
*ಆನೆಗೊಂದಿಯನ್ನು ಕೋರ್ ಜೋನ್ ನಿಂದ ತೆಗೆದು ಹಾಕಬೇಕು.
*ಕಾರಿಗನೂರನ್ನು ಪ್ರಾಧಿಕಾರದಿಂದ ಕೈ ಬಿಟ್ಟಂತೆ ಆನೆಗೊಂದಿಯ 15 ಗ್ರಾಮಗಳನ್ನು ಕೈ ಬಿಡಬೇಕು.
*ಪಕ್ಷಾತೀತ ಹೋರಾಟಕ್ಕೆ ವ್ಯಾಪಕ ಬೆಂಬಲ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಏಕಪಕ್ಷೀಯ ನಿಯಮಗಳನ್ನು ಖಂಡಿಸಿ ಆನೆಗೊಂದಿ ಭಾಗದ 15 ಗ್ರಾಮಗಳ ನಿವಾಸಿಗಳು ಕಡೆ ಬಾಗಿಲು ಶ್ರೀರಂಗದೇವರಾಯಲು ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಪತವನ್ನು ಸಲ್ಲಿಸಿದರು.
ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಂಪಿ ಪ್ರದೇಶವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದು ಆ ಮೂಲಕ ಇನ್ನೋಸ್ಕೋ ಪಟ್ಟಿಯಲ್ಲಿ ಹಂಪಿಯನ್ನು ಶಾಶ್ವತವಾಗಿ ಉಳಿಸುವ ಕಾರ್ಯವನ್ನು ಮಾಡುತ್ತಿದೆ ಆದರೆ ಪ್ರಾಧಿಕಾರ ಸ್ಥಾಪನೆ ಆಗುವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸುವ ಮತ್ತು ಪ್ರತಿ 10 ವರ್ಷಗಳಿಗೊಮ್ಮೆ ಮಾಸ್ಟರ್ ಪ್ಲಾನ್ ಬದಲಾಯಿಸುವ ಜೊತೆಗೆ ಕಾಲ ಕಾಲಕ್ಕೆ ಸ್ಟೇಕ್ ಹೋಲ್ಡರ್ಸ್(ಸ್ಥಳೀಯರು) ಅವರ ಸಭೆ ಕರೆದು ಪರಂಪರೆ ಉಳಿಸುವ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಸಲಹೆ ಸೂಚನೆ ಪಡೆಯುವ ಭರವಸೆ ಉಸಿಯಾಗಿದೆ. ಪ್ರಾಧಿಕಾರದ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡು 15 ಗ್ರಾಮಗಳ ಜನರ ಜೀವನವನ್ನು ಕತ್ತಲು ಮಾಡಿದ್ದಾರೆ. ಹಿರಿಯರು ನಿರ್ಮಿಸಿದ ಮನೆಗಳನ್ನು ಪುನಃ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಗ್ರಾಮಗಳಲ್ಲಿ ಹೊಸ ಲೇಔಟ್ ಗಳನ್ನು