ಯಾಂ ನಿರ್ಮಾಣ ನಂತರ ಡ್ಯಾಮಿನ ಸುತ್ತಲಿರುವ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈ ಹಬ್ಬವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ. ಹಗರಿಬೊಮ್ಮನಹಳ್ಳಿ, ಹಡಗಲಿ,ಕೊಪ್ಪಳ ತಾಲೂಕು ಸೇರಿ ಇತರೆ ಭಾಗದಲ್ಲಿ ಯುಗಾದಿ ಹಬ್ಬವನ್ನು ಯುಗಾದಿ ಅಮಾವಾಸ್ಯೆ ಯುಗಾದಿ ಪಾಡ್ಯ ನಂತರದ ದಿನವನ್ನು ಯುಗಾದಿ ಮುಳ್ಳಿನ ಪವಾಡ ದಿನ ಅಥವಾ ಬ್ಯಾಟಿ ಗಿಡ ಎಂದು ಕರೆಯುವ ಮೂಲಕ ಮೂರು ದಿನಗಳ ಕಾಲ ಹೊಸ ವರ್ಷ ಯುಗಾದಿವನ್ನು ಆಚರಣೆ ಮಾಡುತ್ತಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ವಲ್ಲಭಪುರ ಚಿಂತಪಲ್ಲಿ ಈ ಗ್ರಾಮಗಳಲ್ಲಿ ಯುಗಾದಿ ಪಾಡ್ಯದ
ಮರುದಿನ ಬ್ಯಾಟಿ ಗಿಡ ಹಬ್ಬವನ್ನು ಆಚರಿಸಲಾಗುತ್ತದೆ. ಬ್ಯಾಟಿ ಗಿಡದಂದು ಊರ ಹೊರಗಿನ ಬಹಳ ಮುಳ್ಳಿನಿಂದ ಕೂಡಿದ ಕಾರಿ ಗಿಡಗಳನ್ನು ತಂದು ರಾಶಿ ಹಾಕಿ ಇದಕ್ಕೆ ನೀರನ್ನು ಸುರಿದು ಶ್ರೀ ಆಂಜನೇಯ ಮೂರ್ತಿ ಇರುವ ಪಲ್ಲಕ್ಕಿ ಹೊತ್ತು ಮೆರವಣಿಗೆಯಲ್ಲಿ ಸಾಗುವವರಿಗೆ ಡೊಳ್ಳು,ಹಲಗೆ,ತಾಷಾ ಹೀಗೆ ಜನಪದ ಮೆರವಣಿಗೆ ಸಾಥ್ ನೀಡುತ್ತದೆ. ಈ ಸಂದರ್ಭದಲ್ಲಿ ದೇವರು ಮೈಮೇಲೆ ಬಂದವರು ಈ ಮುಳ್ಳಿನ ರಾಶಿಯ ಮೇಲೆ ಹಾರುತ್ತಾರೆ. ಕೂಡಲೇ ಇವರ ಮೇಲೆ ನೀರನ್ನು ಸುರಿದು ಇವರನ್ನು ತೆಗೆದುಕೊಂಡು ಹೋಗಿ ಶ್ರೀ ಆಂಜನೇಯನ ಗರ್ಭಗುಡಿಯ ಮುಂದಿನ ಜಾಗದಲ್ಲಿ ಹಾಕಲಾಗುತ್ತದೆ. ಪಲ್ಲಕ್ಕಿ ದೇವಸ್ಥಾನ ಪ್ರವೇಶದ ನಂತರ ಇಡೀ ಗ್ರಾಮಸ್ಥರು ಒಂದೆಡೆ ಸೇರಿ ದೇವಸ್ಥಾನದ ಧ್ವಜ (ಪಟಾಕ್ಷಿ) ಕಾಣಿಕೆ ಪೆಟ್ಟಿಗೆ ಸೇರಿದಂತೆ ದೇವರ ವಸ್ತುಗಳನ್ನು ಹರಾಜಿನ ಮೂಲಕ ಹರಾಜು ಮಾಡಿ ಈ ಹಣವನ್ನು ದೇವಸ್ಥಾನದ ಧಾರ್ಮಿಕ ಚಟುವಟಿಕೆಗಳಿಗೆ ಸಂಗ್ರಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಜಾತಿ, ಭೇದ, ರಾಜಕೀಯ ಎಲ್ಲವನ್ನೂ ಮರೆತು ಎಲ್ಲರೂ ಒಂದೆಡೆ ಸೇರಿ ಶ್ರೀ ಆಂಜನೇಯನಿಗೆ ಜೈಕಾರವನ್ನು ಹಾಕುತ್ತಾರೆ. ನಂತರ ಯುಗಾದಿ ಹಬ್ಬ ಮುಕ್ತಾಯವಾದಂತೆ ಸರಿ ಇಂತ ವೈಶಿಷ್ಟ್ಯ ಪೂರ್ಣ ಆಚರಣೆಗಳ ಮೂಲಕ ಯುಗಾದಿ ಹಬ್ಬ ಹಗರಿಬೊಮ್ಮನಹಳ್ಳಿ ತಾಲೂಕಿನ ಅತ್ಯಂತ ಸಡಗರ ಸಂಭ್ರಮವನ್ನು ಸಾರುತ್ತದೆ

ತುಂಗಭದ್ರಾ ಎಡದಂಡೆ ಕಾಲುವೆ ಒಡೆದ ಸ್ಥಳಕ್ಕೆ ಸಚಿವ ತಂಗಡಗಿ ಭೇಟಿ.

*ನಿರ್ಲಕ್ಷ್ಯಕ್ಕೆ ತೋರಿದವರನ್ನು ಸಸ್ಪೆಂಡ್ ಮಾಡಲು ಸೂಚನೆ

*ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರದ ವ್ಯವಸ್ಥೆಗೆ ಸೂಚನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಸಮೀಪದ ಬಸಾಪುರದ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆ, ಒಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಹಾಗೂ ಕೊಪ್ಪಳದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸುದ್ದಿಗಾರರೊಂದಿಗೆ ಮಾತನಾಡಿ ಬಸ್ಸಾಪುರ ಹತ್ತಿರ ಎಡದಂಡೆ ಕಾಲುವೆ ಸೋರಿಕೆ ಕಳೆದ ಒಂದು ತಿಂಗಳಿನಿಂದ ಆಗುತ್ತಿರುವ ಬಗ್ಗೆ ರೈತರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಿರುವ ಕುರಿತು ರೈತರು ತಿಳಿಸಿದ್ದಾರೆ. ನಿರ್ಲಕ್ಷ ತೋರಿದ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡು ಸಸ್ಪೆಂಡ್ ಮಾಡಲಾಗುತ್ತದೆ. 15 ದಿನದೊಳಗೆ ಕಾಲುವೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಿ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ನೀರು ನುಗ್ಗಿ ನಷ್ಟ ಅನುಭವಿಸಿರುವ ಬಸಾಪುರ,ಹರ್ಲಾಲಪುರ, ತಿರುಮಲಾಪುರ ರೈತರಿಗೆ ಸೂಕ್ತ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ರೈತರ ಹಿತ ಮರೆಯಲು ಸಾಧ್ಯವಿಲ್ಲ ರೈತರಿಗೆ ನಮ್ಮ ಸರ್ಕಾರ ಸದಾ ನೆರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರೈತರು ಮತ್ತು ರೆಸಾರ್ಟ್ ಮಾಲೀಕರು ಸಚಿವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಹಿಟ್ನಾಳ, ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ಸೇರಿದಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳೀಯ ರಾಜಕೀಯ ಮುಖಂಡರು ಇದ್ದರು.

 

ಜುಲೈನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀರಾಮಲಿಂಗೇಶ್ವರ ಮಹಾರಥೋತ್ಸವ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಜುಲೈ ನಗರದ ಐತಿಹಾಸಿಕ ಪ್ರಸಿದ್ಧ ಶ್ರೀರಾಮಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಹಾರಥೋತ್ಸವ ಗುರುವಾರ ಸಂಜೆ ಶ್ರದ್ಧೆ, ಭಕ್ತಿಯಿಂದ ಜರುಗಿತು.