ಮಾಡಿ ನಿವೇಶನಗಳನ್ನು ಹಂಚಿಕೊಳ್ಳಲು ಅಥವಾ ಪಡೆಯಲು ಆಗುತ್ತಿಲ್ಲ, ಕುಡಿಯುವ ನೀರು, ಶಾಲಾ ಕಾಂಪೌಂಡು, ಆಸ್ಪತ್ರೆಗಳು ಸೇರಿದಂತೆ ಯಾವುದೇ ಹೊಸ ಯೋಜನೆಗಳನ್ನು ಅನುಷ್ಠಾನ ಆಗಬೇಕಾದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಸೆಕ್ಷನ್ 14 ನಂತೆ ಗ್ರಾಮ ಪಂಚಾಯಿತಿಗೆ ಯಾವುದೇ ಅಧಿಕಾರ ಇಲ್ಲ, ಕಡ್ಡಾಯವಾಗಿ ಪ್ರಾಧಿಕಾರದ ನಿರಾಪೇಕ್ಷಣ ಪತ್ರ ಪಡೆಯಬೇಕಿದೆ. ಪ್ರಾಧಿಕಾರದ ಅವೈಜ್ಞಾನಿಕ ನಿಯಮಗಳಿಂದಾಗಿ ಆನೆಗೊಂದಿ ಭಾಗವು 50 ವರ್ಷಗಳ ಹಿಂದೆ ಹೋಗಿದೆ. ವಿಶ್ವದಾದ್ಯಂತ ಇರುವ ಯುನೆಸ್ಕೋ ಸ್ಥಳಗಳ ಮೇಲುಸ್ತುವಾರಿಗಾಗಿ ಎಲ್ಲಿಯೂ ನಿರ್ವಹಣಾ ಪ್ರಾಧಿಕಾರ ಇಲ್ಲ ಹಂಪಿಗೆ ಮಾತ್ರ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ರಚಿಸಲಾಗಿದೆ. ಜತೆಗೆ ಕೋರ್ ಜೋನ್ ಪ್ರದೇಶಗಳನ್ನು ಅಧಿಕಾರಿಗಳು ಸ್ಥಳೀಯರ ಅಭಿಪ್ರಾಯ ಪಡೆಯದೇ ಆನೆಗೊಂದಿ ಮತ್ತು ವಿರೂಪಾಪೂರಗಡ್ಡಿ ಗ್ರಾಮವನ್ನು ಶೇ100 ಮಾಡಿ ಎಎಸ್ ಐ ಸ್ಮಾರಕಗಳಿರುವ ಹೊಸಪೇಟೆ ತಾಲೂಕಿನ ಕಮಲಾಪೂರ ವನ್ನು ಶೆ.100 ರಿಂದ 40ಕ್ಕೆ ಇಳಿಸಲಾಗಿದೆ.
ಪ್ರಾಧಿಕಾರದಲ್ಲಿದ್ದ ಕಾರಿಗನೂರನ್ನು ಗಣಿ ಉದ್ಯಮ ನಡೆಸುವ ಉದ್ದೇಶದಿಂದ ಕೈ ಬಿಡಲಾಗಿದೆ.
ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಗ್ರಾ.ಪಂ.ಕಾಯ್ದೆಯನ್ನು ಹಂಪಿ ಪ್ರಾಧಿಕಾರ ಗಾಳಿ ತೂರಿದ್ದು ಆನೆಗೊಂದಿ, ಸಾಣಾಪುರ, ಮಲ್ಲಾಪೂರ ಹಾಗೂ ಸಂಗಾಪೂರ ಗ್ರಾ.ಪಂ.ಆಡಳಿತ ವನ್ನು ನಡೆಸಲು ಬಿಡದೇ ಪ್ರತಿ ಹಂತದಲ್ಲೂ ಆಕ್ಷೇಪ ಎತ್ತಲಾಗುತ್ತಿದೆ. ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಳ್ಳಲು ಬಿಡುತ್ತಿಲ್ಲ.