ಜುಲೈ ನಗರದ ಅತಿ ಪುರಾತನ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ಯುಗಾದಿಯ ಪಾಡ್ಯದಂದು ನೆರವೇರುತ್ತದೆ.

ಗಂಗಾವತಿಯ ಪುರಾತನ ಜಾತ್ರೆಗಳಲ್ಲಿ ಜುಲೈ ನಗರದ ಶ್ರೀ ರಾಮಲಿಂಗೇಶ್ವರ ಜಾತ್ರೆಯು ಒಂದಾಗಿದ್ದು, ನೂರಾರು ವರ್ಷಗಳಿಂದ ಈ ಜಾತ್ರಾ ಮಹೋತ್ಸವ ದಂದು ಬೆಳಿಗ್ಗೆ ನೈರ್ಮಲ್ಯ ವಿಸರ್ಜನೆ, ಜಲಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ಮಧ್ಯಾಹ್ನ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ. ಸಂಜೆ ಡೊಳ್ಳು,ತಾಷಾ,ಕಲಾತಂಡಗಳ ಮೆರವಣಿಗೆಯಲ್ಲಿ ಮಹಾರಥೋತ್ಸವ ಜುಲೈ ನಗರದ ಮಹಾ ಜನತೆಯ ಮಧ್ಯೆ ಸಂಭ್ರಮದಿಂದ ನೆರವೇರಿತು.

ಎಸ್ಸೆಸೆಲ್ಸಿ ಪರೀಕ್ಷೆ: ಹಾಲ್ಟ್ ಟಿಕೇಟ್ ಬಾರದೇ ಪರೀಕ್ಷೆ ಬರೆಯದ  ಮರಳಿ ಪ್ರೌಢಶಾಲೆಯ 12 ವಿದ್ಯಾರ್ಥಿಗಳು!

*ಹಾಜರಾತಿ ಕಡಿಮೆ ಹಾಗೂ ಕಿರು ಪರೀಕ್ಷೆಗೆ ಗೈರು ಹಾಲ್ಟ್ ಟಿಕೇಟ್ ಬರದಿರಲು ಕಾರಣ: ಮುಖ್ಯ ಶಿಕ್ಷಕಿ ಹೇಳಿಕೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬುಧವಾರದಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು ತಾಲೂಕಿನ ಮರಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಪೈಕಿ 12 ಜನ ವಿದ್ಯಾರ್ಥಿಗಳ ಪರೀಕ್ಷೆಯ ಪ್ರವೇಶ ಪತ್ರಗಳುವ ಹಾಜರಾತಿ ಕೊರತೆ ಮತ್ತು ಶಾಲೆಯ ಕಿರು ಪರೀಕ್ಷೆ ವಿದ್ಯಾರ್ಥಿಗಳು ಗೈರು ಆಗಿದ್ದು ಬೋರ್ಡ್ ನಿಂದಲೇ ಪ್ರವೇಶ ಪತ್ರಗಳು ಬಂದಿಲ್ಲ

ಎನ್ನುವ ಕಾರಣ ನೀಡಿ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಣೆ ಮಾಡಿಲ್ಲ ಎನ್ನಲಾಗುತ್ತಿದೆ.

ಹಾಲ್ ಟಿಕೆಟ್ ಬೋರ್ಡ್ ಬಂದರೂ ನಮಗೆ ವಿತರಣೆ ಮಾಡಿಲ್ಲ ಎಂದು 12 ಜನ ವಿದ್ಯಾರ್ಥಿಗಳು ಭಾರತೀಯ ದಲಿತ ಸೇನೆ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿ ನಮಗೆಲ್ಲ ಹಾಲ್ ಟಿಕೆಟ್ ವಿತರಿಸಬೇಕು.ನಮ್ಮ ಭವಿಷ್ಯದ ಜತೆ ಆಟವಾಡಿದ ಮುಖ್ಯ ಶಿಕ್ಷಕರು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಮರಳಿ ಸರಕಾರಿ ಪ್ರೌಢಶಾಲೆಯ ಯಮನೂರ ಸಾಬ ,ಮೌನೇಶ,ಪ್ರದೀಪ್, ಮಹೇಶ,ನವಾಜ್,ಹೇಮಂತ,ಶಶಾಂಕ್,ನಿರಂಜನ್ ಮತ್ತು ಪ್ರವೀಣ್, ಶ್ರೀನಿವಾಸ, ವೆಂಕಟೇಶ ಈ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಬಂದಿಲ್ಲ.

ಬಾಕ್ಸ್

ವಿದ್ಯಾರ್ಥಿಗಳು ಶಾಲೆಗೆ ಸತತ ಗೈರು ಮತ್ತು ಕಿರು ಪರೀಕ್ಷೆ ಬರೆದಿರುವುದರಿಂದ ಅವರುಗಳ ಹಾಲ್ ಟಿಕೆಟ್ ಅನ್ನು ಎಸೆಸೆಲ್ಸಿ ಪರೀಕ್ಷಾ ಮಂಡಳಿಯವರು ಕಳುಹಿಸಿಲ್ಲ. ಆದ್ದರಿಂದ ಇದರಲ್ಲಿ ಮುಖ್ಯ ಶಿಕ್ಷಕರು ಸೇರಿದಂತೆ ಇತರ ಶಿಕ್ಷಕರ ಪಾತ್ರ ಇಲ್ಲ, ಪಾಲಕರಿಗೂ ಸಹ ಅನೇಕ ಬಾರಿ ಮನೆಗೆ ಹೋಗಿ ಮಾಹಿತಿ ನೀಡಲಾಗಿದೆ.ಜೊತೆಗೆ ಮೊಬೈಲ್ ಮೂಲಕ ಕರೆ ಮಾಡಿ ವಿದ್ಯಾರ್ಥಿಗಳು ಸತತ ಗೈರು ಮತ್ತು ಕಿರುಪರೀಕ್ಷೆ ಬರೆದಿರುವ ಕುರಿತು ತಿಳಿಸಲಾಗಿದೆ.

-ಆಶಾ ಮುಖ್ಯ ಶಿಕ್ಷಕಿ.

 

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಿರಾಣಿ ಅಂಗಡಿ, ಪಂಚರ್ ಶಾಪ್ ಸುಟ್ಟು ಭಸ್ಮ, ಲಕ್ಷಾಂತರ ನಷ್ಟ.

*ಗಂಗಾವತಿ ಬಸವೇಶ್ವರ ಸರ್ಕಲ್ ಬಳಿ ಘಟನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಿರಾಣಿ ಅಂಗಡಿ ಮತ್ತು ಪಂಚರ್ ಶಾಪ್ ಸುಟ್ಟ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ ಗಂಗಾವತಿಯ ಆನೆಗೊಂದಿ ರಸ್ತೆಯಲ್ಲಿರುವ ಬಸವೇಶ್ವರ ಸರ್ಕಲ್ ಬಳಿ ಜರುಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹೇಗೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಮಧ್ಯರಾತ್ರಿ ಏಕಾಏಕಿ ಕಿರಾಣಿ ಅಂಗಡಿ ಮತ್ತು ಪಂಚರ್ ಶಾಪಿಗೆ ಬೆಂಕಿ ಹತ್ತಿಕೊಂಡು ಕಿರಾಣಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಯ ದವಸ ಧಾನ್ಯ ಹಾಗೂ ಪ ಪಂಚರ್ ಶಾಪಿನಲ್ಲಿದ್ದ ಟೈರ್,ಟ್ಯೂಬ್ ಇತರೆ ಸಲಕರಣೆಗಳು ಸುಟ್ಟು ಭಸ್ಮವಾಗಿವೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಾಹನ ಆಗಮಿಸಿ ಬೆಂಕಿಯನ್ನು ನಂದಿಸಲಾಗಿದೆ.