ಹಂಪಿ ಭಾಗವು ಕೋರ್ ಜೋನ್ ನಲ್ಲಿದ್ದರೂ ವಾಣಿಜ್ಯ ವ್ಯವಹಾರ, ಮನೆ ನಿರ್ಮಾಣ,ಸ್ಟಾರ್ ಹೊಟೇಲ್ ಗಳ ನಿರ್ಮಾಣ ಹೀಗೆ ಎಲ್ಲಾ ವ್ಯವಹಾರ ನಡೆಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಆನೆಗೊಂದಿ ಭಾಗದಲ್ಲಿ ಮನೆ ಹಾಗೂ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ನಡೆಸುವವರ ವಿರುದ್ದ ಪ್ರಾಧಿಕಾರ ಕೆಂಗಣ್ಣು ಬಿಟ್ಟು ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ.ಕೂಡಲೇ ರಾಜ್ಯ ಸರಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೈ ಬಿಡಬೇಕು.ಜತೆಗೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಆನೆಗೊಂದಿಯ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕೈ ಬಿಟ್ಟು
ಆನೆಗೊಂದಿ ಒಳಗೊಂಡಂತೆ ಕಿಷ್ಕಿಂಧಾ ಅಂಜನಾದ್ರಿ ಪ್ರಾಧಿಕಾರ ರಚನೆ ಪ್ರಸ್ತಾಪ ಹಾಗೂ ಕೋರ್ ಜೋನ್ ಸೇರಿ ವಿವಿಧ ವಲಯಗಳ ನಿಯಮ ಸರಳೀಕರಣ ಮಾಡಬೇಕು. ಪ್ರತಿ ಗ್ರಾಮಕ್ಕೆ ಗಾಂವಠಾಣಾ ಗುರುತಿಸಬೇಕು. ಆನೆಗೊಂದಿ ಭಾಗದ ಅರಣ್ಯ ಪ್ರದೇಶದಲ್ಲಿ ಜನ ವಸತಿ ಗುರುತಿಸಿ ಬೇರೆ ಕಡೆ ಅರಣ್ಯ ಇಲಾಖೆಗೆ ಕಂದಾಯ ಭೂಮಿ ಡಿನೋಟಿಫೈ ಮಾಡಬೇಕು.ಆನೆಗೊಂದಿ ಭಾಗವನ್ನು ಪ್ರವಾಸೋದ್ಯಮದಲ್ಲಿ ಬೆಳೆಸುವ ಅಂಶಗಳುಳ್ಳ
ನಿಯಮಗಳನ್ನು ಅನುಷ್ಠಾನ ಮಾಡಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಪ್ರತಿಭಟನೆಯಲ್ಲಿ ಶ್ರೀಕೃಷ್ಣದೇವರಾಯ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ಪಂ.ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಸ್ವಾಮಿ, ನ್ಯಾಯವಾದಿ ಎಚ್.ಸಿ.ಯಾದವ, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಡಾ.ವೆಂಕಟೇಶ ಬಾಬು,ಗ್ರಾ.ಪಂ.ಮಾಜಿ ಸದಸ್ಯ. ಮಲ್ಲಿಕಾರ್ಜುನ ಸ್ವಾಮಿ,ಪದ್ಮನಾಭರಾಜು,ನರಸಿಂಹಲು, ಸಿ.ಎಚ್.ಪ್ರಸಾದ,ಪಿ.ಲಕ್ಷ್ಮಣ್ ನಾಯ್ಕ, ಸುಬ್ಬರಾವ್,
ನ್ಯಾಯವಾದಿ ಸಾಯಿಕುಮಾರ,ವಿರೇಶ ಹನುಮನಹಳ್ಳಿ, ವೆಂಕಾರೆಡ್ಡಿ,ಎನ್.ಚಂದ್ರಶೇಖರ ರೆಡ್ಡಿ, ಬೆಳೂರು ಮಲ್ಲಪ್ಪ,ನೀಲಪ್ಪ,ಮಂಜುನಾಥಗೌಡ,ಅಯ್ಯಪ್ಪ,ಸುಬ್ಬಾರಾವ್,ಅಂಬೀಗೆರ ಹನುಮಂತಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷೆ ದುರುಗಮ್ಮ, ತಾ.ಪಂ.ಮಾಜಿ ಸದಸ್ಯೆ ಸಕ್ರಿಬಾಯಿ,ಸುನೀಲ್ ನಾಯ್ಡು,ಗೋಪಿ,ರವಿ,ಲಕ್ಷ್ಮೀನಾರಾಯಣ, ಅಂಜನಾದೇವಿ ಸೇರಿದಂತೆ ಆನೆಗೊಂದಿ ಹಾಗೂ15 ಗ್ರಾಮಗಳ ನಿವಾಸಿಗಳಿದ್ದರು.