ಕಿರಾಣಿ ಅಂಗಡಿ ಮಾಲೀಕ ಅಮಾತೆಮ್ಮ ಹಾಗೂ ಪಂಚರ್ ಶಾಪ್ ಮಾಲೀಕ ಶಾಮೀದ್ ಅಲಿ ಬೆಂಕಿ ಅನಾವುತದ ಬಗ್ಗೆ ಕೇಸ್ ದಾಖಲಿಸಿದ್ದಾರೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಏಕಪಕ್ಷೀಯ ನಿಯಮಗಳ ವಿರುದ್ಧ ಆನೆಗೊಂದಿ ಭಾಗದ ಜನರಿಂದ ಪ್ರತಿಭಟನೆ.

*ಆನೆಗೊಂದಿಯನ್ನು ಕೋರ್ ಜೋನ್ ನಿಂದ ತೆಗೆದು ಹಾಕಬೇಕು.

*ಕಾರಿಗನೂರನ್ನು ಪ್ರಾಧಿಕಾರದಿಂದ ಕೈ ಬಿಟ್ಟಂತೆ ಆನೆಗೊಂದಿಯ 15 ಗ್ರಾಮಗಳನ್ನು ಕೈ ಬಿಡಬೇಕು.

*ಪಕ್ಷಾತೀತ ಹೋರಾಟಕ್ಕೆ ವ್ಯಾಪಕ ಬೆಂಬಲ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಏಕಪಕ್ಷೀಯ ನಿಯಮಗಳನ್ನು ಖಂಡಿಸಿ ಆನೆಗೊಂದಿ ಭಾಗದ 15 ಗ್ರಾಮಗಳ ನಿವಾಸಿಗಳು ಕಡೆ ಬಾಗಿಲು ಶ್ರೀರಂಗದೇವರಾಯಲು ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಪತವನ್ನು ಸಲ್ಲಿಸಿದರು.

ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಂಪಿ ಪ್ರದೇಶವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದು ಆ ಮೂಲಕ ಇನ್ನೋಸ್ಕೋ ಪಟ್ಟಿಯಲ್ಲಿ ಹಂಪಿಯನ್ನು ಶಾಶ್ವತವಾಗಿ ಉಳಿಸುವ ಕಾರ್ಯವನ್ನು ಮಾಡುತ್ತಿದೆ ಆದರೆ ಪ್ರಾಧಿಕಾರ ಸ್ಥಾಪನೆ ಆಗುವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸುವ ಮತ್ತು ಪ್ರತಿ 10 ವರ್ಷಗಳಿಗೊಮ್ಮೆ ಮಾಸ್ಟರ್ ಪ್ಲಾನ್ ಬದಲಾಯಿಸುವ ಜೊತೆಗೆ ಕಾಲ ಕಾಲಕ್ಕೆ ಸ್ಟೇಕ್ ಹೋಲ್ಡರ್ಸ್(ಸ್ಥಳೀಯರು) ಅವರ ಸಭೆ ಕರೆದು ಪರಂಪರೆ ಉಳಿಸುವ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಸಲಹೆ ಸೂಚನೆ ಪಡೆಯುವ ಭರವಸೆ ಉಸಿಯಾಗಿದೆ. ಪ್ರಾಧಿಕಾರದ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡು 15 ಗ್ರಾಮಗಳ ಜನರ ಜೀವನವನ್ನು ಕತ್ತಲು ಮಾಡಿದ್ದಾರೆ. ಹಿರಿಯರು ನಿರ್ಮಿಸಿದ ಮನೆಗಳನ್ನು ಪುನಃ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಗ್ರಾಮಗಳಲ್ಲಿ ಹೊಸ ಲೇಔಟ್ ಗಳನ್ನು ಮಾಡಿ ನಿವೇಶನಗಳನ್ನು ಹಂಚಿಕೊಳ್ಳಲು ಅಥವಾ ಪಡೆಯಲು ಆಗುತ್ತಿಲ್ಲ, ಕುಡಿಯುವ ನೀರು, ಶಾಲಾ ಕಾಂಪೌಂಡು, ಆಸ್ಪತ್ರೆಗಳು ಸೇರಿದಂತೆ ಯಾವುದೇ ಹೊಸ ಯೋಜನೆಗಳನ್ನು ಅನುಷ್ಠಾನ ಆಗಬೇಕಾದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಸೆಕ್ಷನ್ 14 ನಂತೆ ಗ್ರಾಮ ಪಂಚಾಯಿತಿಗೆ ಯಾವುದೇ ಅಧಿಕಾರ ಇಲ್ಲ, ಕಡ್ಡಾಯವಾಗಿ ಪ್ರಾಧಿಕಾರದ ನಿರಾಪೇಕ್ಷಣ ಪತ್ರ ಪಡೆಯಬೇಕಿದೆ. ಪ್ರಾಧಿಕಾರದ ಅವೈಜ್ಞಾನಿಕ ನಿಯಮಗಳಿಂದಾಗಿ ಆನೆಗೊಂದಿ ಭಾಗವು 50 ವರ್ಷಗಳ ಹಿಂದೆ ಹೋಗಿದೆ. ವಿಶ್ವದಾದ್ಯಂತ ಇರುವ ಯುನೆಸ್ಕೋ ಸ್ಥಳಗಳ ಮೇಲುಸ್ತುವಾರಿಗಾಗಿ ಎಲ್ಲಿಯೂ ನಿರ್ವಹಣಾ ಪ್ರಾಧಿಕಾರ ಇಲ್ಲ ಹಂಪಿಗೆ ಮಾತ್ರ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ರಚಿಸಲಾಗಿದೆ. ಜತೆಗೆ ಕೋರ್ ಜೋನ್ ಪ್ರದೇಶಗಳನ್ನು ಅಧಿಕಾರಿಗಳು ಸ್ಥಳೀಯರ ಅಭಿಪ್ರಾಯ ಪಡೆಯದೇ ಆನೆಗೊಂದಿ ಮತ್ತು ವಿರೂಪಾಪೂರಗಡ್ಡಿ ಗ್ರಾಮವನ್ನು ಶೇ100 ಮಾಡಿ ಎಎಸ್ ಐ ಸ್ಮಾರಕಗಳಿರುವ ಹೊಸಪೇಟೆ ತಾಲೂಕಿನ ಕಮಲಾಪೂರ ವನ್ನು ಶೆ.100 ರಿಂದ 40ಕ್ಕೆ ಇಳಿಸಲಾಗಿದೆ.

ಪ್ರಾಧಿಕಾರದಲ್ಲಿದ್ದ ಕಾರಿಗನೂರನ್ನು ಗಣಿ ಉದ್ಯಮ ನಡೆಸುವ ಉದ್ದೇಶದಿಂದ ಕೈ ಬಿಡಲಾಗಿದೆ.

ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಗ್ರಾ.ಪಂ.ಕಾಯ್ದೆಯನ್ನು ಹಂಪಿ ಪ್ರಾಧಿಕಾರ ಗಾಳಿ ತೂರಿದ್ದು ಆನೆಗೊಂದಿ, ಸಾಣಾಪುರ, ಮಲ್ಲಾಪೂರ ಹಾಗೂ ಸಂಗಾಪೂರ ಗ್ರಾ.ಪಂ.ಆಡಳಿತ ವನ್ನು ನಡೆಸಲು ಬಿಡದೇ ಪ್ರತಿ ಹಂತದಲ್ಲೂ ಆಕ್ಷೇಪ ಎತ್ತಲಾಗುತ್ತಿದೆ. ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಳ್ಳಲು ಬಿಡುತ್ತಿಲ್ಲ.

ಹಂಪಿ ಭಾಗವು ಕೋರ್ ಜೋನ್ ನಲ್ಲಿದ್ದರೂ ವಾಣಿಜ್ಯ ವ್ಯವಹಾರ, ಮನೆ ನಿರ್ಮಾಣ,ಸ್ಟಾರ್ ಹೊಟೇಲ್ ಗಳ ನಿರ್ಮಾಣ ಹೀಗೆ ಎಲ್ಲಾ ವ್ಯವಹಾರ ನಡೆಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಆನೆಗೊಂದಿ ಭಾಗದಲ್ಲಿ ಮನೆ ಹಾಗೂ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ನಡೆಸುವವರ ವಿರುದ್ದ ಪ್ರಾಧಿಕಾರ ಕೆಂಗಣ್ಣು ಬಿಟ್ಟು ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ.ಕೂಡಲೇ ರಾಜ್ಯ ಸರಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೈ ಬಿಡಬೇಕು.ಜತೆಗೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಆನೆಗೊಂದಿಯ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕೈ ಬಿಟ್ಟು

ಆನೆಗೊಂದಿ ಒಳಗೊಂಡಂತೆ ಕಿಷ್ಕಿಂಧಾ ಅಂಜನಾದ್ರಿ ಪ್ರಾಧಿಕಾರ ರಚನೆ ಪ್ರಸ್ತಾಪ ಹಾಗೂ ಕೋರ್ ಜೋನ್ ಸೇರಿ ವಿವಿಧ ವಲಯಗಳ ನಿಯಮ ಸರಳೀಕರಣ ಮಾಡಬೇಕು. ಪ್ರತಿ ಗ್ರಾಮಕ್ಕೆ ಗಾಂವಠಾಣಾ ಗುರುತಿಸಬೇಕು. ಆನೆಗೊಂದಿ ಭಾಗದ ಅರಣ್ಯ ಪ್ರದೇಶದಲ್ಲಿ ಜನ ವಸತಿ ಗುರುತಿಸಿ ಬೇರೆ ಕಡೆ ಅರಣ್ಯ ಇಲಾಖೆಗೆ ಕಂದಾಯ ಭೂಮಿ ಡಿನೋಟಿಫೈ ಮಾಡಬೇಕು.ಆನೆಗೊಂದಿ ಭಾಗವನ್ನು ಪ್ರವಾಸೋದ್ಯಮದಲ್ಲಿ ಬೆಳೆಸುವ ಅಂಶಗಳುಳ್ಳ

ನಿಯಮಗಳನ್ನು ಅನುಷ್ಠಾನ ಮಾಡಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಪ್ರತಿಭಟನೆಯಲ್ಲಿ ಶ್ರೀಕೃಷ್ಣದೇವರಾಯ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ಪಂ.ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಸ್ವಾಮಿ, ನ್ಯಾಯವಾದಿ ಎಚ್.ಸಿ.ಯಾದವ, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಡಾ.ವೆಂಕಟೇಶ ಬಾಬು,ಗ್ರಾ.ಪಂ.ಮಾಜಿ ಸದಸ್ಯ. ಮಲ್ಲಿಕಾರ್ಜುನ ಸ್ವಾಮಿ,ಪದ್ಮನಾಭರಾಜು,ನರಸಿಂಹಲು, ಸಿ.ಎಚ್.ಪ್ರಸಾದ,ಪಿ.ಲಕ್ಷ್ಮಣ್ ನಾಯ್ಕ, ಸುಬ್ಬರಾವ್,

ನ್ಯಾಯವಾದಿ ಸಾಯಿಕುಮಾರ,ವಿರೇಶ ಹನುಮನಹಳ್ಳಿ, ವೆಂಕಾರೆಡ್ಡಿ,ಎನ್.ಚಂದ್ರಶೇಖರ ರೆಡ್ಡಿ, ಬೆಳೂರು ಮಲ್ಲಪ್ಪ,ನೀಲಪ್ಪ,ಮಂಜುನಾಥಗೌಡ,ಅಯ್ಯಪ್ಪ,ಸುಬ್ಬಾರಾವ್,ಅಂಬೀಗೆರ ಹನುಮಂತಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷೆ ದುರುಗಮ್ಮ, ತಾ.ಪಂ.ಮಾಜಿ ಸದಸ್ಯೆ ಸಕ್ರಿಬಾಯಿ,ಸುನೀಲ್ ನಾಯ್ಡು,ಗೋಪಿ,ರವಿ,ಲಕ್ಷ್ಮೀನಾರಾಯಣ, ಅಂಜನಾದೇವಿ ಸೇರಿದಂತೆ ಆನೆಗೊಂದಿ ಹಾಗೂ15 ಗ್ರಾಮಗಳ ನಿವಾಸಿಗಳಿದ್ದರು.